ಶನಿವಾರ, ಜುಲೈ 23, 2011

'ಪತ್ರಕರ್ತರ ಬಳಗದ' 20 ವರ್ಷಗಳು ಮತ್ತು `ದೇವು ಪತ್ತಾರ' ಅವರಿಗೆ ಪ್ರಶಸ್ತಿ'


     ಜುಲೈ 1 ರಂದು `ಕರ್ನಾಟಕ ಪತ್ರಿಕಾ ದಿನ'ವನ್ನಾಗಿ ಆಚರಿಸಲಾಗುತ್ತದೆ. ನವೆಂಬರ್ 16 ರಂದು `ರಾಷ್ಟ್ರೀಯ ಪತ್ರಿಕಾ
ದಿನ' ಮತ್ತು ಮೇ 6 ರಂದು `ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ'ವನ್ನಾಗಿಯೂ ಆಚರಿಸಲಾಗುತ್ತದೆ. ನಮ್ಮ ಭಾಗದಲ್ಲಿ ಜುಲೈ 1ರ ಪತ್ರಿಕಾ ದಿನಕ್ಕೆ ಬಹಳಷ್ಟು ಮಹತ್ವವಿದೆ. ಈ ನಿಮಿತ್ತವಾಗಿ ರಾಜ್ಯಾದ್ಯಂತ ಪತ್ರಕರ್ತರ ಸಂಘ, ಸಂಸ್ಥೆಗಳಿಂದ ಕಾರ್ಯಕ್ರಮಗಳು ನಡೆಯುತ್ತವೆ. ಅದರಂತೆ ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿಯೂ ಮೊದಲಿನಿಂದಲೂ   ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬರಲಾಗಿದೆ. ಆದರೆ ಕಳೆದ ಮೂರು ವರ್ಷಗಳಿಂದ 5 ಸಾವಿರ ರೂಪಾಯಿ ನಗದು ಒಳಗೊಂಡ `ಶಂಕರ ಪ್ರಸಾದ ದುಬೆ ವಿಭಾಗ ಮಟ್ಟದ ಉತ್ತಮ ಪತ್ರಕರ್ತರ ಪ್ರಶಸ್ತಿ' ಒಳಗೊಂಡು ಐದು ಪ್ರಶಸ್ತಿಗಳನ್ನು ಕೊಡುತ್ತಿರುವ ಕಾರಣ ಸಮಾರಂಭಕ್ಕೆ ಹೆಚ್ಚಿನ ಮಹತ್ವ ಪ್ರಾಪ್ತವಾಗಿದೆ.
     6 ನೇ ಜುಲೈ 2011 ರಂದು ಸಮಾರಂಭ ಹಮ್ಮಿಕೊಂಡು ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶೇಷವೆಂದರೆ ಇಲ್ಲಿನ ಪತ್ರಕರ್ತರ ಬಳಗ 1991 ರಲ್ಲಿ `ಭಾರತ ಕರ್ನಾಟಕ' ವಾಚನಾಲಯ ಆರಂಭಿಸುವ ಮೂಲಕ ತಮ್ಮ ಕಾರ್ಯಚಟುವಟಿಕೆಗಳಿಗೆ ನಾಂದಿ ಹಾಡಿತು ಎನ್ನಬಹುದು. ವಾಚನಾಲಯ ಸ್ಥಾಪಿಸಿ ಇಂದಿಗೆ 20 ವರ್ಷಗಳಾಗುತ್ತಿವೆ. ವಾಚನಾಲಯ ಎರಡು ವರ್ಷ ರಥ ಮೈದಾನದ ಹತ್ತಿರದಲ್ಲಿನ ಕಂಬಳಿ ಮಠದಲ್ಲಿ ಮತ್ತು ಎರಡು ವರ್ಷ ಆರ್ಯ ಸಮಾಜ ಭವನದಲ್ಲಿ ನಡೆದು ನಂತರ ಮುಚ್ಚಲ್ಪಟ್ಟಿತು. ಆದರೆ ಈ ವಾಚನಾಲಯ ಸ್ಥಾಪನೆಯ ಉದ್ದೇಶದಿಂದ ಇಲ್ಲಿನ ಪತ್ರಕರ್ತರೆಲ್ಲರೂ ಒಗ್ಗೂಡಿದರು. ಅಲ್ಲದೆ ಈ ವಾಚನಾಲಯವೇ ನಾನು (ಮಾಣಿಕ ಭುರೆ) ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಕಾರಣವಾಯಿತು ಎಂಬುದನ್ನು  ಹೇಗೆ ಮರೆಯಲಾದೀತು?
ಆಗ ಪಿಯುಸಿ ಓದುತ್ತಿದ್ದ ನಾನು ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದೆ. ಕೆಲ ಪತ್ರಿಕೆಗಳಲ್ಲಿ ಆಗಲೇ ನನ್ನ ಕವನ, ಲೇಖನಗಳು ಪ್ರಕಟ ಆಗಿದ್ದವು. ಹೀಗಾಗಿ ಇಲ್ಲಿನ ಪತ್ರಕರ್ತರ ಸಾಮೀಪ್ಯಕ್ಕೆ ಬಂದಿದ್ದೆ. ಪ್ರತಿದಿನ ಒಂದೆಡೆ ಸೇರುತಿದ್ದೇವು. ಆದ್ದರಿಂದ ವಾಚನಾಲಯ ನಡೆಸುವ ಜವಾಬ್ದಾರಿ ನನಗೆ ವಹಿಸಿಕೊಡಲಾಯಿತು. ಕೆಲ ದಿನಗಳಲ್ಲಿಯೇ ನಾನು  ಆಗ 8 ಪುಟಗಳಲ್ಲಿ  ಮುದ್ರಿತವಾಗಿ ಜಿಲ್ಲೆಯಲ್ಲಿ ಮನೆಮಾತಾಗಿದ್ದ `ಉತ್ತರ ಕರ್ನಾಟಕ' ದಿನ ಪತ್ರಿಕೆ ವರದಿಗಾರನಾಗಿಯೂ ನೇಮಕಗೊಂಡೆ. ನಂತರ ಗುಲ್ಬರ್ಗದ `ಜನಬೆಂಬಲ' ಪತ್ರಿಕೆ,  ಬೆಂಗಳೂರಿನ `ಬಿಸಿಲ ಬದುಕು' ಪತ್ರಿಕೆಯ ವರದಿಗಾರನಾಗಿಯೂ ಕೆಲಸ ನಿರ್ವಹಿಸಿದೆ. 1997ರಿಂದ ಪ್ರಜಾವಾಣಿಯ ತಾಲ್ಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.
     ಬಸವಕಲ್ಯಾಣದಲ್ಲಿ ಮೊದಲು ದಿ.ಶಂಕರಪ್ರಸಾದ ದುಬೆ, ದಿ.ಜಗದೇವಯ್ಯ ಸ್ವಾಮಿ, ದಿ.ಸಂಗಶೆಟ್ಟೆಪ್ಪ ಶಿವಣಕರ್, ದಾಂಡೇಕರ್, ಕಾಶಿನಾಥ ಅಂಬಲಗೆ ಅವರು ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರ ಗುರುನಾಥ ಗಡ್ಡೆ, ಧನರಾಜ ಫುಲಾರೆ, ಪೃಥ್ವಿರಾಜ ಜಾಧವ, ಸುರೇಂದ್ರಗಿರಿ ಗೋಸ್ವಾಮಿ, ಮಲ್ಲಿಕಾರ್ಜುನ್  ಕಾಡಾದಿ, ಕಾಳಿದಾಸ ಘಾಳೆ, ಮಾಣಿಕ ಭುರೆ, ಖಾಜಾ ಸರ್ತಾಜೊದ್ದೀನ್, ಶಶಿಕಾಂತ ದುಬೆ, ಶಿವಪುತ್ರ ಕಾಡಾದಿ ಪತ್ರಿಕಾ ಕ್ಷೇತ್ರದಲ್ಲಿ ಸಕ್ರಿಯರಾದರು. 
   ಹಿರಿಯರಾಗಿದ್ದ ಸಂಗಶೆಟ್ಟೆಪ್ಪ ಶಿವಣಕರ್ ಅವರ ಒತ್ತಾಸೆ, ಅನ್ಯ ಪತ್ರಕರ್ತರ ಆಸಕ್ತಿ ಮತ್ತು ಬಸವೇಶ್ವರ ದೇವಸ್ಥಾನ ಪಂಚ ಸಮಿತಿ ಸಹಯೋಗದಿಂದ 1991 ರಲ್ಲಿ `ಭಾರತ ಕರ್ನಾಟಕ' ವಾಚನಾಲಯ ಸ್ಥಾಪಿತವಾಯಿತು. ಮೊದಲು ದೊಡ್ಡ ಪತ್ರಿಕೆಗಳಲ್ಲಿ ಹೆಚ್ಚಿನ ಸುದ್ದಿಗಳು ಬರುತ್ತಿರಲಿಲ್ಲ. ಆದ್ದರಿಂದ ಜಿಲ್ಲಾಮಟ್ಟದ ಪತ್ರಿಕೆಗಳಿಗೆ ಬಹಳಷ್ಟು ಮಹತ್ವವಿತ್ತು. ಬಸವಕಲ್ಯಾಣದಿಂದಲೇ ಹೊರಡುತ್ತಿದ್ದ ಇಲ್ಲಿನ ಪ್ರಥಮ ಕನ್ನಡ ದಿನಪತ್ರಿಕೆ `ಬಹಿರಂಗ ಸುದ್ದಿ' ಪತ್ರಿಕೆ ಪ್ರತಿದಿನ ತಾಜಾ ಸುದ್ದಿಗಳನ್ನು ಕೊಡುತ್ತಿತ್ತು. ಸಂಪಾದಕರಾದ ಗುರುನಾಥ ಗಡ್ಡೆ ಅವರು `ರಾಜ ಪ್ರಿಂಟಿಂಗ್ ಪ್ರೇಸ್'ನಲ್ಲಿ ಮೊದಲು ವಾರಪತ್ರಿಕೆಯನ್ನಾಗಿ ನಂತರ ವೆಂಕಟೇಶ ಥೇಟರ್ ಎದುರಿನ ತಮ್ಮದೇಯಾದ ವಿಜಯಲಕ್ಷ್ಮಿ ಪ್ರಿಂಟರ್ಸ್  ನಲ್ಲಿ ದಿನಪತ್ರಿಕೆಯನ್ನಾಗಿ ಮುದ್ರಿಸಿದರು. ಈ ಪತ್ರಿಕೆಯಲ್ಲಿ ಅಚ್ಚುಮೊಳೆ ಜೋಡಿಸುವ ಕೆಲಸ ಹಾಗೂ ಸುದ್ದಿ ಬರೆದು ಪತ್ರಿಕೆ ಮುದ್ರಿಸುವ ಕೆಲಸವನ್ನೂ ನಾನು ಮಾಡಿದ್ದೇನೆ. ಈಚೆಗೆ ಬಸವಕಲ್ಯಾಣದಲ್ಲಿ ಪತ್ರಕರ್ತರ ಸಂಖ್ಯೆ ಬೆಳೆದಿದೆ. ಪತ್ರಿಕೆ ಓದುಗರ ಸಂಖ್ಯೆಯೂ ಹೆಚ್ಚಾಗಿದೆ.

