ಶುಕ್ರವಾರ, ಅಕ್ಟೋಬರ್ 15, 2010

ನಿಜಸ್ಥಿತಿ ವಿಚಾರಿಸಲಿಲ್ಲ ..!!



ಪುಸ್ತಕ ಭಾರ ಹೆಚ್ಚಿತು
ಹಳೆಯ ಪಾಟಿಚೀಲ ಹರಿಯಿತು.
ಅಪ್ಪ ಅವ್ವನ ಕಷ್ಟ ನೋಡಿ 
ಹೊಸ ಚೀಲ ಬೇಡಲು 
ಮನಸ್ಸು ಹೆದರಿತು.
ಚಿಂತೆಯಲ್ಲಿದ್ದಾಗ 
ಉಪಾಯವೊಂದು ಹೊಳೆಯಿತು.
ಮನೆ ಮೂಲೆಯಲ್ಲಿನ 
ಗೊಬ್ಬರ ಚೀಲ ಹೆಗಲಿಗೇರಿತು.
ಅಕ್ಷರ ಕಲಿಯುವ ಉತ್ಸಾಹದಲ್ಲಿ 
ಚೀಲದ ಚಿಂತೆ ದೂರಾಯಿತು.
ಅಂತು ಸಾಲಿ ತಪ್ಪಿಸದಂಗಾಯ್ತು.
ಹಾದಿ ಬೀದಿಯಲ್ಲಿ 
ಎಲ್ಲರೂ ನೋಡಿದರು.
ಇಂಥ ಚೀಲ ಯಾಕೆಂದು 
ಶಿಕ್ಷಕರು ಹೊಡೆದರು.
ಒಬ್ಬರೂ ನಿಜಸ್ಥಿತಿ ವಿಚಾರಿಸಲಿಲ್ಲ
ಕರುಣೆ ತೋರಿ 
ಚೀಲವೊಂದನ್ನು ಕೊಡಿಸಲಿಲ್ಲ
-ಮಾಣಿಕ ಆರ್.ಭುರೆ 

ಗುರುವಾರ, ಅಕ್ಟೋಬರ್ 14, 2010

ಪ್ರಗತಿಯತ್ತ ಬಸವಕಲ್ಯಾಣ ಮತ್ತು 'ಬಸವ ಉತ್ಸವ'

ಕರ್ನಾಟಕ  ಸರ್ಕಾರದಿಂದ ಮಂಜೂರಾದ 50 ಲಕ್ಷ ರೂಪಾಯಿ ವೆಚ್ಚದಲ್ಲಿ 2011 ರ ಮಾರ್ಚ 25,26,27 ರಂದು ಶರಣರ ಕಾರ್ಯಕ್ಷೇತ್ರವಾದ ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ 2 ನೇಯ ಬಸವ ಉತ್ಸವ ಅದ್ದೂರಿಯಾಗಿ ನಡೆಯಿತು.
ಪ್ರಥಮದಿನ ಅದ್ದೂರಿ ಮೆರವಣಿಗೆ ನಡೆದರೆ ಮೂರು ದಿನಗಳ ಕಾಲ ಸಂಜೆ ಇಲ್ಲಿನ ರಥ ಮೈದಾನದಲ್ಲಿ ಸುಪ್ರಸಿದ್ಧ ಕಲಾವಿದರಿಂದ ನೃತ್ಯ, ಗಾಯನ, ನಾಟಕ ಹಮ್ಮಿಕೊಳ್ಳಲಾಗಿತ್ತು. ಹಿಂದಿ ಚಿತ್ರರಂಗದ ಪ್ರಸಿದ್ಧ ಗಾಯಕಿ ಅನುರಾಧಾ ಪೌಡವಾಲ್, ಗೀತಾ ಜಾವಡೇಕರ್, ವೆಂಕಟೇಶಕುಮಾರ ಧಾರವಾಡ,  ಸುವರ್ಣಾ  ರಾಠೋಡ ಭಾಲ್ಕಿ ಅವರು ತಮ್ಮ ಸುಮಧುರ ಕಂಠದಿಂದ ಹಾಡಿ ಜನಮನ ತಣಿಸಿದರು. ಸಂಗೀತ ನಿರ್ದೆಶಕ ಗುರುಕಿರಣ ಬೆಂಗಳೂರು ಮತ್ತು ಪ್ರಮೋದಾ ಉಪಾಧ್ಯಾಯ ಅವರ ನೃತ್ಯ ಎಲ್ಲರನ್ನು ಮೋಡಿ ಮಾಡಿತು. ಪ್ರತಿದಿನ ಮಧ್ಯಾಹ್ನ ವಿಚಾರಗೋಷ್ಠಿಗಳನ್ನು ಸಹ ಹಮ್ಮಿಕೊಳ್ಳಲಾಗಿತ್ತು. ರಾಜಕೀಯ, ಧಾರ್ಮಿಕ್ ಮುಖಂಡರು ಒಳಗೊಂಡು ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡು ಉಪನ್ಯಾಸಕ ನೀಡಿದರು.
  ಉತ್ಸವದ ಸಮಾರೋಪ ಸಮಾರಂಭದಲ್ಲಿ 'ಜಗಜ್ಯೋತಿ' ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.ಇದರಲ್ಲಿ ನಾನು (ಮಾಣಿಕ ಭುರೆ) ಬರೆದ `ಪ್ರಗತಿಯತ್ತ ಬಸವಕಲ್ಯಾಣ' ಎಂಬ ಲೇಖನ ಪ್ರಕಟವಾಗಿದೆ. ಸಂಚಿಕೆಯಲ್ಲಿನ ಲೇಖನಗಳ ಮತ್ತು ಅವುಗಳ ಲೇಖಕರ ವಿವರ ಮುಂದಿನಂತಿದೆ.