ದೇವು ಪತ್ತಾರ ಅವರಿಗೆ `ಉತ್ತಮ ಪತ್ರಕರ್ತ ಪ್ರಶಸ್ತಿ'
ಜುಲೈ 6 ರಂದು ನಡೆದ ಸಮಾರಂಭದಲ್ಲಿ 2011 ನೇ ಸಾಲಿನ 'ಶಂಕರಪ್ರಸಾದ ದುಬೆ ವಿಭಾಗಮಟ್ಟದ ಉತ್ತಮ ಪತ್ರಕರ್ತ ಪ್ರಶಸ್ತಿ'ಯನ್ನು ಪ್ರಜಾವಾಣಿಯ ಬೀದರ ಜಿಲ್ಲಾ ವರದಿಗಾರರಾದ ದೇವು ಪತ್ತಾರ ಅವರಿಗೆ ಕೊಟ್ಟು ಸನ್ಮಾನಿಸಲಾಯಿತು. ಮುಚಳಂಬ ನಾಗಭೂಷಣ ಸಂಸ್ಥಾನ ಮಠದ ಪ್ರಣವಾನಂದ ಸ್ವಾಮೀಜಿ, ಶಾಸಕ ಬಸವರಾಜ ಪಾಟೀಲ ಅಟ್ಟೂರ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಾಳಪ್ಪ ಅಡಸಾರೆ, ಇತರೆ ಪದಾಧಿಕಾರಿಗಳಾದ ಆನಂದ ದೇವಪ್ಪ, ಸಿದ್ರಾಮಯ್ಯ ಸ್ವಾಮಿ, ಸರ್ಕಾರಿ  ಪದವಿ ಕಾಲೇಜಿನ ಉಪನ್ಯಾಸಕ ಡಾ.ಗವಿಸಿದ್ಧಪ್ಪ ಪಾಟೀಲ, ನಗರಸಭೆ ಅಧ್ಯಕ್ಷೆ ಮಂಗಲಾಬಾಯಿ ಉದ್ರೆ ಅವರ ಸಮ್ಮುಖದಲ್ಲಿ ಪ್ರಶಸ್ತಿ ಕೊಡಲಾಯಿತು.
ಬಸವಕಲ್ಯಾಣದ ರಾಜಪುತ ಗಲ್ಲಿಯ ನಿವಾಸಿಯಾಗಿದ್ದ ದಿ. ಶಂಕರಪ್ರಸಾದ ದುಬೆ ಸುಮಾರು 20 ವರ್ಷಗಳ ಹಿಂದೆ ಬೀದರ ಜಿಲ್ಲೆಯ ಪ್ರಸಿದ್ಧ ಹಿಂದಿ ದೈನಿಕ 'ಬೀದರ ಕೀ ಆವಾಜ್' ಪತ್ರಿಕೆಯ ವರದಿಗಾರರಾಗಿದ್ದರು. ಹೈದ್ರಾಬಾದ ಹಾಗೂ ಇತರೆಡೆಯ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ಅವರ ಸ್ಮರಣಾರ್ಥ ಪ್ರಶಸ್ತಿ ಕೊಡಲಾಗುತ್ತಿದೆ. ಅವರ ಮಕ್ಕಳಾದ ರಮಾಕಾಂತ ಮತ್ತು ಶಶಿಕಾಂತ ದುಬೆ ಅವರು ಪ್ರಶಸ್ತಿಯ ಪ್ರಾಯೋಜಕರಾಗಿದ್ದಾರೆ.
   ದುಬೆ ಅವರ ಹೆಸರಿನ ಪ್ರಶಸ್ತಿ ಪಡೆದಿರುವ ದೇವು ಪತ್ತಾರ ಅವರು ಅನೇಕ ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿದ್ದಾರೆ. ಗುಲ್ಬರ್ಗ ಜಿಲ್ಲೆಯ ಶಹಾಪುರದಲ್ಲಿ ಜನ್ಮಪಡೆದ ಇವರು ಈ ಮೊದಲು ಬೆಂಗಳೂರಿನಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ವಿವಿಧ ವಿಷಯಗಳ ಲೇಖನಗಳನ್ನು ಬರೆದಿದ್ದಾರೆ.
ಪತ್ತಾರರು ಸಾಹಿತ್ಯದಲ್ಲಿಯೂ ಗಮನಾರ್ಹ ಕೃಷಿ ಮಾಡಿದ್ದಾರೆ. 'ಈಗ ಹೀಗಿರುವ ಲೋಕದಲ್ಲಿ' 'ಕ್ಯಾಮೆರಾ ಎಂಜಿನಿಯರ್ ಮುಂತಾಕಾ' 'ಮಹಾದೇವಬಾಬಾ ಮೆಡೋಸ್ ಟೇಲರ್' ಎಂಬ ಇವರ ಕೃತಿಗಳು ಪ್ರಕಟವಾಗಿವೆ. ಈಚೆಗೆ ಇವರಿಗೆ ಸೇಡಂನಲ್ಲಿ ಹೈದ್ರಾಬಾದ ಕರ್ನಾಟಕ ಯುವ ಪತ್ರಕರ್ತರ ಪ್ರಶಸ್ತಿ ಕೊಡಲಾಗಿದೆ. ಭಾಲ್ಕಿ ಹಿರೇಮಠದಿಂದ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2010 ನೇ ಸಾಲಿನ ವಿಶೇಷ ಫೆಲೋಶಿಪ್ ದೊರೆತಿದೆ. ವಿವಿಧೆಡೆ ಉಪನ್ಯಾಸ ನೀಡಿದ್ದಾರೆ. ಉದಯೋನ್ಮುಖ ಪತ್ರಕರ್ತರಿಗೆ ಮಾರ್ಗದರ್ಶನ ಮಾಡಿದ್ದಾರೆ. ಇವರ ಈ ಅಮೂಲ್ಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ಕೊಡಲಾಗಿದೆ.
ಇದಲ್ಲದೆ, ಕಾರ್ಯಕ್ರಮದಲ್ಲಿ ಬೀದರನ 'ಕಾರಂಜಾ ಎಕ್ಸಪ್ರೆಸ್' ಪತ್ರಿಕೆ ಸಂಪಾದಕರಾದ ತಿಪ್ಪಣ್ಣ ಭೋಸ್ಲೆ ಅವರಿಗೆ 'ಜಿಲ್ಲಾ ಮಟ್ಟದ ಉತ್ತಮ ಸಂಪಾದಕರ ಪ್ರಶಸ್ತಿ' ಅಶೋಕಾ ಕೋಟೆ ಪತ್ರಿಕೆ ವರದಿಗಾರರಾದ ಸೋಮನಾಥ ಬಿರಾದಾರ ಅವರಿಗೆ 'ಜಿಲ್ಲಾಮಟ್ಟದ ಉತ್ತಮ ವರದಿಗಾರ ಪ್ರಶಸ್ತಿ ' ವಿಜಯ ಕರ್ನಾಟಕ ಪತ್ರಿಕೆ ತಾಲ್ಲೂಕು ವರದಿಗಾರ ಮಾರ್ತಂಡ ಜೋಶಿ ಅವರಿಗೆ 'ತಾಲ್ಲೂಕು     
 ಮಟ್ಟದ ಉತ್ತಮ ವರದಿಗಾರ ಪ್ರಶಸ್ತಿ' ಮತ್ತು ಬೀದರನ ಸಿಯಾಸತ್  ಉರ್ದು ಪತ್ರಿಕೆ        
 ವರದಿಗಾರ ಕೈಸರ್ ರೆಹಮಾನ ಅವರಿಗೆ 'ಕನ್ನಡೇತರ ಪತ್ರಿಕೆ ವರದಿಗಾರರ ಪ್ರಶಸ್ತಿ' 
 ಕೊಟ್ಟು ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತರಾದ ಧನರಾಜ ಫುಲಾರೆ ಅವರಿಗೆ    
 ಗೌರವ ಸನ್ಮಾನ ಮಾಡಲಾಯಿತು.
ಸಂಘದ ತಾಲ್ಲೂಕು ಅಧ್ಯಕ್ಷ ಗುರುನಾಥ ಗಡ್ಡೆ ಪ್ರಾಸ್ತಾವಿಕ ಭಾಷಣ ಮಾಡಿದರು. ಪತ್ರಕರ್ತ ವೀರಣ್ಣ ಮಂಠಾಳಕರ್ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿಕೊಟ್ಟರು. ಸಂಘದ ಕಾರ್ಯದರ್ಶಿ  ಕಲ್ಯಾಣರಾವ ಮದರಗಾಂವಕರ್ ಸ್ವಾಗತಿಸಿದರು. ಶಿವಯೋಗಿ ಸಿದ್ಧರಾಮೇಶ್ವರ ಕಾಲೇಜಿನ ಉಪನ್ಯಾಸಕ ಚನ್ನಬಸಪ್ಪ ಬಿರಾದಾರ ನಿರೂಪಿಸಿದರು. ಅಕ್ಕಮಹಾದೇವಿ ಕಾಲೇಜಿನ ಉಪನ್ಯಾಸಕ ಭೀಮಾಶಂಕರ (ಬಸವ)ಬಿರಾದಾರ ವಂದಿಸಿದರು. 
ಪತ್ರಕರ್ತರಾದ ಮುಕುಂದ ನಿಂಬಾಳಕರ್, ಶಿವಕುಮಾರ ಮಠಪತಿ, ನಾಗಪ್ಪ ನಿಣ್ಣೆ, ಉದಯಕುಮಾರ ಮುಳೆ, ಖಾಜಾ ಸರ್ತಾಜೊದ್ದೀನ್, ಸೂರ್ಯಕಾಂತ ಮದಕಟ್ಟಿ, ಶಾಂತಲಿಂಗ ಸ್ವಾಮಿ, ಮಲ್ಲಿಕಾರ್ಜುನ್  ಬಂಡೆ, ಡಿ.ಕೆ.ಪ್ರಹ್ಲಾದ್, ಪ್ರಭುಲಿಂಗಯ್ಯ ಟಂಕಸಾಲಿಮಠ, ಶಶಿಕಾಂತ ದುಬೆ, ನೈಮೊದ್ದೀನ್ ಚಾಬೂಕಸವಾರ, ಮಾಣಿಕ ಭುರೆ, ಮುಂತಾದವರು ಪಾಲ್ಗೊಂಡಿದ್ದರು.
2009 ನೇ ಸಾಲಿನಲ್ಲಿ `ಶಂಕರ ಪ್ರಸಾದ ದುಬೆ ವಿಭಾಗಮಟ್ಟದ ಉತ್ತಮ ಪತ್ರಕರ್ತರ ಪ್ರಶಸ್ತಿ'ಯನ್ನು  ಸಂಯುಕ್ತ ಕರ್ನಾಟಕ ಪತ್ರಿಕೆ ಗುಲ್ಬರ್ಗ ಆವೃತ್ತಿ ಸಂಪಾದಕರಾದ ಎಸ್.ಆರ್.ಮಣೂರ್ ಅವರಿಗೆ ಕೊಡಲಾಗಿದೆ. 2010 ನೇ ಸಾಲಿನ ಪ್ರಶಸ್ತಿಯನ್ನು ವಿಜಯಕರ್ನಾಟಕ ಪತ್ರಿಕೆ ಗುಲ್ಬರ್ಗ ಆವೃತ್ತಿ ಸಂಪಾದಕರಾದ ವಾದಿರಾಜ ವ್ಯಾಸಮುದ್ರ ಅವರಿಗೆ ಪ್ರದಾನ ಮಾಡಲಾಗಿದೆ.
 ಬೀದರ ಪತ್ರಕರ್ತರ ಹಳೆಯ ಫೋಟೊಗಳು....!?
ಬೀದರನಲ್ಲಿದಷ್ಟು ಸ್ಥಳೀಯ ಪತ್ರಿಕೆಗಳು ಬೇರೆ ಜಿಲ್ಲಾ ಕೇಂದ್ರಗಳಲ್ಲಿ ಇಲ್ಲ ಎನ್ನಲಾಗುತ್ತದೆ. ಆದ್ದರಿಂದ ಇಲ್ಲಿ ಪತ್ರಕರ್ತರ, ಸಂಪಾದಕರ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ 20 ವರ್ಷಗಳಲ್ಲಿ ಪತ್ರಿಕಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂದು ರಾಜ್ಯಮಟ್ಟದ ಪತ್ರಿಕೆಗಳು ಗ್ರಾಮೀಣಭಾಗದ ಸುದ್ದಿಗಳಿಗೆ ಹೆಚ್ಚಾಗಿ ಪ್ರಕಟಿಸುತ್ತಿರುವ ಕಾರಣ ಸ್ಥಳೀಯ ಪತ್ರಿಕೆಗಳ ಮಹತ್ವ ಕಡಿಮೆಯಾಗಿದೆ. ಅಲ್ಲದೆ ಪತ್ರಿಕೆಯ ದರ ಸಮರದಲ್ಲಿ ಇವು ನೆಲೆ ನಿಲ್ಲದಂತಾಗಿವೆ. ಆದರೂ ಲಾಭ ಹಾನಿಯ ಲೆಕ್ಕ ಹಾಕದೆ ಅವುಗಳನ್ನು ಪ್ರಕಟಿಸಲಾಗುತ್ತಿದೆ. ಹೇಗೋ ಅವು ಜೀವ ಹಿಡಿದುಕೊಂಡಿವೆ ಎನ್ನಬಹುದು. 
   'ಉತ್ತರ ಕರ್ನಾಟಕ' 'ಬೀದರ ಕೀ ಆವಾಜ್' 'ದಮನ' 'ಬೀದರ ಸಂದೇಶ' 'ಪಬ್ಲಿಕ್' 'ಬೀದರ ರಹಸ್ಯ' 'ಜನಪರ' 'ಜನದನಿ' 'ವಚನ ಕ್ರಾಂತಿ' 'ಕಾರಂಜಾ ಎಕ್ಸಪ್ರೆಸ್'  'ಅಶೋಕಾ ಕೋಟೆ' 'ಪರಿಹಾರ' 'ಯುವರಂಗ' 'ಬೀದರ ಕ್ರಾಂತಿ' 'ಸುರ್ಕ ಜಮೀನ' `ಅಂತರಂಗ ಸುದ್ದಿ' 'ಸೀಮಾ ವಾರ್ತಾ ' 'ಹೈದ್ರಾಬಾದ್ ಕರ್ನಾಟಕ' `ಆದಿತ್ಯ' ಮುಂತಾದ ಪತ್ರಿಕೆಗಳನ್ನು ಅನೇಕ ವರ್ಷಗಳಿಂದ ಪ್ರಕಟಿಸಲಾಗುತ್ತಿದೆ.
ಈ ಪತ್ರಿಕೆಗಳ ಸಂಪಾದಕರ ಮತ್ತು ವರದಿಗಾರರ ಕೆಲ ವರ್ಷಗಳ ಹಿಂದಿನ ಫೋಟೊಗಳನ್ನು ಇಲ್ಲಿ ಕೊಡಲಾಗಿದೆ. ಫೋಟೊದಲ್ಲಿ 14 ವರ್ಷಗಳ ಹಿಂದೆ ಪ್ರಜಾವಾಣಿ ಜಿಲ್ಲಾ ವರದಿಗಾರರಾಗಿದ್ದ ಅರುಣಕುಮಾರ ಹಬ್ಬು, ಸಂಯುಕ್ತ ಕರ್ನಾಟಕ ಪತ್ರಿಕೆ ವರದಿಗಾರರಾಗಿದ್ದ ರಾಜಾರಾವ, ಈಗ ಎಂಎಲ್ಸಿ ಆಗಿರುವ ಬೀದರ ಕೀ ಆವಾಜ್ ಪತ್ರಿಕೆಯ ಸಂಪಾದಕ ಕಾಜಿ ಅರ್ಷದ್ ಅಲಿ, ಉತ್ತರ ಕರ್ನಾಟಕ ಪತ್ರಿಕೆ ಸಂಪಾದಕ ಶಿವಶರಣಪ್ಪ ವಾಲಿ, ಕಾರಂಜಾ ಎಕ್ಸಪ್ರೆಸ್ ಪತ್ರಿಕೆ ಸಂಪಾದಕ ತಿಪ್ಪಣ್ಣ ಭೋಸ್ಲೆ, ಬೀದರ ರಹಸ್ಯ ಪತ್ರಿಕೆ ಸಂಪಾದಕ ಡಿ.ಕೆ.ಸಿದ್ರಾಮ, ವಚನಕ್ರಾಂತಿ ಪತ್ರಿಕೆ ಸಂಪಾದಕ ಬಾಬು ವಾಲಿ, ಇತರರಾದ ಕಮಲಾಕರ ಜೋಶಿ, ಗಂಧರ್ವಸೇನಾ, ಮಲ್ಲಿಕಾರ್ಜುನ್ ಸ್ವಾಮಿ, ಮಲ್ಲಿಕಾರ್ಜುನ್  ಬಿರಾದಾರ, ಮಾರುತಿ ಬಾವಿದೊಡ್ಡಿ, ನಾಗಶೆಟ್ಟಿ ಧರ್ಮಪೂರ, ಸೋಮನಾಥ ಬಿರಾದಾರ, ವೀರಶೆಟ್ಟಿ ಕುಂಬಾರ, ವಿಜಯಕುಮಾರ ಪರ್ಮಾ, ಶಿವಕುಮಾರ ಡಾಕುಳಗಿ ಮುಂತಾದವರನ್ನು ಫೋಟೊಗಳಲ್ಲಿ ಕಾಣಬಹುದು.
                                        ----------------------

ಶುಕ್ರವಾರ, ಜುಲೈ 22, 2011

'ದಲಿತ ಪೀಠಾಧಿಪತಿ' ಕೃತಿಗೆ ಕಸಾಪ ಪ್ರಶಸ್ತಿ




     ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನ 
2011 ನೇ ಸಾಲಿನ 'ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ' 
ನನ್ನ (ಮಾಣಿಕ ಆರ್.ಭುರೆ) 2010 ರಲ್ಲಿ 
ಪ್ರಕಟವಾದ 
(ಪ್ರಕಾಶಕರು- ಶರಣ ಉರಿಲಿಂಗಪೆದ್ದಿ ಮಠ ಟ್ರಸ್ಟ್ ಬೇಲೂರು) 
ಕೃತಿ `ದಲಿತ ಪೀಠಾಧಿಪತಿ'ಗೆ ದೊರೆತಿರುವುದು 
ನನಗೆ ಅತೀವ ಸಂತಸ ತಂದ ವಿಷಯ.
 28 ನೇ ಏಪ್ರಿಲ್ 2011 ರಂದು 
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ 
ಶ್ರೀಕೃಷ್ಣರಾಜ ಭವನದಲ್ಲಿ 
ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.      
     ಹೆಸರಾಂತ ಕವಿ ಬಿ.ಆರ್.ಲಕ್ಷ್ಮಣರಾವ 
ಸಮಾರಂಭ ಉದ್ಘಾಟಿಸಿದರು.
ಜಯನಗರ ಕ್ಷೇತ್ರದ ಶಾಸಕ ವಿಜಯಕುಮಾರ, 
ರಾಜ್ಯ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ 
ವೈ.ಕೆ.ಮುದ್ದುಕೃಷ್ಣ, 
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ 
ಡಾ.ನಲ್ಲೂರುಪ್ರಸಾದ, 
ಗೌರವ ಕೋಶಾಧ್ಯಕ್ಷ ಪುಂಡಲೀಕ್ ಹಾಲಂಬಿ, 
ಗೌರವ ಕಾರ್ಯದರ್ಶಿ ಪ್ರೊ.ಎಚ್.ಕೆ.ಮಳಲಿಗೌಡ, ಸಂಗಮೇಶ ಬಾದವಾಡಗಿ ಪಾಲ್ಗೊಂಡಿದ್ದರು.
  
 ಈ ಸಂದರ್ಭದಲ್ಲಿ ನನ್ನನ್ನೊಳಗೊಂಡು 31 ಜನರಿಗೆ 
ವಿವಿಧ ದತ್ತಿ ಪ್ರಶಸ್ತಿಗಳನ್ನು ಕೊಟ್ಟು ಸನ್ಮಾನಿಸಲಾಯಿತು. ಪ್ರಶಸ್ತಿಯ ಹೆಸರು, ಕೃತಿ ಮತ್ತು ಪಡೆದವರ ಹೆಸರುಗಳು ಮುಂದಿನಂತಿವೆ.


1) ಮಲ್ಲಿಕಾ ಪ್ರಶಸ್ತಿ ದತ್ತಿ (ನಾನೇನೂ ಅಲ್ಲ) 
    -ಕುಲಶೇಖರಿ
2) ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ (ಯೋಗಕ್ಷೇಮ) 
    - ಡಾ.ಕೆ.ಎಸ್.ಚೈತ್ರಾ
3) ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ (ಜಲದ ಮಂಟಪದ ಮೇಲೆ)
    - ಜ್ಯೋತಿ ಬಿ.ಕುಲಕರಣಿ
4) ಲಲಿತಾದೇವಿ ಗುರುಸಿದ್ಧಪ್ಪ ಸಿಂಧೂರ ದತ್ತಿ (ಪ್ರೇಮ ಸಿಂಚನ)
    -ಲತಾ ಶ್ರೀಧರ
5) ನೀಲಗಂಗಾ ದತ್ತಿ ಪ್ರಶಸ್ತಿ (ಕವಿತೆ ಬರೆಯಲೆ ನಾನು) 
    - ಶಾರದಾ ವಿ.ಮೂರ್ತಿ
6) ಶ್ರೀಮತಿ ಕೆ.ಎಸ್.ಭಾರತಿ ರಾಜಾರಾಮ ಮಧ್ಯಸ್ಥ ದತ್ತಿ (ಕಥೆಯಲ್ಲ ಬದುಕು) 
    - ಯಶೋಧ ಚೆನ್ನಿ
7) ಶಾರದಾ ಆರ್.ರಾವ ದತ್ತಿ (ಮನ -ಮನನ) 
     - ಡಾ.ಕೆ.ಎಸ್.ಪವಿತ್ರ
8) ಗೌರಮ್ಮ ಹಾರ್ನಳ್ಳಿ ಕೆ.ಮಂಜಪ್ಪ ದತ್ತಿ ಪ್ರಶಸ್ತಿ (ಅವಲೋಕನ) 
    -ರತ್ನಶೀಲಾ ಗುರಡ್ಡಿ
9) ಎಚ್.ಕರಿಯಣ್ಣ ದತ್ತಿ ಪ್ರಶಸ್ತಿ (ಎಷ್ಟು ಬಣ್ಣ ಇರುಳು) 
     -ಮುದ್ದು ತೀರ್ಥಹಳ್ಳಿ
10) ಡಾ.ಎಚ್.ನರಸಿಂಹಯ್ಯ ದತ್ತಿ ಪ್ರಶಸ್ತಿ (ಇದೂ ಸಾಧ್ಯ) 
     -ಹುಲಿಕಲ್ ನಟರಾಜ್
11) ಅಸುಂಡಿ ಹುದ್ದಾರ ಕೃಷ್ಣರಾವ ಸ್ಮಾರಕ ದತ್ತಿ ಪ್ರಶಸ್ತಿ (ದಾಸ ಸಾಹಿತ್ಯ ಭಾಷೆ)
     -ಡಾ.ಎಸ್.ಎಸ್.ಅಂಗಡಿ
12) ಜಿ.ಪಿ.ರಾಜರತ್ನಂ ಸಂಸ್ಮರಣ ದತ್ತಿ ಪ್ರಶಸ್ತಿ (ಮಕ್ಕಳಿಗಾಗಿ ನೀತಿಕತೆಗಳು)
      -ಪ.ರಾಮಕೃಷ್ಣಶಾಸ್ತ್ರೀ
13) ಶ್ರೀಮತಿ ಕೆ.ವಿ.ರತ್ನಮ್ಮ ದತ್ತಿ ಪ್ರಶಸ್ತಿ (ಕಾವ್ಯಸುಧೆ)  
     -ಸುಧಾ ಭ.ಮರಿಗೌಡ್ರ
14) ರತ್ನಾಕರವರ್ಣಿ ಮುದ್ದಣ್ಣ ಅನಾಮಿಕ ದತ್ತಿ -ಗದ್ಯಕೃತಿ(ಇಸ್ಲಾಮಿನ ಇತಿಹಾಸ) 
      -ಪಿ.ಕೆ.ಶಂಷುದ್ದೀನ್
15) ರತ್ನಾಕರವರ್ಣಿ ಮುದ್ದಣ್ಣ ಅನಾಮಿಕ ದತ್ತಿ -ಪದ್ಯಕೃತಿ(ಹಾರಯಿಕೆ)
      - ವಸಂತ ಕುಷ್ಟಗಿ
16) ಪಿ.ಶಾಂತಿಲಾಲ ದತ್ತಿ ಪ್ರಶಸ್ತಿ(ಜಿನದನಿ) 
     -ಡಿ.ಎನ್.ಅಕ್ಕಿ
17) ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ ಪ್ರಶಸ್ತಿ (ಹೊನ್ನ ಬಿತ್ಯಾರ ಹೊಲಿಸಾಲ)
      -ಬಸವರಾಜ ಆಕಳವಾಡಿ
18) ಶ್ರೀಮತಿ ಜಯಲಕ್ಷ್ಮಮ್ಮ ಬಿ.ಎಸ್.ಸಣ್ಣಯ್ಯ ದತ್ತಿ ಪ್ರಶಸ್ತಿ(ಪುರಾಣ ಪುರುಷ ರತ್ನಗಳು)
     -ವಿಜಯಾ ಸುಬ್ರಹ್ಮಣ್ಯ
19) ಕುಂಬಾಸ ದತ್ತಿ ಪ್ರಶಸ್ತಿ(ನಗೆ ನಗಾರಿ)
      -ಜೀಜೀ(ಗಣೇಶ ಪ್ರಸಾದ)
20) ಪ್ರೊ.ಡಿ.ಸಿ.ಅನಂತಸ್ವಾಮಿ ಸಂಸ್ಮರಣ ದತ್ತಿ ಪ್ರಶಸ್ತಿ(ಕದಡದಿರಿ ತಿಳಿನೀರ ಕೊಡ)
      -ಡಾ.ವಿ.ಬಿ.ರಡ್ಡೇರ್
21) ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ(ದಲಿತ ಪೀಠಾಧಿಪತಿ) 
      -ಮಾಣಿಕ ಆರ್.ಭುರೆ
22) ಸಿಸು ಸಂಗಮೇಶ ದತ್ತಿ ಪ್ರಶಸ್ತಿ(ಹಲೋ ಹಲೋ ಚಂದಮಾಮ) 
      -ರಾಧೇಶ ತೋಲ್ಪಾಡಿ
23) ಪಂಪಮ್ಮ ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿ(ಬಾಳು ಬೆಳಗಿದವರು) 
      -ಶರಣಪ್ಪ ಗುಡದಿನ್ನಿ
24) ಕೆ.ಎಸ್.ವಾಸುದೇವಾಚಾರ್ ದತ್ತಿ (ಕಾಲುದಾರ
       - ದವನ ಸೊರಬ
25) ಡಾ.ಆರ್.ಜೆ.ಗಲಗಲಿ ದತ್ತಿ ಪ್ರಶಸ್ತಿ(ಬಣ್ಣದ ಚಿಟ್ಟೆ) 
      -ಆರ್.ಎಸ್.ಚಾಪಗಾವಿ
26) ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ.ಮದನಕೇಸರಿ 
      ಜೈನ್ ದತ್ತಿ( ನಿಕಷ-1) -ಡಾ.ಎಸ್.ಪಿ.ಪದ್ಮಪ್ರಸಾದ
27) ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ- ಕಾದಂಬರಿ(ನಮ್ಮೂರ ಓಣಿಯ) 
      -ಬಶೀರ ಅಹ್ಮದ್
28)   "   ಕಾದಂಬರಿ (ಹೃದಯದ ಸದ್ದುಗಳು) 
       -ಹೊಸಮನಿ
29)   "  ಸಣ್ಣಕತೆ (ಪ್ರಕೃತಿಯ ನೆರಳಲ್ಲಿ) 
       -ಹೊನ್ನಶೆಟ್ಟಿಹಳ್ಳಿ ಗಿರಿರಾಜ್
30)   "  ಮಕ್ಕಳ ಸಾಹಿತ್ಯ (ಚಿಂಪಿ) 
        -ಮುಮ್ತಾಜ್ ಬೆಗಂ
31)   "  ಅನುವಾದಿತ/ವೈಚಾರಿಕ ಕೃತಿ (ಮಂತಣ) 
        -ಡಾ.ಅರ್ಜುನಪುರಿ  ಅಪ್ಪಾಜಿಗೌಡ್
         -------------------------------------------
 'ದಲಿತ ಪೀಠಾಧಿಪತಿ' ಪುಸ್ತಕದ ಬಗ್ಗೆ ಡಾ.ಜಿ.ಬಿ.ವಿಸಾಜಿ ಅಭಿಪ್ರಾಯ