1) ಬಸವೇಶ್ವರ ವಿದ್ಯೆ  -ಡಾ.ಎಂ.ಎಂ.ಕಲ್ಬುರ್ಗಿ 
2) ಮೇದಿನಿಗೆ ಹೊಸ ಬೆಳಕು ತಂದವರು 
     -ರಂಜಾನ ದರ್ಗಾ 
3) ಬಸವಣ್ಣ ಮತ್ತು ಶಿಕ್ಷಣ 
   -ಡಾ.ಬಸವರಾಜ ಬಲ್ಲೂರ
4) ಬಸವಣ್ಣನವರ ಲೋಕಜ್ಞಾನ 
     -ಡಾ.ಗಂಗಾಂಬಿಕಾ ಪಾಟೀಲ
5) ಬಸವಣ್ಣ  -ಜಗನ್ನಾಥ ಕಮಲಾಪುರೆ
6) ವಿಶ್ವದ ಏಕೈಕ ನಿಜತತ್ವಜ್ಞಾನಿ ಬಸವಣ್ಣ 
     -ಮಾತೆ ತೇಜಸ್ವಿನಿ
7) ಅಷ್ಠಾವರಣ -ಅಕ್ಕ ಅನ್ನಪೂರ್ಣ
8) ಪಂಚಾಚಾರ್ಯರು 
    - ಕಲ್ಯಾಣಮ್ಮ ಲಂಗೋಟಿ
 9) ಷಟಸ್ಥಲ ಸ್ವಾನುಭಾವ
     -ಸಿದ್ಧರಾಮನ ಶರಣರು ಬೆಲ್ದಾಳ್
10) ವಚನ ಸಾಹಿತ್ಯ ಕನ್ನಡದ 
   ಸಾಂಸ್ಕೃತಿಕ ಸಂಪತ್ತು 
    -ಜಯದೇವಪ್ಪ ಜೈನಕೇರಿ
11) ವಚನ ಸಂಸ್ಕೃತಿಯ ಸಾಮಾಜಿಕ ಹರವು 
      - ಡಾ.ಟಿ.ಆರ್.ಚಂದ್ರಶೇಖರ
12) ವಚನಕಾರರ ವಚನ ಮೌಲ್ಯಗಳು 
      -ಡಾ.ರಘುಶಂಖ ಭಾತಂಬ್ರಾ
13) ಶರಣರ ದಾಂಪತ್ಯ ಜೀವನ 
       -ಪಂಚಾಕ್ಷರಿ ಪುಣ್ಯಶೆಟ್ಟಿ
14) ವಚನಗಳಲ್ಲಿ ಏನಿಲ್ಲ  
      -ಡಾ.ಜಗನ್ನಾಥ ಹೆಬ್ಬಾಳೆ
15) ಒಂದು ವಚನದ ವೈಜ್ಞಾನಿಕತೆ 
      -ಡಾ.ಶಿವಗಂಗಾ ರುಮ್ಮಾ
16) ಶರಣರ ಪರಿಸರ ಪ್ರಜ್ಞೆ 
      - ಪ್ರೊ.ಎಸ್.ವಿ.ಕಲ್ಮಠ
17) ಆಚಾರಸತಿ ಗಂಗಾಂಬಿಕೆ 
       -ಡಾ.ಜಯದೇವಿ ತಿಬಶೆಟ್ಟಿ
18) ಆಯ್ದಕ್ಕಿ ಲಕ್ಕಮ್ಮ: ಅಸಂಗ್ರಹತತ್ವ 
       -ಎಚ್. ಮಲಕಣ್ಣ
19) ಶಿವಶರಣ ಆಯ್ದಕ್ಕಿ ಮಾರಯ್ಯ 
      -ಡಾ.ಬಂಡಯ್ಯಾ ಸ್ವಾಮಿ
20) ಶರಣಲೀಲಾ ನಾಟ್ಯಪ್ರಿಯ 
      ಬಹುರೂಪಿ ಚೌಡಯ್ಯ 
     -ರುಕ್ಮೊದ್ದೀನ್ ಇಸ್ಲಾಂಪುರ
21) ಪ್ರಗತಿಯತ್ತ ಬಸವಕಲ್ಯಾಣ 
      -ಮಾಣಿಕ ಆರ್.ಭುರೆ
22) ಚಿತ್ರ ಸಂಪದ 
.......................................
ಪ್ರಗತಿಯತ್ತ ಬಸವಕಲ್ಯಾಣ
    
     'ಕಲ್ಯಾಣ ಕ್ರಾಂತಿ'ಯು ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಕೈಗೊಂಡ ಪರಿವರ್ತನೆಯ ಪ್ರಯತ್ನದ ಫಲವಾಗಿ ಘಟಿಸಿದ ಮಹಾಕ್ರಾಂತಿ. 12ನೇ ಶತಮಾನದಲ್ಲಿ ಅಸಹನೀಯ ಅಸ್ಪೃಶ್ಯತೆ, ಶೋಷಣೆಯಿಂದಾಗಿ ದೀನ, ದಲಿತ, ದುರ್ಬಲರ ಬದುಕು ಜರ್ಜರಿತವಾಗಿತ್ತು. ಅದಕ್ಕಾಗಿ ಸಮಾನತೆಯ ನವ ಸಮಾಜ ನಿರ್ಮಾಣಕ್ಕೆ  ಬಸವಣ್ಣನವರು ಟೊಂಕ ಕಟ್ಟಿ ನಿಂತರು. ಶರಣ ಗಣವನ್ನು ಸಂಘಟಿಸಿ ಅನುಭವ ಮಂಟಪದ ಮೂಲಕ ನವೀನ ವಿಚಾರಗಳ ಬೀಜವನ್ನು ನೆಡಲು ಪ್ರಯತ್ನಿಸಿದರು. ಎದುರಿಗೆ ನಿಂತು ಸಮಗಾರ ಹರಳಯ್ಯ ಮತ್ತು ಬ್ರಾಹ್ಮಣನಾದ ಮಧುವಯ್ಯನವರ ಮಕ್ಕಳ ಮದುವೆ ಮಾಡಿಸಿದರು. ಇದರಿಂದಾಗಿ ಎಲ್ಲೆಡೆ ಹಾಹಾಕಾರ ಎದ್ದಿತು. ಕೋಪಗೊಂಡ ಬಿಜ್ಜಳ ಅರಸನು ಹರಳಯ್ಯ ಮಧುವಯ್ಯನವರನ್ನು ಆನೆ ಕಾಲಿಗೆ ಕಟ್ಟಿ ಎಳೆಯುವ ಶಿಕ್ಷೆ ಕೊಟ್ಟ. ಜಾತಿವಾದಿಗಳು ಶರಣರನ್ನು `ಕಲ್ಯಾಣ'ದಿಂದ ( ಇಂದಿನ ಬಸವಕಲ್ಯಾಣ) ಓಡಿಸಿದರು. ಅವರು ಬರೆದ ಅಮೂಲ್ಯ ತತ್ವಗಳನ್ನು ಒಳಗೊಂಡ ವಚನ ಸಾಹಿತ್ಯವನ್ನು ಸುಟ್ಟರು. ಹೀಗಾಗಿ ಕಾಲಕ್ರಮೇಣ ಎಲ್ಲವೂ ಹಾಳಾಗಿ ಮಣ್ಣಿನಲ್ಲಿ ಹೂತು ಹೋಯಿತು. ಒಂದು ಕಾಲದಲ್ಲಿ ವೈಭವದಿಂದ ಮೆರೆದಿದ್ದ ಅಂದಿನ ಭವ್ಯ ಪಟ್ಟಣದ ಯಾವುದೇ ಕುರುಹುಗಳು ಇಲ್ಲಿ ಉಳಿಯಲಿಲ್ಲ. ಬಸವಾದಿ ಶರಣರ ನೇತೃತ್ವದಲ್ಲಿ ನಿರ್ಮಾಣಗೊಂಡ ಮಠ, ಮಂದಿರ, ಮಂಟಪ ಯಾವುದೂ ಇಲ್ಲದಂತಾಯಿತು.
     ಹಾಗೆ ನೋಡಿದರೆ, ಬಸವಣ್ಣನವರು ವರ್ಗ, ಜಾತಿ ಭೇದದ ಬಗ್ಗೆ ತಾಳಿದ್ದ ನಿಲುವಿನಂತೆಯೇ ಸ್ಥಾವರಕ್ಕೂ ವಿರೋಧಿಸಿದ್ದರು. `ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡುವೆ ಬಡವನಯ್ಯ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶವಯ್ಯಾ...' ಎಂದು ಅವರು ಒಂದು ವಚನದಲ್ಲಿ ಹೇಳಿದ್ದಾರೆ. ಇದು ಅವರು ದೇವಾಲಯ ಸಂಸ್ಕೃತಿ ಬಗ್ಗೆ ಹೊಂದಿದ್ದ ತಿರಸ್ಕಾರದ ಭಾವನೆಯನ್ನು ಎತ್ತಿ ತೋರಿಸುತ್ತದೆ. ಒಂದುವೇಳೆ ಈ ತತ್ವವನ್ನು ಆಧಾರವಾಗಿಟ್ಟುಕೊಂಡು ಯೋಚಿಸಿದರೆ ಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣದಲ್ಲಿ ಏನೂ ನಿರ್ಮಾಣ ಆಗಿಲ್ಲ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ.
    ಆದರೆ ಅಂದು ಅವರ ಕರೆಗೆ ಓಗೊಟ್ಟು ದೂರದೂರದ ಅಸಂಖ್ಯಾತ ಶರಣರು ಇಲ್ಲಿಗೆ ಆಗಮಿಸಿದರು. ಅವರೆಲ್ಲರೂ ಶಿವಯೋಗ ಸಾಧನೆ ಮಾಡುವುದಕ್ಕೆ ಹಾಗೂ ಒಂದೆಡೆ ಕುಳಿತು ಚರ್ಚಿಸಲು ಕೆಲವೊಂದು ಕಟ್ಟಡಗಳನ್ನು ಕಟ್ಟಿದರು. ಮಹಾಮನೆ, ಮಠ, ಅನುಭವ ಮಂಟಪವನ್ನು ನಿರ್ಮಿಸಿದರು ಎಂಬುದು ದಾಖಲೆಗಳಿಂದ ತಿಳಿದು ಬರುತ್ತದೆ. ವಿಪರ್ಯಾಸವೆಂದರೆ  ನಂತರದ ಕಾಲದಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ವಾಸ್ತವಿಕತೆಯನ್ನು ಅರಿಯುವ ಪ್ರಯತ್ನ ನಡೆದಿಲ್ಲ ಉತ್ಖನನ ಕೈಗೊಂಡು ಮಣ್ಣಿನಡಿ ಹೂತುಹೋಗಿರುವುದನ್ನು ತೆಗೆಯಲು ಯತ್ನಿಸಲಾಗಿಲ್ಲ. ಹೀಗಾಗಿ ಬಸವಣ್ಣನ ಕಾಲದ `ಕಲ್ಯಾಣ' ಕೇವಲ ಕಲ್ಪನೆಯಾಗಿಯೇ ಉಳಿದಿದೆ.
ಇತಿಹಾಸ:
     ಐತಿಹಾಸಿಕ ಆಧಾರಗಳ ಪ್ರಕಾರ ಕಲ್ಯಾಣವು 9ರಿಂದ 12ನೇ ಶತಮಾನದವರೆಗೆ ಚಾಲುಕ್ಯರ ರಾಜಧಾನಿಯಾಗಿತ್ತು. ಅಂದು ಕಲ್ಯಾಣದಂಥ ಪಟ್ಟಣ ಎಲ್ಲಿಯೂ ಇರಲಿಲ್ಲ ಎಂದು ಕೆಲವರು ಬರೆದಿಟ್ಟಿದ್ದಾರೆ. ವಚನಗಳಲ್ಲಿಯೂ ಕಲ್ಯಾಣದ ವಿಸ್ತಾರ ಮತ್ತು ಭವ್ಯತೆಯ ವರ್ಣನೆ ಬರುತ್ತದೆ. ಕ್ರಾಂತಿ ನಡೆದು ಶರಣರು ಇಲ್ಲಿಂದ ಬೇರೆಡೆ ಹೋದ ನಂತರವೂ ದೇವಗಿರಿ ಯಾದವರು, ಕಾಕತೀಯರು ಆಳ್ವಿಕೆ ನಡೆಸುತ್ತಾರೆ. ನಂತರ ಮುಸ್ಲಿಂ ದೊರೆಗಳಾದ ತುಘಲಕ್, ಬಹಮನಿ ಸುಲ್ತಾನರು, ಮೊಗಲ ದೊರೆಗಳು ಇಲ್ಲಿ ಆಳಿದ್ದಾರೆ. ಕೆಲಕಾಲ ಮರಾಠರ ಶಿವಾಜಿ ಸಹ ಇಲ್ಲಿನ ಕೋಟೆಯನ್ನು ವಶಪಡಿಸಿಕೊಂಡ ಬಗ್ಗೆ ಇತಿಹಾಸ ಹೇಳುತ್ತದೆ. 1740 ರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆಯುವವರೆಗೆ ಇದು ಹೈದ್ರಾಬಾದ ಸಂಸ್ಥಾನದ ನಿಜಾಮ ಅರಸರು ನೇಮಿಸಿದ ನವಾಬ್ರ ಆಧೀನದಲ್ಲಿತ್ತು.
       ಮುಖ್ಯವೆಂದರೆ `ಕಲ್ಯಾಣ ಕ್ರಾಂತಿ'ಯ ಕಾಲದ ಯಾವುದೇ ಕುರುಹು ಹೇಗೆ ಉಳಿದಿಲ್ಲವೋ ಹಾಗೆಯೇ ನಂತರ ಆಳ್ವಿಕೆ ನಡೆಸಿದ ಅರಸರ ಕಾಲದಲ್ಲಿನ ವೈಭವವೂ ಇಂದು ನೋಡಲು ಸಿಗುವುದಿಲ್ಲ. ಅರಸರು, ಸಾಮಂತರು ಮತ್ತು ನವಾಬ್ರು ಕೇವಲ ಕೋಟೆಯ ಸಂರಕ್ಷಣೆ ಮಾತ್ರ ಮಾಡಿದ್ದಾರೆ. ಆದ್ದರಿಂದ ಅದನ್ನು ಬಿಟ್ಟರೆ ಹಿಂದಿನದು ಇಲ್ಲಿ ಏನೂ ಇಲ್ಲ. ಕೋಟೆ ಸಹ ಅನೇಕ ಸಲ ದುರುಸ್ತಿ ಮಾಡಿದ್ದರಿಂದ ಮೂಲ ರೂಪದಲ್ಲಿ ಇಲ್ಲದಿರುವುದು ಅದನ್ನು ನೋಡಿದಾಗ ಗೊತ್ತಾಗುತ್ತದೆ. ಇಲ್ಲಿ ಮುಸ್ಲಿಂ ಅರಸರು ಹೆಚ್ಚಿನ ಕಾಲ ಆಳ್ವಿಕೆ ನಡೆಸಿದ್ದರಿಂದ ಮಠ, ಮಂದಿರಗಳ  ಅಭಿವ್ರಧಿ  ಆಗಿರಲಿಕ್ಕಿಲ್ಲ ಎಂದೂ ಕೆಲವರು ಅಭಿಪ್ರಾಯಪಡುತ್ತಾರೆ. ಆದರೂ ಇಂದು ಬಸವಕಲ್ಯಾಣದ ಸುತ್ತ ಕೆತ್ತನೆಯ ಕಲ್ಲುಗಳು, ಮೂರ್ತಿಗಳು ಮತ್ತು ದೇವಾಲಯಗಳ ಅವಶೇಷಗಳು ದೊರೆಯುತ್ತವೆ. ಶಿವಪುರ, ಉಮಾಪುರ, ಮೋರಖಂಡಿಗಳಲ್ಲಿ ಭವ್ಯ ಶಿಲಾ ದೇಗುಲಗಳಿವೆ. ಇವು ಇಲ್ಲಿನ ಗತವೈಭವ ಸಾರುತ್ತವೆ ಎನ್ನಬಹುದು.
ಅಭಿವೃದ್ಧಿಯತ್ತ ದಾಪುಗಾಲು:
     ಹೀಗೆ ಕಲ್ಯಾಣ ಮಹತ್ವದ ಸ್ಥಳವಾದರೂ 20 ನೇ ಶತಮಾನದವರೆಗೂ ಇದರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಮಾತ್ರ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದವು. ವಚನ ಪಿತಾಮಹ ಫ.ಗು.ಹಳಕಟ್ಟಿಯವರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಬೆಳಕಿಗೆ ತಂದು ಮಹತ್ವದ ಕಾರ್ಯ ಮಾಡಿದರು. ಅದರಂತೆ ಸೊಲ್ಲಾಪುರದ ಬಾಬಾಸಾಹೇಬ್ ಮಲ್ಲಪ್ಪ ವಾರದ್ ಅವರು `ಕಲ್ಯಾಣದ ಕಂಪು' ಎಲ್ಲೆಡೆ ಹರಡಲು ಪ್ರಯತ್ನಿಸಿ ಮರೆಯಲಾಗದ ಕಾರ್ಯ ಮಾಡಿದ್ದಾರೆ. 1948 ರಲ್ಲಿ ಇಲ್ಲಿ ಬಸವೇಶ್ವರ ದೇವಸ್ಥಾನ ಪಂಚ ಸಮಿತಿ ಸ್ಥಾಪಿಸಿ ಶರಣ ಸ್ಮಾರಕಗಳ  ಅಭಿವ್ರಧಿ  ಮತ್ತು ಸಂರಕ್ಷಣೆ ಕೈಗೊಂಡರು. ಕೆಲ ದಾಖಲೆ ಹಾಗೂ ವಚನಗಳನ್ನು ಆಧಾರವಾಗಿಟ್ಟುಕೊಂಡು ಅಳಿದುಳಿದ ಮಠ, ಮಂದಿರ, ಗವಿಗಳಿಗೆ ಶರಣರ ಹೆಸರನ್ನು ಕೊಟ್ಟರು. ಬಸವಜಯಂತಿಗೆ ಜಾತ್ರೆ ಆರಂಭಿಸಿದರು. ಸರ್ಕಾರ್  ಕಲ್ಯಾಣಕ್ಕೆ `ಬಸವ ಕಲ್ಯಾಣ' ಎಂದು ನಾಮಕರಣ ಮಾಡುವಂತೆ ಮಾಡಿದರು.