      `ದಲಿತ ಪೀಠಾಧಿಪತಿ' ಕೃತಿಯ ಬಗ್ಗೆ ಬೀದರ ಜಿಲ್ಲೆಯ ಹಿರಿಯ ಸಾಹಿತಿಗಳು, 
ನಿವೃತ್ತ ಉಪನ್ಯಾಸಕರಾದ ಡಾ.ಜಿ.ಬಿ.ವಿಸಾಜಿ ಅವರು ಪತ್ರ ಬರೆದು 
ತಿಳಿಸಿದ ಅಭಿಪ್ರಾಯ ಹೀಗಿದೆ.....
                                                    ಭಾಲ್ಕಿ
                                                  16-7-2011
   ` ಆತ್ಮೀಯರೆ, ತಾವು ಪ್ರೀತಿಯಿಂದ ಕೊಟ್ಟ `ದಲಿತ ಪೀಠಾಧಿಪತಿ' 
ಪುಸ್ತಕ ಓದಿ ಮುಗಿಸಿದೆ. 
ಪೂಜ್ಯ ಪಂಚಾಕ್ಷರಿ ಸ್ವಾಮಿ ಪರಿಚಯವಷ್ಟೇ ಇರಬಹುದೆಂದು 
ತಿಳಿದಿದ್ದೆ. ಆದರೆ 1) ಶೂದ್ರವರ್ಣದ ಬಗ್ಗೆ ಸತ್ಯಾನ್ವೇಷಣೆ 
2)ಜನರೆಡೆಗೆ ದೇವರು 3)ಸತ್ಯಶೋಧಕ ಸಮಾಜ 4)ಬಸವಯುಗ
 5) ದಲಿತ ಪೀಠಾಧಿಪತಿ 6)ಬೇಲೂರು, ಉರಿಲಿಂಗಪೆದ್ದಿ 
ಸಂಬಂಧ ಮತ್ತು ಪರಂಪರೆ 
7) ಬಸವಕಲ್ಯಾಣದ ಶರಣ ಸ್ಥಳಗಳು ಮತ್ತು ಅಭಿವೃದ್ಧಿ 
8) ಗ್ರಂಥಋಣ 9) ಚಿತ್ರಗಳು ಪುಸ್ತಕದ ಘನತೆಯನ್ನು ಹೆಚ್ಚಿಸಿವೆ. 
ಎಲ್ಲಿಯೂ ಸ್ವಹಿತಾಸಕ್ತಿಯಾಗಲಿ, 
ಪೂರ್ವಾಗ್ರಹಪೀಡಿತತನವಾಗಲಿ ಕಾಣಲಿಲ್ಲ. 
ಬರವಣಿಗೆಯಲ್ಲಿ ಖಚಿತತೆ, ನಿಖರತೆ, ಪ್ರಾಮಾಣಿಕತೆ 
ನಿಚ್ಚಳವಾಗಿ ಕಾಣುತ್ತದೆ. 
ಇದಕ್ಕೂ ಹಿರಿದಾದ ಪುಸ್ತಕ ರಚನೆಗೆ ಸಿದ್ಧರಾಗಿ 
ನಮ್ಮ ಸಂತೋಷವನ್ನು ಹೆಚ್ಚಿಸಿರಿ. 
ವಂದನೆಗಳು.
                                     ತಮ್ಮ ವಿಶ್ವಾಸಿ
                                     ಜಿ.ಬಿ.ವಿಸಾಜಿ
                              ------------ -------------

ಪ್ರಶಸ್ತಿ ಬಂದಿದಕ್ಕಾಗಿ ಸಂಘಟನೆಗಳ ಒಕ್ಕೂಟದಿಂದ ಸನ್ಮಾನ
  
     2ನೇ ಮೇ 2011 ರಂದು ಬಸವಕಲ್ಯಾಣದ ಕಲ್ಯಾಣ ಮಂಟಪದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಮೂವರು ಹಿರಿಯರ ಜತೆ `ದಲಿತ ಪೀಠಾಧಿಪತಿ' ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ ಬಂದಿದಕ್ಕಾಗಿ ನನ್ನನ್ನು(ಮಾಣಿಕ ಭುರೆ) ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಸವಕಲ್ಯಾಣದ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಸ ರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ನಾಗೇಂದ್ರ ಢೋಲೆ ಅವರ 
ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
    ರಾಜ್ಯ ಸರಕಾರದ `ಡಾ.ಬಿ.ಆರ್.ಅಂಬೇಡ್ಕರ ಪ್ರಶಸ್ತಿ' ಪುರಸ್ಕೃತರಾದ ಪ್ರಸಿದ್ಧ ನ್ಯಾಯವಾದಿ ತಾತೇರಾವ ಕಾಂಬಳೆ, `ಡಾ.ಬಾಬು ಜಗಜೀವನರಾಮ ಪ್ರಶಸ್ತಿ' 
ಪಡೆದ ಮಾಜಿ ವಿಧಾನ ಪರಿಷತ್  ಸದಸ್ಯ ಮಾರುತಿರಾವ ಡಿ.ಮಾಲೆ, 11 ನೇ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಪತ್ರಕರ್ತ ಶಿವಶರಣಪ್ಪ ವಾಲಿ ಅವರು ಇತರೆ ಸನ್ಮಾನಿತರಾಗಿದ್ದಾರೆ.
     ಕೌಠಾ ಬಸವಯೋಗಾಶ್ರಮದ ಬೆಲ್ದಾಳ ಸಿದ್ಧರಾಮ ಶರಣರು ನೇತೃತ್ವ ವಹಿಸಿದ್ದರು. ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಂಚಾಕ್ಷರಿ ಹಿರೇಮಠ, ಧರಿನಾಡು ಕನ್ನಡ ಸಂಘದ ಅಧ್ಯಕ್ಷ ಜೈಶೇನ ಪ್ರಸಾದ, ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಹೆಬ್ಬಾಳಕರ್, ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಾಂತಲಿಂಗ ಮಠಪತಿ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮಂಠಾಳಕರ್, ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸಿಂಧೆ, ಕರ್ನಾಟಕ ರಕ್ಷಣಾ ವೇದಿಕೆ ಸಂಚಾಲಕ ಧನರಾಜ ರಾಜೋಳೆ, ಕಲ್ಯಾಣ ಕನ್ನಡ ಸಂಘದ ಅಧ್ಯಕ್ಷ ನಾಗೇಂದ್ರ ಬಿರಾದಾರ, ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ದಶವಂತ ಬಂಡೆ, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಿತ್ರಶೇಖರ ಚಿರಳ್ಳಿ, ಸಂಗೀತ ಕಲಾ ಪರಿಷತ್ತಿನ ಅಧ್ಯಕ್ಷ ಶೇಷಪ್ಪ ಗಬ್ಬೂರ್ ಉಪಸ್ಥಿತರಿದ್ದರು.
    ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿದರು. ಉಪನ್ಯಾಸಕಿ ಶಿವಲೀಲಾ ಮಠಪತಿ ನಿರೂಪಿಸಿದರು. ಬರಹಗಾರರ ಸಂಘದ ಅಧ್ಯಕ್ಷ ಭೀಮಾಶಂಕರ (ಬಸವ) ಬಿರಾದಾರ ವಂದಿಸಿದರು.
                          ------------------  


ಗುರುವಾರ, ಜುಲೈ 21, 2011

ಪುಸ್ತಕಗಳ ಮುಖಪುಟ ವಿನ್ಯಾಸ...




     ಕಂಪ್ಯೂಟರಗಳು 
    ಬಂದಮೇಲೆ  
    ಚಿತ್ರಕಲಾವಿದರು 
     ಪುಸ್ತಕಗಳ 
     ಮುಖಪುಟ 
     ರಚಿಸುವುದು ತಪ್ಪಿದೆ.
     ಚಿತ್ರಕಲೆ ಕಲಿಯದ 
      ನನ್ನಂಥವರು 
     ಸಹ ಕಂಪ್ಯೂಟರನ
      ಕೀಲಿಮಣಿ ಮತ್ತು 
     ಮೌಸ್ ಬಳಸಿ 
     `ಫೋಟೊಶಾಪ್'ನಲ್ಲಿ 
     ಮುಖಪುಟ
     ವಿನ್ಯಾಸ ಮಾಡುವುದು 
       ಸಾಧ್ಯವಾಗಿದೆ. 
    ಹಾಗೆ ನೋಡಿದರೆ 
     ಪುಸ್ತಕದಲ್ಲಿನ ವಿಷಯ, 
      ಕೃತಿಕಾರನ ಆಶಯಕ್ಕೆ 
      ತಕ್ಕಂತೆ 
      ಮುಖಪುಟ ರಚಿಸುವುದು 
     ಕಷ್ಟಸಾಧ್ಯ 
     ಕೆಲಸವೇ ಆಗಿದೆ. 
      ಆದರೂ ನಾನು 
      ರಚಿಸಿಕೊಟ್ಟ 
     ಮುಖಪುಟ ಮತ್ತು 
     ಹಿಂಬದಿಪುಟವನ್ನು  
      ಮಿತ್ರರಾದ 
    ವೀರಣ್ಣ ಮಂಠಾಳಕರ್ 
    ಹಾಗೂ ಕವಯತ್ರಿ 
    ಮಲ್ಲೇಶ್ವರಿ ಉದಯಗಿರಿ 
    ಅವರು ತಮ್ಮ ಪುಸ್ತಕಗಳಿಗೆ 
     ಅಳವಡಿಸಿ ಮುದ್ರಿಸಿದ್ದಾರೆ.
    ನಾನು ರಚಿಸಿಕೊಟ್ಟ 
     ವೀರಣ್ಣ ಮಂಠಾಳಕರ್ 
    ಅವರ  6 ನೇ ಕೃತಿ 
    `ಬದುಕಿನ ಬೆನ್ನೇರಿ' 
      ಕಥಾ ಸಂಕಲನ 
         ಮತ್ತು 
    ಮಲ್ಲೇಶ್ವರಿ ಉದಯಗಿರಿ ಅವರ 
     3 ನೇ ಕವನ ಸಂಕಲನ 
         `ಭಾವಂಕರ್ಷ'ದ 
      ಮುಖಪುಟ ಮತ್ತು 
     ಬೆನ್ನುಪುಟದ ಚಿತ್ರ ಇಲ್ಲಿ 
       ಕೊಡಲಾಗಿದೆ.
    ಉದಯಗಿರಿ ಅವರ 
      ಪುಸ್ತಕದ ಬೆನ್ನುಡಿ 
      ಸಹ  ನಾನು ಬರೆದಿದ್ದೇನೆ.
  ಈ ಎರಡೂ ಪುಸ್ತಕಗಳನ್ನು 
    2011ನೇ ಸಾಲಿನ 
       ಫೆಬ್ರುವರಿಯಲ್ಲಿ 
     ಬಸವಕಲ್ಯಾಣ ತಾಲ್ಲೂಕಿನ 
     ಬೇಲೂರನಲ್ಲಿ ನಡೆದ 
   ಉರಿಲಿಂಗಪೆದ್ದಿ ಉತ್ಸವದಲ್ಲಿ 
     ಬಿಡುಗಡೆ 
     ಮಾಡಲಾಯಿತು. 
     ಉರಿಲಿಂಗಪೆದ್ದಿ ಮಠ ಟ್ರಸ್ಟ್ ನಿಂದ 
     ಇವನ್ನು ಪ್ರಕಟಿಸಲಾಗಿದೆ. 
      ಪುಸ್ತಕ ಬಿಡುಗಡೆ 
       ಸಮಾರಂಭದಲ್ಲಿ 
       ಭಾಲ್ಕಿಯ 
    ಬಸವಲಿಂಗ ಪಟ್ಟದ್ದೇವರು, 
        ಬೇಲೂರ 
     ಪಂಚಾಕ್ಷರಿ ಉರಿಲಿಂಗಪೆದ್ದಿ ಸ್ವಾಮೀಜಿ, 
      ಬಸವಕಲ್ಯಾಣದ 
      ಸರಕಾರಿ  ಪದವಿ ಕಾಲೇಜಿನ 
     ಪ್ರಾಚಾರ್ಯ ನಾಗೇಂದ್ರ ಢೋಲೆ, 
     ಮಹಾಂತೇಶ ನವಲಕಲ್, 
     ನಗರಸಭೆ ಸದಸ್ಯ 
      ಸೂರ್ಯಕಾಂತ ಚಿಲ್ಲಾಬಟ್ಟೆ 
     ಮುಂತಾದವರು 
       ಉಪಸ್ಥಿತರಿದ್ದರು.
    ಈ ಸಂದರ್ಭದಲ್ಲಿ  
       ವೀರಣ್ಣ ಮಂಠಾಳಕರ್ 
    ಹಾಗೂ ಮಲ್ಲೇಶ್ವರಿ ಉದಯಗಿರಿ 
     ಅವರನ್ನು 
      ಸನ್ಮಾನಪತ್ರ ಕೊಟ್ಟು 
       ಸತ್ಕರಿಸಲಾಯಿತು.
      ವಿಜಯಲಕ್ಷ್ಮಿ ಗಡ್ಡೆ ಅವರ
      `ಉರಿಲಿಂಗಪೆದ್ದಿ ವಚನಗಳ 
          ಅಂತರಂಗ' 
       ಪುಸ್ತಕಕ್ಕೆ ಮತ್ತು 
        ಕಥೆಗಾರ 
      ಮಹಾಂತೇಶ  ನವಲಕಲ್ ಅವರ
       'ಉರಿಲಿಂಗ ದೇವರು, 
        ಉರಿಲಿಂಗ ಪೆದ್ದಿ 
       ಮತ್ತು ಕಾಳವ್ವೆ 
       ವಚನಗಳ ಸಂಗ್ರಹ' 
     ಪುಸ್ತಕಕ್ಕೆ ನಾನು ರಚಿಸಿದ 
       ಮುಖಪುಟ ಸಹ 
      ಇಲ್ಲಿ  ಕೊಟ್ಟಿದ್ದೇನೆ. 
     ಈ ಎರಡೂ 
        ಪುಸ್ತಕಗಳು ಇನ್ನೂ 
     (ಜುಲೈ 2011 ರವರೆಗೆ) 
      ಪ್ರಕಟವಾಗಿಲ್ಲ. 
      ಇದಲ್ಲದೆ ನಾನು 
       ಸಿದ್ಧಪಡಿಸಿದ 
       ಪ್ರಶಸ್ತಿ ಪತ್ರದ 
        ನಮೂನೆಯನ್ನು 
       ಸಹ ಇಲ್ಲಿ 
       ಕೊಟ್ಟಿದ್ದೇನೆ.