     ಇದಲ್ಲದೆ ಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಮಾಡುವಲ್ಲಿ ಭಾಲ್ಕಿಯ ಲಿಂ.ಚನ್ನಬಸವ ಪಟ್ಟದ್ದೇವರು ಶ್ರಮಿಸಿದ್ದಾರೆ. ಮಾಜಿ ಸಚಿವರಾದ ಭೀಮಣ್ಣ ಖಂಡ್ರೆ, ವಿಶ್ವನಾಥರೆಡ್ಡಿ ಮುದ್ನಾಳ, ಮಾಜಿ ಉಪ ರಾಷ್ಟ್ರಪತಿ ಬಿ.ಡಿ.ಜತ್ತಿ, ಡಾ.ಬಿ.ವಿ.ಪಟೇಲ್, ಶಾಸಕರಾದ ಬಸವರಾಜ ಪಾಟೀಲ ಅಟ್ಟೂರ್, ಮಾಜಿ ಶಾಸಕರಾದ ಎಂ.ಜಿ.ಮುಳೆ, 
ಮಲ್ಲಿಕಾರ್ಜುನ್  ಖೂಬಾ, ಅನ್ನಪೂರ್ಣಾ ಬಾಯಿ ರಗಟೆ, ಸಿದ್ರಾಮಪ್ಪ ಖೂಬಾ, ಈಶ್ವರ ಖಂಡ್ರೆ ಭಾಲ್ಕಿ, ಚಿತ್ರದುರ್ಗ ಶಿವಮೂರ್ತಿ ಮುರುಘರಾಜೇಂದ್ರ ಶರಣರು, ಗದಗನ ಡಾ.ಸಿದ್ಧಲಿಂಗ ತೋಂಟದಾರ್ಯ ಜಗದ್ಗುರು, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಹುಲಸೂರು ಶಿವಾನಂದ ಸ್ವಾಮಿ, ಬೆಲ್ದಾಳ ಸಿದ್ಧರಾಮ ಶರಣರು, ವಿ.ಸಿದ್ಧರಾಮಣ್ಣ, ಭಾತಂಬ್ರಾ ಶಿವಯೋಗೇಶ್ವರ ಸ್ವಾಮಿ ಮುಂತಾದವರು ಇಲ್ಲಿನ ಪ್ರಗತಿ ಕಾರ್ಯದಲ್ಲಿ ಸಹಕರಿಸಿದ್ದಾರೆ. ಶರಣತತ್ವ ಪ್ರಸಾರಕ್ಕಾಗಿ ದುಡಿದಿದ್ದಾರೆ. 2001 ರಿಂದ ಈಚೆಗೆ ಇಲ್ಲಿನ ಶರಣ ಸ್ಮಾರಕಗಳ  ಅಭಿವ್ರಧಿಗೆ  ಉನ್ನತ ಮಟ್ಟದಲ್ಲಿ ಪ್ರಯತ್ನ ಆರಂಭವಾಯಿತು. ಬೆಂಗಳೂರಿನ ವೀರಶೈವ ಕ್ಷೇಮಾಭ್ಯುದಯ ಟ್ರಸ್ಟ್ನ ಅಧ್ಯಕ್ಷರು ಹಾಗೂ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ  ಎಸ್.ಬಿ.ಮುದ್ದಪ್ಪ ಅವರು `ಬಸವಣ್ಣನವರ ಅರಿವಿನ ಮನೆ'ಯ ಅಭಿವೃದ್ಧಿ ಕೈಗೆತ್ತಿಕೊಂಡರು.
ಅಭಿವೃದ್ಧಿ ಮಂಡಳಿ ರಚನೆ:
    2005 ರಲ್ಲಿ  ಸರ್ಕಾರ `ಬಸವಕಲ್ಯಾಣ ಅಭಿವೃದ್ಧಿ ಮಂಡಳಿ' ರಚಿಸಿದ್ದರಿಂದ ಮಂಡಳಿಯಿಂದ ಕೆಲಸ ಆರಂಭವಾಯಿತು. ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮದ ಅಭಿವೃದ್ಧಿ ಕೈಗೊಂಡ ನಂತರ ಅವರ ಕಾರ್ಯಕ್ಷೇತ್ರವಾದ `ಕಲ್ಯಾಣ'ದ ಕಡೆಗೆ ಸರ್ಕಾರ ವಿಶೇಷ ಲಕ್ಷ ವಹಿಸಿತು. ಕರ್ನಾಟಕ ಸರ್ಕಾರವು 1-11-2003 ರಂದು ಮಂಡಳಿ ರಚಿಸುವುದಾಗಿ ಘೋಷಿಸಿತು. ಈ ಸಂಬಂಧ ವರದಿ ಸಿದ್ಧವಾದ ನಂತರ 10-11-2004 ರಂದು ರಾಜ್ಯದ ರಾಜ್ಯಪಾಲರ ಅನುಮೋದನೆಯೊಂದಿಗೆ ಅಧ್ಯಾದೇಶವನ್ನು ಹೊರಡಿಸಲಾಯಿತು. ನಂತರ ವಿಧಾನ ಮಂಡಲದ ಉಭಯ ಸದನಗಳಲ್ಲಿ ವಿಧೇಯಕವನ್ನು ಮಂಡಿಸಿ 2-4-2005 ರಂದು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಅಧಿನಿಯಮ ಜಾರಿಗೆ ತರಲಾಯಿತು.
    ಮಂಡಳಿಗೆ ಮುಖ್ಯಮಂತ್ರಿಯವರು ಅಧ್ಯಕ್ಷರಾಗಿರುತ್ತಾರೆ. ಮಂಡಳಿಯಿಂದ 25-6-2006 ಮತ್ತು 8-11-2008 ರಂದು ಎರಡು ಸಭೆಗಳು ನಡೆದಿವೆ. ರಾಜ್ಯ ಹಣಕಾಸು ನಿಗಮದ ನಿರ್ದೆಶಕರಾದ ಡಾ.ಎಸ್.ಎಂ.ಜಾಮದಾರ ಅವರು ಮಂಡಳಿ ವಿಶೇಷಾಧಿಕಾರಿ ಆಗಿದ್ದಾರೆ. ಒಬ್ಬರು ಪ್ರತ್ಯೇಕ ಆಯುಕ್ತರಿದ್ದಾರೆ. ಮಂಡಳಿಯ ಕಾಮಗಾರಿ ಪುರಾತನ ಶೈಲಿಯಲ್ಲಿ ಹಾಗೂ ಶರಣ ತತ್ವಕ್ಕೆ ಅನುಗುಣವಾಗಿ ಕೈಗೊಳ್ಳುವ ಉದ್ದೇಶದಿಂದ ಸಲಹಾ ಸಮಿತಿ ಸಹ ರಚಿಸಲಾಗಿದೆ. ಡಾ.ಪಾಟೀಲ ಪುಟ್ಟಪ್ಪ (ಪತ್ರಕರ್ತರು, ಸಾಹಿತಿ) ಡಾ.ಎಸ್.ಶೆಟ್ಟರ್ (ಇತಿಹಾಸ ತಜ್ಞರು) ಡಾ.ಎ.ಸುಂದರ (ಪ್ರಾಚ್ಯವಸ್ತು ತಜ್ಞರು) ಡಾ.ಎಚ್.ಚಂದ್ರಶೇಖರ (ಭೂಗರ್ಭಶಾಸ್ತ್ರಜ್ಞರು) ಡಾ.ಎಂ.ಎನ್.ಜವರಯ್ಯ (ಸಾಹಿತಿ) ಡಾ.ಗೀತಾಂಜಲಿರಾವ (ಪುರಾತತ್ವ ಶಾಸ್ತ್ರಜ್ಞರು) ಅಶೋಕ (ಚಲನಚಿತ್ರ ನಟ) ಸಮಿತಿಯಲ್ಲಿದ್ದಾರೆ.
ಸ್ಮಾರಕರಗಳ ಕಾಮಗಾರಿ 
    ಪ್ರಥಮ ಹಂತದಲ್ಲಿ ಒಟ್ಟು 19 ಸ್ಮಾರಕಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಮಂಡಳಿಗೆ ಸರ್ಕಾರವು ಪ್ರಥಮವಾಗಿ 5 ಕೋಟಿ ರೂ. ಮೀಸಲಿಟ್ಟು ಅದರಲ್ಲಿ 50 ಲಕ್ಷ ರೂ. ಮಾತ್ರ ಬಿಡುಗಡೆ ಮಾಡಿತು. ನಂತರ 2006-07 ನೇ ಸಾಲಿನ ಬಜೆಟ್ನಲ್ಲಿ 20 ಕೋಟಿ ರೂ. ಕಾಯ್ದಿರಿಸಲಾಯಿತು. ಈಚೆಗೆ 32 ಕೋಟಿ ಮಂಜೂರು ಮಾಡಿದೆ. ಶರಣ ಸಾಹಿತ್ಯ ಸಂಶೋಧನಾ ಕೇಂದ್ರ ಹಾಗೂ ಗ್ರಂಥಾಲಯದ ಕಾಮಗಾರಿ ಪೂರ್ಣಗೊಂಡಿದ್ದು ಅದನ್ನು ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ  ಹಸ್ತಾಂತರಿಸಲಾಗಿದೆ. ಅಲ್ಲಮಪ್ರಭುದೇವರ ಗದ್ದುಗೆಮಠ, ಬಸವಣ್ಣನವರ ಅರಿವಿನ ಮನೆ, ಮಡಿವಾಳ ಮಾಚಿದೇವರ ಹೊಂಡ, ಜೇಡರ ದಾಸಿಮಯ್ಯನ ಮಠ, ಅಕ್ಕನಾಗಮ್ಮನ ಗವಿ, ನುಲಿ ಚಂದಯ್ಯನ ಗವಿ, ಕಂಬಳಿ ನಾಗಿದೇವನ ಮಠ, ಉರಿಲಿಂಗ ಪೆದ್ದಿ ಮಠ, ಸಮಗಾರ ಹರಳಯ್ಯನವರ ಗವಿ, ಅಂಬಿಗರ ಚೌಡಯ್ಯ ಗವಿ,  ವಿಜ್ಞಾನೇಶ್ವರ ಗುಹೆ, ಪಂಚಸೂತ್ರದ ಗವಿ, ಬಸವವನ, ಬಸವೇಶ್ವರ ದೇವಸ್ಥಾನ ಮುಂತಾದೆಡೆ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇವುಗಳಲ್ಲಿ ಕೆಲವೊಂದು ಪೂರ್ಣಗೊಂಡಿವೆ. 12-11-2010 ರಂದು ಇಲ್ಲಿ ನಡೆದ ಮಂಡಳಿಯ ತಜ್ಞರ  ಸಲಹಾ ಸಮಿತಿ ಸಭೆಯಲ್ಲಿ ಅನುಭವ ಮಂಟಪ ಪುನರ್ ನಿರ್ಮಾಣ ಮಾಡಲು ನಿರ್ಣಯಿಸಲಾಗಿದೆ.
     ಈಗಾಗಲೇ ಅಭಿವೃದ್ಧಿ ನಡೆಸಿದ ಎಲ್ಲ ಸ್ಮಾರಕಗಳ ಎದುರು ಚಾಲುಕ್ಯ ಶೈಲಿಯಲ್ಲಿ ಗ್ರಾನೈಟ್ ಕಲ್ಲಿನ ಭವ್ಯ ಹಾಗೂ ಸುಂದರ ಮಂಟಪಗಳನ್ನು ನಿರ್ಮಿಸಲಾಗಿದೆ. ಆಕರ್ಷಕ ಪ್ರವೇಶ ದ್ವಾರಗಳನ್ನು, ಸುತ್ತಲೂ ಆವರಣಗೋಡೆ, ಉದ್ಯಾನವನ ನಿರ್ಮಿಸಲಾಗಿದೆ. ಪ್ರವಾಸಿಗರ ಕೋಣೆಗಳನ್ನು ಕಟ್ಟಲಾಗಿದೆ. ತ್ರಿಪುರಾಂತ ಕೆರೆ ಅಭಿವೃದ್ಧಿಪಡಿಸಿ ಸುತ್ತಲೂ ಮಕ್ಕಳ ಉದ್ಯಾನ ನಿರ್ಮಿಸಲಾಗುತ್ತಿದೆ ವಿಶೇಷವಾಗಿ ನುಲಿ ಚಂದಯ್ಯ ಗವಿ, ಅಂಬಿಗರ ಚೌಡಯ್ಯ ಗವಿಯ ಪರಿಸರ ಸುಂದರವಾಗಿ ರೂಪುಗೊಂಡಿದೆ. ಬಂದವರ ಓಣಿ ಹತ್ತಿರದ ಗುಡ್ಡ ಗಿಡಗಂಟೆಗಳಿಂದ ಕಂಗೊಳಿಸುತ್ತಿದೆ. ಒಟ್ಟಾರೆ ಇಲ್ಲಿನ ಗವಿಗಳು ಮತ್ತು ಮಂದಿರಗಳು ಈಗ ಹೊಸ ರೂಪ ಪಡೆದುಕೊಂಡಿವೆ. ಬಸವಣ್ಣನ ಕಲ್ಯಾಣದಲ್ಲಿ ಕಲ್ಲರಳಿ ಹೂವಾಗುತ್ತಿವೆ. ಗತವೈಭವ ಸಾರಲು, ಶರಣತತ್ವದ ಕಂಪು ಎಲ್ಲೆಡೆ ಬೀರಲು. ಆದ್ದರಿಂದ ಕೆಲ ವರ್ಷಗಳಲ್ಲಿ  ಈ ಸ್ಥಳ  ಅಂತಾರಾಷ್ಟೀಯ ಮಟ್ಟದ ಪ್ರವಾಸಿ ತಾಣವಾಗಿ ಕಂಗೊಳಿಸಲಿದೆ. 