ಶುಕ್ರವಾರ, ಅಕ್ಟೋಬರ್ 15, 2010

ನಿಜಸ್ಥಿತಿ ವಿಚಾರಿಸಲಿಲ್ಲ ..!!



ಪುಸ್ತಕ ಭಾರ ಹೆಚ್ಚಿತು
ಹಳೆಯ ಪಾಟಿಚೀಲ ಹರಿಯಿತು.
ಅಪ್ಪ ಅವ್ವನ ಕಷ್ಟ ನೋಡಿ 
ಹೊಸ ಚೀಲ ಬೇಡಲು 
ಮನಸ್ಸು ಹೆದರಿತು.
ಚಿಂತೆಯಲ್ಲಿದ್ದಾಗ 
ಉಪಾಯವೊಂದು ಹೊಳೆಯಿತು.
ಮನೆ ಮೂಲೆಯಲ್ಲಿನ 
ಗೊಬ್ಬರ ಚೀಲ ಹೆಗಲಿಗೇರಿತು.
ಅಕ್ಷರ ಕಲಿಯುವ ಉತ್ಸಾಹದಲ್ಲಿ 
ಚೀಲದ ಚಿಂತೆ ದೂರಾಯಿತು.
ಅಂತು ಸಾಲಿ ತಪ್ಪಿಸದಂಗಾಯ್ತು.
ಹಾದಿ ಬೀದಿಯಲ್ಲಿ 
ಎಲ್ಲರೂ ನೋಡಿದರು.
ಇಂಥ ಚೀಲ ಯಾಕೆಂದು 
ಶಿಕ್ಷಕರು ಹೊಡೆದರು.
ಒಬ್ಬರೂ ನಿಜಸ್ಥಿತಿ ವಿಚಾರಿಸಲಿಲ್ಲ
ಕರುಣೆ ತೋರಿ 
ಚೀಲವೊಂದನ್ನು ಕೊಡಿಸಲಿಲ್ಲ
-ಮಾಣಿಕ ಆರ್.ಭುರೆ 

ಗುರುವಾರ, ಅಕ್ಟೋಬರ್ 14, 2010

ಪ್ರಗತಿಯತ್ತ ಬಸವಕಲ್ಯಾಣ ಮತ್ತು 'ಬಸವ ಉತ್ಸವ'

ಕರ್ನಾಟಕ  ಸರ್ಕಾರದಿಂದ ಮಂಜೂರಾದ 50 ಲಕ್ಷ ರೂಪಾಯಿ ವೆಚ್ಚದಲ್ಲಿ 2011 ರ ಮಾರ್ಚ 25,26,27 ರಂದು ಶರಣರ ಕಾರ್ಯಕ್ಷೇತ್ರವಾದ ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ 2 ನೇಯ ಬಸವ ಉತ್ಸವ ಅದ್ದೂರಿಯಾಗಿ ನಡೆಯಿತು.
ಪ್ರಥಮದಿನ ಅದ್ದೂರಿ ಮೆರವಣಿಗೆ ನಡೆದರೆ ಮೂರು ದಿನಗಳ ಕಾಲ ಸಂಜೆ ಇಲ್ಲಿನ ರಥ ಮೈದಾನದಲ್ಲಿ ಸುಪ್ರಸಿದ್ಧ ಕಲಾವಿದರಿಂದ ನೃತ್ಯ, ಗಾಯನ, ನಾಟಕ ಹಮ್ಮಿಕೊಳ್ಳಲಾಗಿತ್ತು. ಹಿಂದಿ ಚಿತ್ರರಂಗದ ಪ್ರಸಿದ್ಧ ಗಾಯಕಿ ಅನುರಾಧಾ ಪೌಡವಾಲ್, ಗೀತಾ ಜಾವಡೇಕರ್, ವೆಂಕಟೇಶಕುಮಾರ ಧಾರವಾಡ,  ಸುವರ್ಣಾ  ರಾಠೋಡ ಭಾಲ್ಕಿ ಅವರು ತಮ್ಮ ಸುಮಧುರ ಕಂಠದಿಂದ ಹಾಡಿ ಜನಮನ ತಣಿಸಿದರು. ಸಂಗೀತ ನಿರ್ದೆಶಕ ಗುರುಕಿರಣ ಬೆಂಗಳೂರು ಮತ್ತು ಪ್ರಮೋದಾ ಉಪಾಧ್ಯಾಯ ಅವರ ನೃತ್ಯ ಎಲ್ಲರನ್ನು ಮೋಡಿ ಮಾಡಿತು. ಪ್ರತಿದಿನ ಮಧ್ಯಾಹ್ನ ವಿಚಾರಗೋಷ್ಠಿಗಳನ್ನು ಸಹ ಹಮ್ಮಿಕೊಳ್ಳಲಾಗಿತ್ತು. ರಾಜಕೀಯ, ಧಾರ್ಮಿಕ್ ಮುಖಂಡರು ಒಳಗೊಂಡು ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡು ಉಪನ್ಯಾಸಕ ನೀಡಿದರು.
  ಉತ್ಸವದ ಸಮಾರೋಪ ಸಮಾರಂಭದಲ್ಲಿ 'ಜಗಜ್ಯೋತಿ' ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.ಇದರಲ್ಲಿ ನಾನು (ಮಾಣಿಕ ಭುರೆ) ಬರೆದ `ಪ್ರಗತಿಯತ್ತ ಬಸವಕಲ್ಯಾಣ' ಎಂಬ ಲೇಖನ ಪ್ರಕಟವಾಗಿದೆ. ಸಂಚಿಕೆಯಲ್ಲಿನ ಲೇಖನಗಳ ಮತ್ತು ಅವುಗಳ ಲೇಖಕರ ವಿವರ ಮುಂದಿನಂತಿದೆ.
1) ಬಸವೇಶ್ವರ ವಿದ್ಯೆ  -ಡಾ.ಎಂ.ಎಂ.ಕಲ್ಬುರ್ಗಿ 
2) ಮೇದಿನಿಗೆ ಹೊಸ ಬೆಳಕು ತಂದವರು 
     -ರಂಜಾನ ದರ್ಗಾ 
3) ಬಸವಣ್ಣ ಮತ್ತು ಶಿಕ್ಷಣ 
   -ಡಾ.ಬಸವರಾಜ ಬಲ್ಲೂರ
4) ಬಸವಣ್ಣನವರ ಲೋಕಜ್ಞಾನ 
     -ಡಾ.ಗಂಗಾಂಬಿಕಾ ಪಾಟೀಲ
5) ಬಸವಣ್ಣ  -ಜಗನ್ನಾಥ ಕಮಲಾಪುರೆ
6) ವಿಶ್ವದ ಏಕೈಕ ನಿಜತತ್ವಜ್ಞಾನಿ ಬಸವಣ್ಣ 
     -ಮಾತೆ ತೇಜಸ್ವಿನಿ
7) ಅಷ್ಠಾವರಣ -ಅಕ್ಕ ಅನ್ನಪೂರ್ಣ
8) ಪಂಚಾಚಾರ್ಯರು 
    - ಕಲ್ಯಾಣಮ್ಮ ಲಂಗೋಟಿ
 9) ಷಟಸ್ಥಲ ಸ್ವಾನುಭಾವ
     -ಸಿದ್ಧರಾಮನ ಶರಣರು ಬೆಲ್ದಾಳ್
10) ವಚನ ಸಾಹಿತ್ಯ ಕನ್ನಡದ 
   ಸಾಂಸ್ಕೃತಿಕ ಸಂಪತ್ತು 
    -ಜಯದೇವಪ್ಪ ಜೈನಕೇರಿ
11) ವಚನ ಸಂಸ್ಕೃತಿಯ ಸಾಮಾಜಿಕ ಹರವು 
      - ಡಾ.ಟಿ.ಆರ್.ಚಂದ್ರಶೇಖರ
12) ವಚನಕಾರರ ವಚನ ಮೌಲ್ಯಗಳು 
      -ಡಾ.ರಘುಶಂಖ ಭಾತಂಬ್ರಾ
13) ಶರಣರ ದಾಂಪತ್ಯ ಜೀವನ 
       -ಪಂಚಾಕ್ಷರಿ ಪುಣ್ಯಶೆಟ್ಟಿ
14) ವಚನಗಳಲ್ಲಿ ಏನಿಲ್ಲ  
      -ಡಾ.ಜಗನ್ನಾಥ ಹೆಬ್ಬಾಳೆ
15) ಒಂದು ವಚನದ ವೈಜ್ಞಾನಿಕತೆ 
      -ಡಾ.ಶಿವಗಂಗಾ ರುಮ್ಮಾ
16) ಶರಣರ ಪರಿಸರ ಪ್ರಜ್ಞೆ 
      - ಪ್ರೊ.ಎಸ್.ವಿ.ಕಲ್ಮಠ
17) ಆಚಾರಸತಿ ಗಂಗಾಂಬಿಕೆ 
       -ಡಾ.ಜಯದೇವಿ ತಿಬಶೆಟ್ಟಿ
18) ಆಯ್ದಕ್ಕಿ ಲಕ್ಕಮ್ಮ: ಅಸಂಗ್ರಹತತ್ವ 
       -ಎಚ್. ಮಲಕಣ್ಣ
19) ಶಿವಶರಣ ಆಯ್ದಕ್ಕಿ ಮಾರಯ್ಯ 
      -ಡಾ.ಬಂಡಯ್ಯಾ ಸ್ವಾಮಿ
20) ಶರಣಲೀಲಾ ನಾಟ್ಯಪ್ರಿಯ 
      ಬಹುರೂಪಿ ಚೌಡಯ್ಯ 
     -ರುಕ್ಮೊದ್ದೀನ್ ಇಸ್ಲಾಂಪುರ
21) ಪ್ರಗತಿಯತ್ತ ಬಸವಕಲ್ಯಾಣ 
      -ಮಾಣಿಕ ಆರ್.ಭುರೆ
22) ಚಿತ್ರ ಸಂಪದ 
.......................................
ಪ್ರಗತಿಯತ್ತ ಬಸವಕಲ್ಯಾಣ
    