   -ಮಾಣಿಕ ಆರ್.ಭುರೆ(9845429001)

ಭೂಮಂಡಲ ಮತ್ತು ಸಂವಾದ




ಇ- ಮೇಲ್ ಬಗ್ಗೆಯೂ ಗೊತ್ತಿಲ್ಲದ ಸಮಯದಲ್ಲಿ ಹಿರಿಯ ಪತ್ರಕರ್ತರಾದ ದೇವು ಪತ್ತಾರ್ ಸರ್ ಅವರದ್ದು ಬ್ಲಾಗ್ ಇದೆ ಎಂಬುದು  ಗೆಳೆಯರಾದ ನಾಗೇಶ ಪ್ರಭಾ ಮತ್ತು ಶಶಿ ಶೆಂಬೆಳ್ಳಿ ಅವರಿಂದ ಗೊತ್ತಾಯಿತು. ಅದು ಹೇಗಿರುತ್ತದೆ ಎಂಬ ಕುತೂಹಲ ಕಾಡಿದ್ದರಿಂದ ಇದರ ಬಗ್ಗೆ ತಿಳಿದುಕೊಳ್ಳಲು ಪತ್ತಾರ ಅವರನ್ನು ಭೇಟಿಯಾದೆ. ಅವರು ಲ್ಯಾಪ್ಟಾ ಪನಲ್ಲಿ ತಮ್ಮ `ಚಿನ್ನದ ಹುಡುಗ' ಬ್ಲಾಗ್ ತೋರಿಸಿದರು. ಬೇರೆ ಬೇರೆ ಬ್ಲಾಗಗಳಲ್ಲಿ ಬರೆದಿರುವ ಬಗ್ಗೆಯೂ ಹೇಳಿದರು.
   ಬ್ಲಾಗಗಳಲ್ಲಿ ಅವರು ಆಸಕ್ತಿದಾಯಕ ಮತ್ತು ಮಾಹಿತಿಪೂರ್ಣ ಲೇಖನ ಬರೆಯುತ್ತಾರೆ. ಆದರೂ ಈ ಬಗ್ಗೆ ಹೆಚ್ಚಾಗಿ ಬೇರೆಯವರಿಗೆ ಹೇಳಿಕೊಳ್ಳುವುದಿಲ್ಲ. ಪತ್ತಾರ ಅವರು ಯಾವಾಗಲೂ ಏನಾದರೊಂದು ಮಾಡುತ್ತಿರುತ್ತಾರೆ. ಆದರೆ ಮಾಡಿಯೂ ಮಾಡದಂತೆ ಇರುತ್ತಾರೆ. ಬೀದರ ಇತಿಹಾಸ, ಪರಂಪರೆ ಬಗ್ಗೆ ಮಹಮ್ಮದ್ ಗವಾನನ ಬಗ್ಗೆ ಅವರು ಹೆಕ್ಕಿ ತೆಗೆದಷ್ಟು ಇದುವರೆಗೂ ಯಾರೂ ಆ ಕಾರ್ಯ ಮಾಡಿಲ್ಲ. ಅವರ `ಕ್ಯಾಮೆರಾ ಎಂಜಿನಿಯರ್ ಗುಲಾಂ ಮುಂತಾಕಾ' ಕೃತಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾಗಿದೆ. ಬೆಂಗಳೂರು ಕ್ರೈಸ್ಟ್ ಯುನಿವರ್ಸಿಟಿಯವರು `ಈಗ ಹೀಗಿರುವ ಲೋಕದಲ್ಲಿ' ಪುಸ್ತಕ ಪ್ರಕಟಿಸಿದ್ದಾರೆ. `ಮಹಾದೇವಬಾಬಾ ಮೆಡೋಸ್ ಟೇಲರ್' ಕೃತಿಯನ್ನು ಪತ್ತಾರರು ಸಂಪಾದಿಸಿದ್ದಾರೆ.
     ಬೀದರನ ಪ್ರಮುಖ ಕತೆಗಾರರಾದ ಗುರುನಾಥ ಅಕ್ಕಣ್ಣ ಅವರು ಈಚೆಗೆ ಬಸವಕಲ್ಯಾಣದಲ್ಲಿ ನಡೆದ ಅವರ 'ಕಲ್ಲಣ್ಣನ್ ಕಂಪ್ಲೆಂಟ್ ಪ್ರಕರಣ' ಕಥಾ ಸಂಕಲನದ ಬಿಡುಗಡೆ ಸಮಾರಂಭದ ಸಮಯಲ್ಲಿ ಸಿಕ್ಕಾಗ ಪತ್ತಾರ ಅವರ ಸಾಹಿತ್ಯದ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ಆದ್ದರಿಂದ ಈ ಬಗ್ಗೆ ವಿಚಾರಗೋಷ್ಠಿ ಆಯೋಜಿಸುವುದು ಅವಶ್ಯಕವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದು ಇದುವರೆಗೆ ಆಗಿಲ್ಲ. ಆದರೆ ಸಂತಸದ ಸಂಗತಿ ಎಂದರೆ ಈಚೆಗೆ ಬ್ಲಾಗ್ ನಲ್ಲಿ ಪತ್ತಾರರ ಬಗ್ಗೆ ಸಾಕಷ್ಟು ಮಾಹಿತಿ ಬಂದಿದೆ. ಕೆಂಡ ಸಂಪಿಗೆಯಲ್ಲಿನ ರಹಮತ್ ತರಿಕೇರೆ ಅವರ 'ಹೊಸ ತಲೆಮಾರಿನ ಲೇಖಕರು' ಅಂಕಣದಲ್ಲಿ ಇವರ ಬಗ್ಗೆ ಬರೆಯಲಾಗಿದೆ. ಅವಧಿಯಲ್ಲಿಯೂ ಅವರ ಬಗ್ಗೆ ಲೇಖನ ಬಂದಿದೆ.
  ಪತ್ತಾರ ಅವರಿಗೆ ಒಂದು  ಬ್ಲಾಗ್ ನಿಂದ   ಏನು ಲಾಭ ಆಗಿದೆಯೋ ಅವರು ಇನ್ನೊಂದು ಬ್ಲಾಗ್ (ಚಹರೆ) ಆರಂಭಿಸುತ್ತೇನೆ ಎಂದು ಹೇಳಿದ್ದಾರೆ ಎಂದು ಅವಧಿಯಲ್ಲಿ ಬರೆಯಲಾಗಿದೆ.  ನನಗೂ ಬ್ಲಾಗ್ ಆರಂಭಿಸುವಾಗ ಈ ಪ್ರಶ್ನೆ ಕಾಡಿದೆ. ಆದರೂ ಲಾಭ ಹಾನಿಯ ಲೆಕ್ಕ ಹಾಕದೆ 'ಭೂಮಂಡಲ' ಆರಂಭಿಸುತ್ತಿದ್ದೇನೆ. ( ಅಸಲಿಗೆ ಬ್ಲಾಗ್ ನಿಂದ ಲಾಭ ಹೇಗೆ ಹಾನಿ ಹೇಗೆ ಎಂಬುದು ನನಗೆ ತಿಳಿದಿಲ್ಲ.) ಬ್ಲಾಗ್ ರಚಿಸುವಾಗ ನನಗೆ ಬೇಕಾಗಿದ್ದ ಯಾವುದೇ ಹೆಸರು ಸ್ವೀಕೃತ ಆಗಲಿಲ್ಲ. 
ಆದ್ದರಿಂದ  BHURE  ಮತ್ತು    MANIK    ಈ ಹೆಸರುಗಳಿಂದ ಪ್ರಥಮ ಮೂರು ಅಕ್ಷರಗಳನ್ನು ತೆಗೆದುಕೊಂಡು ( BHU+ MAN) ಪ್ರಯತ್ನಿಸಿದೆ. ಅದು (BHUMANDAL) ಭೂಮಂಡಲ ಆಗಿದೆ.