     'ಕಲ್ಯಾಣ ಕ್ರಾಂತಿ'ಯು ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಕೈಗೊಂಡ ಪರಿವರ್ತನೆಯ ಪ್ರಯತ್ನದ ಫಲವಾಗಿ ಘಟಿಸಿದ ಮಹಾಕ್ರಾಂತಿ. 12ನೇ ಶತಮಾನದಲ್ಲಿ ಅಸಹನೀಯ ಅಸ್ಪೃಶ್ಯತೆ, ಶೋಷಣೆಯಿಂದಾಗಿ ದೀನ, ದಲಿತ, ದುರ್ಬಲರ ಬದುಕು ಜರ್ಜರಿತವಾಗಿತ್ತು. ಅದಕ್ಕಾಗಿ ಸಮಾನತೆಯ ನವ ಸಮಾಜ ನಿರ್ಮಾಣಕ್ಕೆ  ಬಸವಣ್ಣನವರು ಟೊಂಕ ಕಟ್ಟಿ ನಿಂತರು. ಶರಣ ಗಣವನ್ನು ಸಂಘಟಿಸಿ ಅನುಭವ ಮಂಟಪದ ಮೂಲಕ ನವೀನ ವಿಚಾರಗಳ ಬೀಜವನ್ನು ನೆಡಲು ಪ್ರಯತ್ನಿಸಿದರು. ಎದುರಿಗೆ ನಿಂತು ಸಮಗಾರ ಹರಳಯ್ಯ ಮತ್ತು ಬ್ರಾಹ್ಮಣನಾದ ಮಧುವಯ್ಯನವರ ಮಕ್ಕಳ ಮದುವೆ ಮಾಡಿಸಿದರು. ಇದರಿಂದಾಗಿ ಎಲ್ಲೆಡೆ ಹಾಹಾಕಾರ ಎದ್ದಿತು. ಕೋಪಗೊಂಡ ಬಿಜ್ಜಳ ಅರಸನು ಹರಳಯ್ಯ ಮಧುವಯ್ಯನವರನ್ನು ಆನೆ ಕಾಲಿಗೆ ಕಟ್ಟಿ ಎಳೆಯುವ ಶಿಕ್ಷೆ ಕೊಟ್ಟ. ಜಾತಿವಾದಿಗಳು ಶರಣರನ್ನು `ಕಲ್ಯಾಣ'ದಿಂದ ( ಇಂದಿನ ಬಸವಕಲ್ಯಾಣ) ಓಡಿಸಿದರು. ಅವರು ಬರೆದ ಅಮೂಲ್ಯ ತತ್ವಗಳನ್ನು ಒಳಗೊಂಡ ವಚನ ಸಾಹಿತ್ಯವನ್ನು ಸುಟ್ಟರು. ಹೀಗಾಗಿ ಕಾಲಕ್ರಮೇಣ ಎಲ್ಲವೂ ಹಾಳಾಗಿ ಮಣ್ಣಿನಲ್ಲಿ ಹೂತು ಹೋಯಿತು. ಒಂದು ಕಾಲದಲ್ಲಿ ವೈಭವದಿಂದ ಮೆರೆದಿದ್ದ ಅಂದಿನ ಭವ್ಯ ಪಟ್ಟಣದ ಯಾವುದೇ ಕುರುಹುಗಳು ಇಲ್ಲಿ ಉಳಿಯಲಿಲ್ಲ. ಬಸವಾದಿ ಶರಣರ ನೇತೃತ್ವದಲ್ಲಿ ನಿರ್ಮಾಣಗೊಂಡ ಮಠ, ಮಂದಿರ, ಮಂಟಪ ಯಾವುದೂ ಇಲ್ಲದಂತಾಯಿತು.
     ಹಾಗೆ ನೋಡಿದರೆ, ಬಸವಣ್ಣನವರು ವರ್ಗ, ಜಾತಿ ಭೇದದ ಬಗ್ಗೆ ತಾಳಿದ್ದ ನಿಲುವಿನಂತೆಯೇ ಸ್ಥಾವರಕ್ಕೂ ವಿರೋಧಿಸಿದ್ದರು. `ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡುವೆ ಬಡವನಯ್ಯ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶವಯ್ಯಾ...' ಎಂದು ಅವರು ಒಂದು ವಚನದಲ್ಲಿ ಹೇಳಿದ್ದಾರೆ. ಇದು ಅವರು ದೇವಾಲಯ ಸಂಸ್ಕೃತಿ ಬಗ್ಗೆ ಹೊಂದಿದ್ದ ತಿರಸ್ಕಾರದ ಭಾವನೆಯನ್ನು ಎತ್ತಿ ತೋರಿಸುತ್ತದೆ. ಒಂದುವೇಳೆ ಈ ತತ್ವವನ್ನು ಆಧಾರವಾಗಿಟ್ಟುಕೊಂಡು ಯೋಚಿಸಿದರೆ ಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣದಲ್ಲಿ ಏನೂ ನಿರ್ಮಾಣ ಆಗಿಲ್ಲ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ.
    ಆದರೆ ಅಂದು ಅವರ ಕರೆಗೆ ಓಗೊಟ್ಟು ದೂರದೂರದ ಅಸಂಖ್ಯಾತ ಶರಣರು ಇಲ್ಲಿಗೆ ಆಗಮಿಸಿದರು. ಅವರೆಲ್ಲರೂ ಶಿವಯೋಗ ಸಾಧನೆ ಮಾಡುವುದಕ್ಕೆ ಹಾಗೂ ಒಂದೆಡೆ ಕುಳಿತು ಚರ್ಚಿಸಲು ಕೆಲವೊಂದು ಕಟ್ಟಡಗಳನ್ನು ಕಟ್ಟಿದರು. ಮಹಾಮನೆ, ಮಠ, ಅನುಭವ ಮಂಟಪವನ್ನು ನಿರ್ಮಿಸಿದರು ಎಂಬುದು ದಾಖಲೆಗಳಿಂದ ತಿಳಿದು ಬರುತ್ತದೆ. ವಿಪರ್ಯಾಸವೆಂದರೆ  ನಂತರದ ಕಾಲದಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ವಾಸ್ತವಿಕತೆಯನ್ನು ಅರಿಯುವ ಪ್ರಯತ್ನ ನಡೆದಿಲ್ಲ ಉತ್ಖನನ ಕೈಗೊಂಡು ಮಣ್ಣಿನಡಿ ಹೂತುಹೋಗಿರುವುದನ್ನು ತೆಗೆಯಲು ಯತ್ನಿಸಲಾಗಿಲ್ಲ. ಹೀಗಾಗಿ ಬಸವಣ್ಣನ ಕಾಲದ `ಕಲ್ಯಾಣ' ಕೇವಲ ಕಲ್ಪನೆಯಾಗಿಯೇ ಉಳಿದಿದೆ.
ಇತಿಹಾಸ:
     ಐತಿಹಾಸಿಕ ಆಧಾರಗಳ ಪ್ರಕಾರ ಕಲ್ಯಾಣವು 9ರಿಂದ 12ನೇ ಶತಮಾನದವರೆಗೆ ಚಾಲುಕ್ಯರ ರಾಜಧಾನಿಯಾಗಿತ್ತು. ಅಂದು ಕಲ್ಯಾಣದಂಥ ಪಟ್ಟಣ ಎಲ್ಲಿಯೂ ಇರಲಿಲ್ಲ ಎಂದು ಕೆಲವರು ಬರೆದಿಟ್ಟಿದ್ದಾರೆ. ವಚನಗಳಲ್ಲಿಯೂ ಕಲ್ಯಾಣದ ವಿಸ್ತಾರ ಮತ್ತು ಭವ್ಯತೆಯ ವರ್ಣನೆ ಬರುತ್ತದೆ. ಕ್ರಾಂತಿ ನಡೆದು ಶರಣರು ಇಲ್ಲಿಂದ ಬೇರೆಡೆ ಹೋದ ನಂತರವೂ ದೇವಗಿರಿ ಯಾದವರು, ಕಾಕತೀಯರು ಆಳ್ವಿಕೆ ನಡೆಸುತ್ತಾರೆ. ನಂತರ ಮುಸ್ಲಿಂ ದೊರೆಗಳಾದ ತುಘಲಕ್, ಬಹಮನಿ ಸುಲ್ತಾನರು, ಮೊಗಲ ದೊರೆಗಳು ಇಲ್ಲಿ ಆಳಿದ್ದಾರೆ. ಕೆಲಕಾಲ ಮರಾಠರ ಶಿವಾಜಿ ಸಹ ಇಲ್ಲಿನ ಕೋಟೆಯನ್ನು ವಶಪಡಿಸಿಕೊಂಡ ಬಗ್ಗೆ ಇತಿಹಾಸ ಹೇಳುತ್ತದೆ. 1740 ರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆಯುವವರೆಗೆ ಇದು ಹೈದ್ರಾಬಾದ ಸಂಸ್ಥಾನದ ನಿಜಾಮ ಅರಸರು ನೇಮಿಸಿದ ನವಾಬ್ರ ಆಧೀನದಲ್ಲಿತ್ತು.
       ಮುಖ್ಯವೆಂದರೆ `ಕಲ್ಯಾಣ ಕ್ರಾಂತಿ'ಯ ಕಾಲದ ಯಾವುದೇ ಕುರುಹು ಹೇಗೆ ಉಳಿದಿಲ್ಲವೋ ಹಾಗೆಯೇ ನಂತರ ಆಳ್ವಿಕೆ ನಡೆಸಿದ ಅರಸರ ಕಾಲದಲ್ಲಿನ ವೈಭವವೂ ಇಂದು ನೋಡಲು ಸಿಗುವುದಿಲ್ಲ. ಅರಸರು, ಸಾಮಂತರು ಮತ್ತು ನವಾಬ್ರು ಕೇವಲ ಕೋಟೆಯ ಸಂರಕ್ಷಣೆ ಮಾತ್ರ ಮಾಡಿದ್ದಾರೆ. ಆದ್ದರಿಂದ ಅದನ್ನು ಬಿಟ್ಟರೆ ಹಿಂದಿನದು ಇಲ್ಲಿ ಏನೂ ಇಲ್ಲ. ಕೋಟೆ ಸಹ ಅನೇಕ ಸಲ ದುರುಸ್ತಿ ಮಾಡಿದ್ದರಿಂದ ಮೂಲ ರೂಪದಲ್ಲಿ ಇಲ್ಲದಿರುವುದು ಅದನ್ನು ನೋಡಿದಾಗ ಗೊತ್ತಾಗುತ್ತದೆ. ಇಲ್ಲಿ ಮುಸ್ಲಿಂ ಅರಸರು ಹೆಚ್ಚಿನ ಕಾಲ ಆಳ್ವಿಕೆ ನಡೆಸಿದ್ದರಿಂದ ಮಠ, ಮಂದಿರಗಳ  ಅಭಿವ್ರಧಿ  ಆಗಿರಲಿಕ್ಕಿಲ್ಲ ಎಂದೂ ಕೆಲವರು ಅಭಿಪ್ರಾಯಪಡುತ್ತಾರೆ. ಆದರೂ ಇಂದು ಬಸವಕಲ್ಯಾಣದ ಸುತ್ತ ಕೆತ್ತನೆಯ ಕಲ್ಲುಗಳು, ಮೂರ್ತಿಗಳು ಮತ್ತು ದೇವಾಲಯಗಳ ಅವಶೇಷಗಳು ದೊರೆಯುತ್ತವೆ. ಶಿವಪುರ, ಉಮಾಪುರ, ಮೋರಖಂಡಿಗಳಲ್ಲಿ ಭವ್ಯ ಶಿಲಾ ದೇಗುಲಗಳಿವೆ. ಇವು ಇಲ್ಲಿನ ಗತವೈಭವ ಸಾರುತ್ತವೆ ಎನ್ನಬಹುದು.
ಅಭಿವೃದ್ಧಿಯತ್ತ ದಾಪುಗಾಲು:
     ಹೀಗೆ ಕಲ್ಯಾಣ ಮಹತ್ವದ ಸ್ಥಳವಾದರೂ 20 ನೇ ಶತಮಾನದವರೆಗೂ ಇದರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಮಾತ್ರ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದವು. ವಚನ ಪಿತಾಮಹ ಫ.ಗು.ಹಳಕಟ್ಟಿಯವರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಬೆಳಕಿಗೆ ತಂದು ಮಹತ್ವದ ಕಾರ್ಯ ಮಾಡಿದರು. ಅದರಂತೆ ಸೊಲ್ಲಾಪುರದ ಬಾಬಾಸಾಹೇಬ್ ಮಲ್ಲಪ್ಪ ವಾರದ್ ಅವರು `ಕಲ್ಯಾಣದ ಕಂಪು' ಎಲ್ಲೆಡೆ ಹರಡಲು ಪ್ರಯತ್ನಿಸಿ ಮರೆಯಲಾಗದ ಕಾರ್ಯ ಮಾಡಿದ್ದಾರೆ. 1948 ರಲ್ಲಿ ಇಲ್ಲಿ ಬಸವೇಶ್ವರ ದೇವಸ್ಥಾನ ಪಂಚ ಸಮಿತಿ ಸ್ಥಾಪಿಸಿ ಶರಣ ಸ್ಮಾರಕಗಳ  ಅಭಿವ್ರಧಿ  ಮತ್ತು ಸಂರಕ್ಷಣೆ ಕೈಗೊಂಡರು. ಕೆಲ ದಾಖಲೆ ಹಾಗೂ ವಚನಗಳನ್ನು ಆಧಾರವಾಗಿಟ್ಟುಕೊಂಡು ಅಳಿದುಳಿದ ಮಠ, ಮಂದಿರ, ಗವಿಗಳಿಗೆ ಶರಣರ ಹೆಸರನ್ನು ಕೊಟ್ಟರು. ಬಸವಜಯಂತಿಗೆ ಜಾತ್ರೆ ಆರಂಭಿಸಿದರು. ಸರ್ಕಾರ್  ಕಲ್ಯಾಣಕ್ಕೆ `ಬಸವ ಕಲ್ಯಾಣ' ಎಂದು ನಾಮಕರಣ ಮಾಡುವಂತೆ ಮಾಡಿದರು.