    ನನ್ನ  ಬ್ಲಾಗ್ ನ್ನು   ಪ್ರಥಮವಾಗಿ ವೀಕ್ಷಿಸಿರುವ ಬಸವಕಲ್ಯಾಣ ಎಂಜಿನಿಯರಿಂಗ್ ಕಾಲೇಜಿನ ಅಧೀಕ್ಷಕರಾದ ಪ್ರೇಮಸಾಗರ ಪಾಟೀಲ ಅವರು ಸರಿಯಾದ ಹೆಸರು ಇಟ್ಟಿದ್ದೀರಿ ಎಂದರು. ಇವರ ಬಗ್ಗೆ ಏಕೆ ಪ್ರಸ್ತಾಪಿಸುತ್ತಿದ್ದೇನೆ ಎಂದರೆ ಪ್ರತಿವಾರ ಇಲ್ಲಿ ನಡೆಯುವ ಮುಕ್ತ ಸಂವಾದ ಸಭೆಯಲ್ಲಿ ಇವರೂ ಭಾಗವಹಿಸುತ್ತಾರೆ. 13 ನೇ ಸಭೆಯಲ್ಲಿ ಬ್ಲಾಗ್ ನಲ್ಲಿ  ದೊರೆಯುವ ಮಾಹಿತಿ ಬಗ್ಗೆ ನನಗೆ ತಿಳಿದಷ್ಟನ್ನು ವಿವರಿಸಿದ್ದೇ. ಕೆಂಡ ಸಂಪಿಗೆಯ ಹೊಸ ತಲೆಮಾರಿನ ಲೇಖಕರ ಅಂಕಣದಲ್ಲಿ ಈ ಭಾಗದವರಾದ ಮಹಾಂತೇಶ ನವಲಕಲ್, ವಿಕ್ರಮ ವಿಸಾಜಿ, ದೇವು ಪತ್ತಾರ, ಚಿದಾನಂದ ಸಾಲಿ, ಕಲಿಗಣನಾಥ ಗುಡದೂರ, ಅರುಣ ಜೋಳದಕೂಡ್ಲಿಗಿ, ಪೀರಬಾಷಾ ಬಳ್ಳಾರಿ ಅವರ ಬಗ್ಗೆ ಬಂದಿದೆ ಎಂದು ಹೇಳಿದಕ್ಕೆ ಪ್ರೇಮಸಾಗರ ಪಾಟೀಲ ಅವರು ಮರುದಿನ ಬೆಳಿಗ್ಗೆಯೇ ಕಂಪ್ಯೂಟರ್ ಎದುರಿಗೆ ಕುಳಿತುಕೊಂಡು ಇದೆಲ್ಲವನ್ನು ನೋಡಿದ್ದಾರೆ. ಕೆಂಡಸಂಪಿಗೆಯಲ್ಲಿನ ಉದ್ಯಮಿ ಅಶೋಕ ಖೇಣಿ ಅವರ ಮನೆತನದ `ಏನಕೇನ್ ಖೇಣಿ ಪುರಾಣ' ವೀಕ್ಷಿಸಿದ್ದೇನೆ. ಬ್ಲಾಗನಲ್ಲಿ ಎಲ್ಲ ವಿಷಯಗಳ ಮಾಹಿತಿ ಇದೆ ಎಂದು ಫೋನ ಮಾಡಿ ಪ್ರತಿಕ್ರಿಯಿಸಿದರು.
    ಮುಕ್ತ ಸಂವಾದದ ಬಗ್ಗೆ ಹೇಳಬೇಕೆಂದರೆ ಪ್ರತಿವಾರ ಕೆಲವರು ಕೆಲಕಾಲ ಒಂದೆಡೆ ಕುಳಿತು ವಿವಿಧ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದು ಈ ಸಭೆಗೆ ಈ ಹೆಸರು ಇಡಲಾಗಿದೆ. ಇದುವರೆಗೆ 13 ಸಭೆಗಳು ನಡೆದಿದ್ದು 11 ನೇ ಸಭೆಯಲ್ಲಿ ಹುಮನಾಬಾದನ ಸಾಕ್ಷಿ ಪ್ರತಿಷ್ಠಾನದಿಂದ ಬಿಡುಗಡೆ ಆಗಿರುವ 11 ಪುಸ್ತಕ್ ಗಳಲ್ಲಿ  ವೀರಣ್ಣ ಮಂಠಾಳಕರ್ ಅವರ 'ಗಾಂಧಿ ಆಗ್ಬೇಕಂದುಕೊಂಡಾಗ' ವೀರಶೆಟ್ಟಿ ಪಾಟೀಲ ಅವರ 'ಓ ನನ್ನ ಕನ್ನಡ' ವಿಶ್ವನಾಥ ಮುಕ್ತಾ ಅವರ `ಮೌನರಾಗ' ಮಲ್ಲಿಕಾರ್ಜುನ್  ಕಾಡಾದಿ ಅವರ `ನಿಸರ್ಗ' ಕವನ ಸಂಕಲನಗಳ ಬಗ್ಗೆಯೂ ಚರ್ಚಿಸಲಾಯಿತು. ಈಚೆಗೆ ನ್ಯೂಜೆರ್ಸಿಯಲ್ಲಿ ನಡೆದ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರಕಟ ಆಗಿರುವ `ದೀಪ ತೋರಿದೆಡೆಗೆ' ಕಥಾ ಸಂಕಲನದಲ್ಲಿ ಮುಡಬಿಯಂತಹ ಗ್ರಾಮೀಣ ಭಾಗದವರಾದ ಮಚೇಂದ್ರ ಅಣಕಲ್ ಅವರ `ಡಾಂಬಾರು ದಂಧೆ' ಕಥೆ ಪ್ರಕಟ ಆಗಿದೆ. ಈ ಬಗ್ಗೆಯೂ ಮುಕ್ತ ಸಂವಾದದಲ್ಲಿ ಹೆಮ್ಮೆಯಿಂದ ಚರ್ಚಿಸಿ ಮಚೇಂದ್ರ ಅವರಿಗೆ ಅಭಿನಂದನೆ ಹೇಳಲಾಯಿತು.
.................................................


ನಿನ್ನ ನೀ ಮರೆತಿರುವುದು 
 ಯಾರು  ಯಾರೆಂದು ಗುರುತಿಸಿ ಗುರಿ ತಲುಪುವಂತೆ ಮಾಡಿದೆ.  
ಅವರು ಗರಿಬಿಚ್ಚಿರುವಾಗ ನಿನ್ನ ನೀ ಮರೆತಿರುವುದು ನಿನ್ನದೇ ತಪ್ಪು.
ನೀನು ನೀನೇ, ನಿನ್ನಂತೆ ಪರರಿಲ್ಲ ಎಂದು ಲೋಕ ಹೇಳುತ್ತಿದೆ
ನಾನು ಯಾರೆಂಬುದರ ಪರಿವೆ ನಿನಗಿಲ್ಲದಿರುವುದು ನಿನ್ನದೇ ತಪ್ಪು.
ನಿನ್ನ ಕತ್ರುತ್ವ : ಕರ್ತವ್ಯ ಪಾಲನೆಯಿಂದ ಎಲ್ಲೆಡೆ ಕೀರ್ತಿ  ವ್ಯಾಪಿಸಿತು 
ಯಾರಿಂದಲೋ ಕಿಮ್ಮತ್ತು ದೊರೆತಿದೆ ಎಂದು ಭಾವಿಸುವುದು ನಿನ್ನದೇ ತಪ್ಪು.
ಯಾರಿಗೂ ಕೈಯೊಡ್ಡದೆ ಕಾಡದೆ ನಿನ್ನ ನೀನೇ ಬೆಳೆದೆ
ಸಾಧನೆಯ ಹಾದಿಯಲ್ಲಿನ ಕಷ್ಟ-ನಷ್ಟ ನೆನಪಿಟ್ಟುಕೊಳ್ಳದಿರುವುದು  ನಿನ್ನದೇ ತಪ್ಪು.
ನ್ಯಾಯ ಅನ್ಯಾಯವ ತಕ್ಕಡಿಯಲ್ಲಿ ತೂಗಿ ನಿನ್ನದೇ ನೀತಿ ರೂಪಿಸಿದೆ
ಬೇರೆಯವರು ಹಾಕಿದ ಲಕ್ಷಣರೇಖೆ ದಾಟದಿರುವುದು ನಿನ್ನದೇ ತಪ್ಪು.