     ಇದಲ್ಲದೆ ಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಮಾಡುವಲ್ಲಿ ಭಾಲ್ಕಿಯ ಲಿಂ.ಚನ್ನಬಸವ ಪಟ್ಟದ್ದೇವರು ಶ್ರಮಿಸಿದ್ದಾರೆ. ಮಾಜಿ ಸಚಿವರಾದ ಭೀಮಣ್ಣ ಖಂಡ್ರೆ, ವಿಶ್ವನಾಥರೆಡ್ಡಿ ಮುದ್ನಾಳ, ಮಾಜಿ ಉಪ ರಾಷ್ಟ್ರಪತಿ ಬಿ.ಡಿ.ಜತ್ತಿ, ಡಾ.ಬಿ.ವಿ.ಪಟೇಲ್, ಶಾಸಕರಾದ ಬಸವರಾಜ ಪಾಟೀಲ ಅಟ್ಟೂರ್, ಮಾಜಿ ಶಾಸಕರಾದ ಎಂ.ಜಿ.ಮುಳೆ, 
ಮಲ್ಲಿಕಾರ್ಜುನ್  ಖೂಬಾ, ಅನ್ನಪೂರ್ಣಾ ಬಾಯಿ ರಗಟೆ, ಸಿದ್ರಾಮಪ್ಪ ಖೂಬಾ, ಈಶ್ವರ ಖಂಡ್ರೆ ಭಾಲ್ಕಿ, ಚಿತ್ರದುರ್ಗ ಶಿವಮೂರ್ತಿ ಮುರುಘರಾಜೇಂದ್ರ ಶರಣರು, ಗದಗನ ಡಾ.ಸಿದ್ಧಲಿಂಗ ತೋಂಟದಾರ್ಯ ಜಗದ್ಗುರು, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಹುಲಸೂರು ಶಿವಾನಂದ ಸ್ವಾಮಿ, ಬೆಲ್ದಾಳ ಸಿದ್ಧರಾಮ ಶರಣರು, ವಿ.ಸಿದ್ಧರಾಮಣ್ಣ, ಭಾತಂಬ್ರಾ ಶಿವಯೋಗೇಶ್ವರ ಸ್ವಾಮಿ ಮುಂತಾದವರು ಇಲ್ಲಿನ ಪ್ರಗತಿ ಕಾರ್ಯದಲ್ಲಿ ಸಹಕರಿಸಿದ್ದಾರೆ. ಶರಣತತ್ವ ಪ್ರಸಾರಕ್ಕಾಗಿ ದುಡಿದಿದ್ದಾರೆ. 2001 ರಿಂದ ಈಚೆಗೆ ಇಲ್ಲಿನ ಶರಣ ಸ್ಮಾರಕಗಳ  ಅಭಿವ್ರಧಿಗೆ  ಉನ್ನತ ಮಟ್ಟದಲ್ಲಿ ಪ್ರಯತ್ನ ಆರಂಭವಾಯಿತು. ಬೆಂಗಳೂರಿನ ವೀರಶೈವ ಕ್ಷೇಮಾಭ್ಯುದಯ ಟ್ರಸ್ಟ್ನ ಅಧ್ಯಕ್ಷರು ಹಾಗೂ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ  ಎಸ್.ಬಿ.ಮುದ್ದಪ್ಪ ಅವರು `ಬಸವಣ್ಣನವರ ಅರಿವಿನ ಮನೆ'ಯ ಅಭಿವೃದ್ಧಿ ಕೈಗೆತ್ತಿಕೊಂಡರು.
ಅಭಿವೃದ್ಧಿ ಮಂಡಳಿ ರಚನೆ:
    2005 ರಲ್ಲಿ  ಸರ್ಕಾರ `ಬಸವಕಲ್ಯಾಣ ಅಭಿವೃದ್ಧಿ ಮಂಡಳಿ' ರಚಿಸಿದ್ದರಿಂದ ಮಂಡಳಿಯಿಂದ ಕೆಲಸ ಆರಂಭವಾಯಿತು. ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮದ ಅಭಿವೃದ್ಧಿ ಕೈಗೊಂಡ ನಂತರ ಅವರ ಕಾರ್ಯಕ್ಷೇತ್ರವಾದ `ಕಲ್ಯಾಣ'ದ ಕಡೆಗೆ ಸರ್ಕಾರ ವಿಶೇಷ ಲಕ್ಷ ವಹಿಸಿತು. ಕರ್ನಾಟಕ ಸರ್ಕಾರವು 1-11-2003 ರಂದು ಮಂಡಳಿ ರಚಿಸುವುದಾಗಿ ಘೋಷಿಸಿತು. ಈ ಸಂಬಂಧ ವರದಿ ಸಿದ್ಧವಾದ ನಂತರ 10-11-2004 ರಂದು ರಾಜ್ಯದ ರಾಜ್ಯಪಾಲರ ಅನುಮೋದನೆಯೊಂದಿಗೆ ಅಧ್ಯಾದೇಶವನ್ನು ಹೊರಡಿಸಲಾಯಿತು. ನಂತರ ವಿಧಾನ ಮಂಡಲದ ಉಭಯ ಸದನಗಳಲ್ಲಿ ವಿಧೇಯಕವನ್ನು ಮಂಡಿಸಿ 2-4-2005 ರಂದು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಅಧಿನಿಯಮ ಜಾರಿಗೆ ತರಲಾಯಿತು.
    ಮಂಡಳಿಗೆ ಮುಖ್ಯಮಂತ್ರಿಯವರು ಅಧ್ಯಕ್ಷರಾಗಿರುತ್ತಾರೆ. ಮಂಡಳಿಯಿಂದ 25-6-2006 ಮತ್ತು 8-11-2008 ರಂದು ಎರಡು ಸಭೆಗಳು ನಡೆದಿವೆ. ರಾಜ್ಯ ಹಣಕಾಸು ನಿಗಮದ ನಿರ್ದೆಶಕರಾದ ಡಾ.ಎಸ್.ಎಂ.ಜಾಮದಾರ ಅವರು ಮಂಡಳಿ ವಿಶೇಷಾಧಿಕಾರಿ ಆಗಿದ್ದಾರೆ. ಒಬ್ಬರು ಪ್ರತ್ಯೇಕ ಆಯುಕ್ತರಿದ್ದಾರೆ. ಮಂಡಳಿಯ ಕಾಮಗಾರಿ ಪುರಾತನ ಶೈಲಿಯಲ್ಲಿ ಹಾಗೂ ಶರಣ ತತ್ವಕ್ಕೆ ಅನುಗುಣವಾಗಿ ಕೈಗೊಳ್ಳುವ ಉದ್ದೇಶದಿಂದ ಸಲಹಾ ಸಮಿತಿ ಸಹ ರಚಿಸಲಾಗಿದೆ. ಡಾ.ಪಾಟೀಲ ಪುಟ್ಟಪ್ಪ (ಪತ್ರಕರ್ತರು, ಸಾಹಿತಿ) ಡಾ.ಎಸ್.ಶೆಟ್ಟರ್ (ಇತಿಹಾಸ ತಜ್ಞರು) ಡಾ.ಎ.ಸುಂದರ (ಪ್ರಾಚ್ಯವಸ್ತು ತಜ್ಞರು) ಡಾ.ಎಚ್.ಚಂದ್ರಶೇಖರ (ಭೂಗರ್ಭಶಾಸ್ತ್ರಜ್ಞರು) ಡಾ.ಎಂ.ಎನ್.ಜವರಯ್ಯ (ಸಾಹಿತಿ) ಡಾ.ಗೀತಾಂಜಲಿರಾವ (ಪುರಾತತ್ವ ಶಾಸ್ತ್ರಜ್ಞರು) ಅಶೋಕ (ಚಲನಚಿತ್ರ ನಟ) ಸಮಿತಿಯಲ್ಲಿದ್ದಾರೆ.
ಸ್ಮಾರಕರಗಳ ಕಾಮಗಾರಿ 
    ಪ್ರಥಮ ಹಂತದಲ್ಲಿ ಒಟ್ಟು 19 ಸ್ಮಾರಕಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಮಂಡಳಿಗೆ ಸರ್ಕಾರವು ಪ್ರಥಮವಾಗಿ 5 ಕೋಟಿ ರೂ. ಮೀಸಲಿಟ್ಟು ಅದರಲ್ಲಿ 50 ಲಕ್ಷ ರೂ. ಮಾತ್ರ ಬಿಡುಗಡೆ ಮಾಡಿತು. ನಂತರ 2006-07 ನೇ ಸಾಲಿನ ಬಜೆಟ್ನಲ್ಲಿ 20 ಕೋಟಿ ರೂ. ಕಾಯ್ದಿರಿಸಲಾಯಿತು. ಈಚೆಗೆ 32 ಕೋಟಿ ಮಂಜೂರು ಮಾಡಿದೆ. ಶರಣ ಸಾಹಿತ್ಯ ಸಂಶೋಧನಾ ಕೇಂದ್ರ ಹಾಗೂ ಗ್ರಂಥಾಲಯದ ಕಾಮಗಾರಿ ಪೂರ್ಣಗೊಂಡಿದ್ದು ಅದನ್ನು ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ  ಹಸ್ತಾಂತರಿಸಲಾಗಿದೆ. ಅಲ್ಲಮಪ್ರಭುದೇವರ ಗದ್ದುಗೆಮಠ, ಬಸವಣ್ಣನವರ ಅರಿವಿನ ಮನೆ, ಮಡಿವಾಳ ಮಾಚಿದೇವರ ಹೊಂಡ, ಜೇಡರ ದಾಸಿಮಯ್ಯನ ಮಠ, ಅಕ್ಕನಾಗಮ್ಮನ ಗವಿ, ನುಲಿ ಚಂದಯ್ಯನ ಗವಿ, ಕಂಬಳಿ ನಾಗಿದೇವನ ಮಠ, ಉರಿಲಿಂಗ ಪೆದ್ದಿ ಮಠ, ಸಮಗಾರ ಹರಳಯ್ಯನವರ ಗವಿ, ಅಂಬಿಗರ ಚೌಡಯ್ಯ ಗವಿ,  ವಿಜ್ಞಾನೇಶ್ವರ ಗುಹೆ, ಪಂಚಸೂತ್ರದ ಗವಿ, ಬಸವವನ, ಬಸವೇಶ್ವರ ದೇವಸ್ಥಾನ ಮುಂತಾದೆಡೆ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇವುಗಳಲ್ಲಿ ಕೆಲವೊಂದು ಪೂರ್ಣಗೊಂಡಿವೆ. 12-11-2010 ರಂದು ಇಲ್ಲಿ ನಡೆದ ಮಂಡಳಿಯ ತಜ್ಞರ  ಸಲಹಾ ಸಮಿತಿ ಸಭೆಯಲ್ಲಿ ಅನುಭವ ಮಂಟಪ ಪುನರ್ ನಿರ್ಮಾಣ ಮಾಡಲು ನಿರ್ಣಯಿಸಲಾಗಿದೆ.
     ಈಗಾಗಲೇ ಅಭಿವೃದ್ಧಿ ನಡೆಸಿದ ಎಲ್ಲ ಸ್ಮಾರಕಗಳ ಎದುರು ಚಾಲುಕ್ಯ ಶೈಲಿಯಲ್ಲಿ ಗ್ರಾನೈಟ್ ಕಲ್ಲಿನ ಭವ್ಯ ಹಾಗೂ ಸುಂದರ ಮಂಟಪಗಳನ್ನು ನಿರ್ಮಿಸಲಾಗಿದೆ. ಆಕರ್ಷಕ ಪ್ರವೇಶ ದ್ವಾರಗಳನ್ನು, ಸುತ್ತಲೂ ಆವರಣಗೋಡೆ, ಉದ್ಯಾನವನ ನಿರ್ಮಿಸಲಾಗಿದೆ. ಪ್ರವಾಸಿಗರ ಕೋಣೆಗಳನ್ನು ಕಟ್ಟಲಾಗಿದೆ. ತ್ರಿಪುರಾಂತ ಕೆರೆ ಅಭಿವೃದ್ಧಿಪಡಿಸಿ ಸುತ್ತಲೂ ಮಕ್ಕಳ ಉದ್ಯಾನ ನಿರ್ಮಿಸಲಾಗುತ್ತಿದೆ ವಿಶೇಷವಾಗಿ ನುಲಿ ಚಂದಯ್ಯ ಗವಿ, ಅಂಬಿಗರ ಚೌಡಯ್ಯ ಗವಿಯ ಪರಿಸರ ಸುಂದರವಾಗಿ ರೂಪುಗೊಂಡಿದೆ. ಬಂದವರ ಓಣಿ ಹತ್ತಿರದ ಗುಡ್ಡ ಗಿಡಗಂಟೆಗಳಿಂದ ಕಂಗೊಳಿಸುತ್ತಿದೆ. ಒಟ್ಟಾರೆ ಇಲ್ಲಿನ ಗವಿಗಳು ಮತ್ತು ಮಂದಿರಗಳು ಈಗ ಹೊಸ ರೂಪ ಪಡೆದುಕೊಂಡಿವೆ. ಬಸವಣ್ಣನ ಕಲ್ಯಾಣದಲ್ಲಿ ಕಲ್ಲರಳಿ ಹೂವಾಗುತ್ತಿವೆ. ಗತವೈಭವ ಸಾರಲು, ಶರಣತತ್ವದ ಕಂಪು ಎಲ್ಲೆಡೆ ಬೀರಲು. ಆದ್ದರಿಂದ ಕೆಲ ವರ್ಷಗಳಲ್ಲಿ  ಈ ಸ್ಥಳ  ಅಂತಾರಾಷ್ಟೀಯ ಮಟ್ಟದ ಪ್ರವಾಸಿ ತಾಣವಾಗಿ ಕಂಗೊಳಿಸಲಿದೆ. 
   -ಮಾಣಿಕ ಆರ್.ಭುರೆ(9845429001)

ಭೂಮಂಡಲ ಮತ್ತು ಸಂವಾದ




ಇ- ಮೇಲ್ ಬಗ್ಗೆಯೂ ಗೊತ್ತಿಲ್ಲದ ಸಮಯದಲ್ಲಿ ಹಿರಿಯ ಪತ್ರಕರ್ತರಾದ ದೇವು ಪತ್ತಾರ್ ಸರ್ ಅವರದ್ದು ಬ್ಲಾಗ್ ಇದೆ ಎಂಬುದು  ಗೆಳೆಯರಾದ ನಾಗೇಶ ಪ್ರಭಾ ಮತ್ತು ಶಶಿ ಶೆಂಬೆಳ್ಳಿ ಅವರಿಂದ ಗೊತ್ತಾಯಿತು. ಅದು ಹೇಗಿರುತ್ತದೆ ಎಂಬ ಕುತೂಹಲ ಕಾಡಿದ್ದರಿಂದ ಇದರ ಬಗ್ಗೆ ತಿಳಿದುಕೊಳ್ಳಲು ಪತ್ತಾರ ಅವರನ್ನು ಭೇಟಿಯಾದೆ. ಅವರು ಲ್ಯಾಪ್ಟಾ ಪನಲ್ಲಿ ತಮ್ಮ `ಚಿನ್ನದ ಹುಡುಗ' ಬ್ಲಾಗ್ ತೋರಿಸಿದರು. ಬೇರೆ ಬೇರೆ ಬ್ಲಾಗಗಳಲ್ಲಿ ಬರೆದಿರುವ ಬಗ್ಗೆಯೂ ಹೇಳಿದರು.
   ಬ್ಲಾಗಗಳಲ್ಲಿ ಅವರು ಆಸಕ್ತಿದಾಯಕ ಮತ್ತು ಮಾಹಿತಿಪೂರ್ಣ ಲೇಖನ ಬರೆಯುತ್ತಾರೆ. ಆದರೂ ಈ ಬಗ್ಗೆ ಹೆಚ್ಚಾಗಿ ಬೇರೆಯವರಿಗೆ ಹೇಳಿಕೊಳ್ಳುವುದಿಲ್ಲ. ಪತ್ತಾರ ಅವರು ಯಾವಾಗಲೂ ಏನಾದರೊಂದು ಮಾಡುತ್ತಿರುತ್ತಾರೆ. ಆದರೆ ಮಾಡಿಯೂ ಮಾಡದಂತೆ ಇರುತ್ತಾರೆ. ಬೀದರ ಇತಿಹಾಸ, ಪರಂಪರೆ ಬಗ್ಗೆ ಮಹಮ್ಮದ್ ಗವಾನನ ಬಗ್ಗೆ ಅವರು ಹೆಕ್ಕಿ ತೆಗೆದಷ್ಟು ಇದುವರೆಗೂ ಯಾರೂ ಆ ಕಾರ್ಯ ಮಾಡಿಲ್ಲ. ಅವರ `ಕ್ಯಾಮೆರಾ ಎಂಜಿನಿಯರ್ ಗುಲಾಂ ಮುಂತಾಕಾ' ಕೃತಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾಗಿದೆ. ಬೆಂಗಳೂರು ಕ್ರೈಸ್ಟ್ ಯುನಿವರ್ಸಿಟಿಯವರು `ಈಗ ಹೀಗಿರುವ ಲೋಕದಲ್ಲಿ' ಪುಸ್ತಕ ಪ್ರಕಟಿಸಿದ್ದಾರೆ. `ಮಹಾದೇವಬಾಬಾ ಮೆಡೋಸ್ ಟೇಲರ್' ಕೃತಿಯನ್ನು ಪತ್ತಾರರು ಸಂಪಾದಿಸಿದ್ದಾರೆ.
     ಬೀದರನ ಪ್ರಮುಖ ಕತೆಗಾರರಾದ ಗುರುನಾಥ ಅಕ್ಕಣ್ಣ ಅವರು ಈಚೆಗೆ ಬಸವಕಲ್ಯಾಣದಲ್ಲಿ ನಡೆದ ಅವರ 'ಕಲ್ಲಣ್ಣನ್ ಕಂಪ್ಲೆಂಟ್ ಪ್ರಕರಣ' ಕಥಾ ಸಂಕಲನದ ಬಿಡುಗಡೆ ಸಮಾರಂಭದ ಸಮಯಲ್ಲಿ ಸಿಕ್ಕಾಗ ಪತ್ತಾರ ಅವರ ಸಾಹಿತ್ಯದ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ಆದ್ದರಿಂದ ಈ ಬಗ್ಗೆ ವಿಚಾರಗೋಷ್ಠಿ ಆಯೋಜಿಸುವುದು ಅವಶ್ಯಕವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದು ಇದುವರೆಗೆ ಆಗಿಲ್ಲ. ಆದರೆ ಸಂತಸದ ಸಂಗತಿ ಎಂದರೆ ಈಚೆಗೆ ಬ್ಲಾಗ್ ನಲ್ಲಿ ಪತ್ತಾರರ ಬಗ್ಗೆ ಸಾಕಷ್ಟು ಮಾಹಿತಿ ಬಂದಿದೆ. ಕೆಂಡ ಸಂಪಿಗೆಯಲ್ಲಿನ ರಹಮತ್ ತರಿಕೇರೆ ಅವರ 'ಹೊಸ ತಲೆಮಾರಿನ ಲೇಖಕರು' ಅಂಕಣದಲ್ಲಿ ಇವರ ಬಗ್ಗೆ ಬರೆಯಲಾಗಿದೆ. ಅವಧಿಯಲ್ಲಿಯೂ ಅವರ ಬಗ್ಗೆ ಲೇಖನ ಬಂದಿದೆ.
  ಪತ್ತಾರ ಅವರಿಗೆ ಒಂದು  ಬ್ಲಾಗ್ ನಿಂದ   ಏನು ಲಾಭ ಆಗಿದೆಯೋ ಅವರು ಇನ್ನೊಂದು ಬ್ಲಾಗ್ (ಚಹರೆ) ಆರಂಭಿಸುತ್ತೇನೆ ಎಂದು ಹೇಳಿದ್ದಾರೆ ಎಂದು ಅವಧಿಯಲ್ಲಿ ಬರೆಯಲಾಗಿದೆ.  ನನಗೂ ಬ್ಲಾಗ್ ಆರಂಭಿಸುವಾಗ ಈ ಪ್ರಶ್ನೆ ಕಾಡಿದೆ. ಆದರೂ ಲಾಭ ಹಾನಿಯ ಲೆಕ್ಕ ಹಾಕದೆ 'ಭೂಮಂಡಲ' ಆರಂಭಿಸುತ್ತಿದ್ದೇನೆ. ( ಅಸಲಿಗೆ ಬ್ಲಾಗ್ ನಿಂದ ಲಾಭ ಹೇಗೆ ಹಾನಿ ಹೇಗೆ ಎಂಬುದು ನನಗೆ ತಿಳಿದಿಲ್ಲ.) ಬ್ಲಾಗ್ ರಚಿಸುವಾಗ ನನಗೆ ಬೇಕಾಗಿದ್ದ ಯಾವುದೇ ಹೆಸರು ಸ್ವೀಕೃತ ಆಗಲಿಲ್ಲ. 
ಆದ್ದರಿಂದ  BHURE  ಮತ್ತು    MANIK    ಈ ಹೆಸರುಗಳಿಂದ ಪ್ರಥಮ ಮೂರು ಅಕ್ಷರಗಳನ್ನು ತೆಗೆದುಕೊಂಡು ( BHU+ MAN) ಪ್ರಯತ್ನಿಸಿದೆ. ಅದು (BHUMANDAL) ಭೂಮಂಡಲ ಆಗಿದೆ.
    ನನ್ನ  ಬ್ಲಾಗ್ ನ್ನು   ಪ್ರಥಮವಾಗಿ ವೀಕ್ಷಿಸಿರುವ ಬಸವಕಲ್ಯಾಣ ಎಂಜಿನಿಯರಿಂಗ್ ಕಾಲೇಜಿನ ಅಧೀಕ್ಷಕರಾದ ಪ್ರೇಮಸಾಗರ ಪಾಟೀಲ ಅವರು ಸರಿಯಾದ ಹೆಸರು ಇಟ್ಟಿದ್ದೀರಿ ಎಂದರು. ಇವರ ಬಗ್ಗೆ ಏಕೆ ಪ್ರಸ್ತಾಪಿಸುತ್ತಿದ್ದೇನೆ ಎಂದರೆ ಪ್ರತಿವಾರ ಇಲ್ಲಿ ನಡೆಯುವ ಮುಕ್ತ ಸಂವಾದ ಸಭೆಯಲ್ಲಿ ಇವರೂ ಭಾಗವಹಿಸುತ್ತಾರೆ. 13 ನೇ ಸಭೆಯಲ್ಲಿ ಬ್ಲಾಗ್ ನಲ್ಲಿ  ದೊರೆಯುವ ಮಾಹಿತಿ ಬಗ್ಗೆ ನನಗೆ ತಿಳಿದಷ್ಟನ್ನು ವಿವರಿಸಿದ್ದೇ. ಕೆಂಡ ಸಂಪಿಗೆಯ ಹೊಸ ತಲೆಮಾರಿನ ಲೇಖಕರ ಅಂಕಣದಲ್ಲಿ ಈ ಭಾಗದವರಾದ ಮಹಾಂತೇಶ ನವಲಕಲ್, ವಿಕ್ರಮ ವಿಸಾಜಿ, ದೇವು ಪತ್ತಾರ, ಚಿದಾನಂದ ಸಾಲಿ, ಕಲಿಗಣನಾಥ ಗುಡದೂರ, ಅರುಣ ಜೋಳದಕೂಡ್ಲಿಗಿ, ಪೀರಬಾಷಾ ಬಳ್ಳಾರಿ ಅವರ ಬಗ್ಗೆ ಬಂದಿದೆ ಎಂದು ಹೇಳಿದಕ್ಕೆ ಪ್ರೇಮಸಾಗರ ಪಾಟೀಲ ಅವರು ಮರುದಿನ ಬೆಳಿಗ್ಗೆಯೇ ಕಂಪ್ಯೂಟರ್ ಎದುರಿಗೆ ಕುಳಿತುಕೊಂಡು ಇದೆಲ್ಲವನ್ನು ನೋಡಿದ್ದಾರೆ. ಕೆಂಡಸಂಪಿಗೆಯಲ್ಲಿನ ಉದ್ಯಮಿ ಅಶೋಕ ಖೇಣಿ ಅವರ ಮನೆತನದ `ಏನಕೇನ್ ಖೇಣಿ ಪುರಾಣ' ವೀಕ್ಷಿಸಿದ್ದೇನೆ. ಬ್ಲಾಗನಲ್ಲಿ ಎಲ್ಲ ವಿಷಯಗಳ ಮಾಹಿತಿ ಇದೆ ಎಂದು ಫೋನ ಮಾಡಿ ಪ್ರತಿಕ್ರಿಯಿಸಿದರು.
    ಮುಕ್ತ ಸಂವಾದದ ಬಗ್ಗೆ ಹೇಳಬೇಕೆಂದರೆ ಪ್ರತಿವಾರ ಕೆಲವರು ಕೆಲಕಾಲ ಒಂದೆಡೆ ಕುಳಿತು ವಿವಿಧ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದು ಈ ಸಭೆಗೆ ಈ ಹೆಸರು ಇಡಲಾಗಿದೆ. ಇದುವರೆಗೆ 13 ಸಭೆಗಳು ನಡೆದಿದ್ದು 11 ನೇ ಸಭೆಯಲ್ಲಿ ಹುಮನಾಬಾದನ ಸಾಕ್ಷಿ ಪ್ರತಿಷ್ಠಾನದಿಂದ ಬಿಡುಗಡೆ ಆಗಿರುವ 11 ಪುಸ್ತಕ್ ಗಳಲ್ಲಿ  ವೀರಣ್ಣ ಮಂಠಾಳಕರ್ ಅವರ 'ಗಾಂಧಿ ಆಗ್ಬೇಕಂದುಕೊಂಡಾಗ' ವೀರಶೆಟ್ಟಿ ಪಾಟೀಲ ಅವರ 'ಓ ನನ್ನ ಕನ್ನಡ' ವಿಶ್ವನಾಥ ಮುಕ್ತಾ ಅವರ `ಮೌನರಾಗ' ಮಲ್ಲಿಕಾರ್ಜುನ್  ಕಾಡಾದಿ ಅವರ `ನಿಸರ್ಗ' ಕವನ ಸಂಕಲನಗಳ ಬಗ್ಗೆಯೂ ಚರ್ಚಿಸಲಾಯಿತು. ಈಚೆಗೆ ನ್ಯೂಜೆರ್ಸಿಯಲ್ಲಿ ನಡೆದ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರಕಟ ಆಗಿರುವ `ದೀಪ ತೋರಿದೆಡೆಗೆ' ಕಥಾ ಸಂಕಲನದಲ್ಲಿ ಮುಡಬಿಯಂತಹ ಗ್ರಾಮೀಣ ಭಾಗದವರಾದ ಮಚೇಂದ್ರ ಅಣಕಲ್ ಅವರ `ಡಾಂಬಾರು ದಂಧೆ' ಕಥೆ ಪ್ರಕಟ ಆಗಿದೆ. ಈ ಬಗ್ಗೆಯೂ ಮುಕ್ತ ಸಂವಾದದಲ್ಲಿ ಹೆಮ್ಮೆಯಿಂದ ಚರ್ಚಿಸಿ ಮಚೇಂದ್ರ ಅವರಿಗೆ ಅಭಿನಂದನೆ ಹೇಳಲಾಯಿತು.
.................................................


ನಿನ್ನ ನೀ ಮರೆತಿರುವುದು 
 ಯಾರು  ಯಾರೆಂದು ಗುರುತಿಸಿ ಗುರಿ ತಲುಪುವಂತೆ ಮಾಡಿದೆ.  
ಅವರು ಗರಿಬಿಚ್ಚಿರುವಾಗ ನಿನ್ನ ನೀ ಮರೆತಿರುವುದು ನಿನ್ನದೇ ತಪ್ಪು.
ನೀನು ನೀನೇ, ನಿನ್ನಂತೆ ಪರರಿಲ್ಲ ಎಂದು ಲೋಕ ಹೇಳುತ್ತಿದೆ
ನಾನು ಯಾರೆಂಬುದರ ಪರಿವೆ ನಿನಗಿಲ್ಲದಿರುವುದು ನಿನ್ನದೇ ತಪ್ಪು.
ನಿನ್ನ ಕತ್ರುತ್ವ : ಕರ್ತವ್ಯ ಪಾಲನೆಯಿಂದ ಎಲ್ಲೆಡೆ ಕೀರ್ತಿ  ವ್ಯಾಪಿಸಿತು 
ಯಾರಿಂದಲೋ ಕಿಮ್ಮತ್ತು ದೊರೆತಿದೆ ಎಂದು ಭಾವಿಸುವುದು ನಿನ್ನದೇ ತಪ್ಪು.
ಯಾರಿಗೂ ಕೈಯೊಡ್ಡದೆ ಕಾಡದೆ ನಿನ್ನ ನೀನೇ ಬೆಳೆದೆ
ಸಾಧನೆಯ ಹಾದಿಯಲ್ಲಿನ ಕಷ್ಟ-ನಷ್ಟ ನೆನಪಿಟ್ಟುಕೊಳ್ಳದಿರುವುದು  ನಿನ್ನದೇ ತಪ್ಪು.
ನ್ಯಾಯ ಅನ್ಯಾಯವ ತಕ್ಕಡಿಯಲ್ಲಿ ತೂಗಿ ನಿನ್ನದೇ ನೀತಿ ರೂಪಿಸಿದೆ
ಬೇರೆಯವರು ಹಾಕಿದ ಲಕ್ಷಣರೇಖೆ ದಾಟದಿರುವುದು ನಿನ್ನದೇ ತಪ್ಪು.
ಅಸಲಿ, ನಕಲಿ ಯಾವುದೆಂಬುದು ನಿನ್ನಬಿಟ್ಟು ಖಾತ್ರಿಪಡಿಸುವವರಿಲ್ಲ
ನಿನ್ನ ಅಸಲಿಯತ್ತನ್ನು ಪರೀಕ್ಷಿಸಿಕೊಳ್ಳುತ್ತಿರುವುದು ನಿನ್ನದೇ ತಪ್ಪು.
                                         -ಮಾಣಿಕ ಆರ್.ಭುರೆ