ಅಸಲಿ, ನಕಲಿ ಯಾವುದೆಂಬುದು ನಿನ್ನಬಿಟ್ಟು ಖಾತ್ರಿಪಡಿಸುವವರಿಲ್ಲ
ನಿನ್ನ ಅಸಲಿಯತ್ತನ್ನು ಪರೀಕ್ಷಿಸಿಕೊಳ್ಳುತ್ತಿರುವುದು ನಿನ್ನದೇ ತಪ್ಪು.
                                         -ಮಾಣಿಕ ಆರ್.ಭುರೆ 

ಅಪರೂಪದ ಜಿಲ್ಲಾಧಿಕಾರಿ...

   ಹರ್ಷಗುಪ್ತಾ ಅವರು  ೨೦೦೭  ರಿಂದ ೨೦೧೦ ರ ವರೆಗೆ  ಬೀದರ ಜಿಲ್ಲೆಯ 
ಜಿಲ್ಲಾಧಿಕಾರಿ ಆಗಿದ್ದರು. ಈ ಕಾಲದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು 
ಮನೆ ಮಾತಾಗಿದ್ದರು. ಅವರ ಬಗ್ಗೆ ಹಿರಿಯ ಪತ್ರಕರ್ತರಾದ ಎಚ್.ಸಿ.ಖಡ್ಕೆ ಅವರು
'ಅಪರೂಪದ ಜಿಲ್ಲಾಧಿಕಾರಿ ಹರ್ಷಗುಪ್ತಾ' ಎಂಬ ಕೃತಿಯನ್ನು ಸಂಪಾದಿಸಿದ್ದಾರೆ. ಅದರಲ್ಲಿನ ನನ್ನ ಲೇಖನ ಇಲ್ಲಿ ಕೊಡಲಾಗಿದೆ. ಪುಸ್ತಕದಲ್ಲಿನ ಇತರೆ ಲೇಖನಗಳ ಶೀರ್ಷಿಕೆಗಳು ಮತ್ತು ಲೇಖಕರ ಹೆಸರಿನ್ ಪಟ್ಟಿ  ಸಹ ಕೊಡಲಾಗಿದೆ. 
ಮೆಡೋಸ್ ಟೇಲರ್ ಹಾದಿಯಲ್ಲಿ ಹರ್ಷ ಗುಪ್ತಾ -
              `ನೀವು ನಮ್ಮಲ್ಲಿಗೆ ಬಂದಾಗಿನಿಂದ ನಾವು ಸಿರಿವಂತರೂ, ಸುಖಿಗಳೂ ಆಗಿದ್ದೇವೆ. ನಿಮ್ಮಂಥ ದಯಾಮಯಿ ಅಧಿಕಾರಿಗಳನ್ನು ದೇವರು ರಕ್ಷಿಸಲಿ ಎಂದು ನಾವೆಲ್ಲರೂ ಆ ದೇವರಲ್ಲಿ ಪ್ರಾ ರ್ಥಿಸುತ್ತೇವೆ. ನೆಮ್ಮದಿಯ ಬದುಕು ಮತ್ತು ಆಸ್ತಿ ರಕ್ಷಣೆ ಇವು ಬ್ರಿಟಿಷ ಸರ್ಕಾರ್ ದ ಮಹತ್ವದ ಕೊಡುಗೆಗಳಾಗಿವೆ. ಅವುಗಳನ್ನು ನೀವು ನಮಗೆ ದೊರಕಿಸಿ ಕೊಟ್ಟಿರುವಿರಿ, ಬರಗಾಲ ಬಿದ್ದಾಗ ನೀವು ನಿಮ್ಮ ವೈಯಕ್ತಿಕ ಹಣದಿಂದ ಸಾವಿರಾರು ಜನರಿಗೆ ಜೀವನಾಧಾರ ಒದಗಿಸಿದ್ದೀರಿ. ತಮ್ಮಂಥ ಪರೋಪಕಾರಿ ಅಧಿಕಾರಿಗಳು ಹುಡುಕಿದರೂ ಸಿಗಲಾರರು. ಚಿಕ್ಕ  ಮಕ್ಕಳ ಕಾಳಜಿ ತೆಗೆದುಕೊಳ್ಳುವಂತೆ ನೀವು ನಮ್ಮ ಕಾಳಜಿ ತೆಗೆದುಕೊಂಡಿದ್ದೀರಿ.'
      ಫಿಲಿಪ್ ಮೆಡೋಸ್ ಟೇಲರ್ ಎಂಬ ಅಧಿಕಾರಿ ಬೇರೆಡೆ ವರ್ಗವಾಗಿ ಹೋಗುತ್ತಿದ್ದಾಗ ನಳದುರ್ಗದ ಜನತೆ 1857ನೇ ಇಸ್ವಿ ಆಗಸ್ಟ್ 27ರಂದು ಸಲ್ಲಿಸಿದ ಸನ್ಮಾನ ಪತ್ರದ ಒಕ್ಕಣೆ ಇದಾಗಿದೆ. ಟೇಲರ್ ಅವರ ದಕ್ಷತೆ, ಜನಪರ ಕಾಳಜಿ, ಸಹೃದಯತೆ, ಸಜ್ಜನಿಕೆ, ಪ್ರಾಮಾಣಿಕತೆಯನ್ನು ಇದು ಎತ್ತಿ ತೋರಿಸುತ್ತದೆ. ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯಲ್ಲಿರುವ ಈ ಪಟ್ಟಣ ನಿಜಾಮನ ಕಾಲದಲ್ಲಿ ಮಹತ್ವದ ಸ್ಥಾನವಾಗಿತ್ತು. ಮೆಡೋಸ್ ಟೇಲರ್ 1853ರಿಂದ ೧೮೫೭ ರವರೆಗೆ ಅಲ್ಲಿಯ ಜಿಲ್ಲಾಧಿಕಾರಿಯಾಗಿದ್ದರು.  1808ರಲ್ಲಿ ಇಗ್ಲೆಂಡ ನಲ್ಲಿ ಹುಟ್ಟಿ ಚಿಕ್ಕವಯಸ್ಸಿನಲ್ಲಿಯೇ ಭಾರತಕ್ಕೆ ಆಗಮಿಸಿದ ಇವರು 1824ರಲ್ಲಿ ನಿಜಾಮನ ಸೈನ್ಯಕ್ಕೆ ಸೇರ್ಪಡೆಯಾಗುತ್ತಾರೆ.
    ನಂತರ ತಮ್ಮ ಬುದ್ಧಿವಂತಿಕೆ, ಕಾರ್ಯ ಕೌಶಲ್ಯದಿಂದ ಮೇಲಾಧಿಕಾರಿಗಳ ಮನಸ್ಸು ಗೆದ್ದು ನಳದುರ್ಗ, ಬೇರಾರ, ಔರಂಗಾಬಾದ್ ಮತ್ತು ಚಿಕ್ಕ ಸಂಸ್ಥಾನವಾಗಿದ್ದ ಸುರಪುರದ ಕಮೀಷನರ್ ಆಗಿ ನೇಮಕಗೊಳ್ಳುತ್ತಾರೆ. ಅಧಿಕಾರದಲ್ಲಿದ್ದಾಗ ಜನೋಪಕಾರಿ ಕಾರ್ಯಗಳನ್ನು ಕೈಗೊಂಡು ತಮ್ಮ ಹೆಸರು ಅಜರಾಮರಗೊಳಿಸಿದ್ದಾರೆ. ಸಾಹಿತಿ, ಚಿತ್ರಕಾರ ಸಹ ಆಗಿದ್ದ ಅವರು ಬೀದರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸ್ಮಾರಕಗಳ ಚಿತ್ರ ತೆಗೆದು ಹಾಗೂ ಇಲ್ಲಿನ ಇತಿಹಾಸವನ್ನು ಗ್ರಂಥಗಳಲ್ಲಿ ದಾಖಲಿಸಿ ಈ ಭಾಗ ಎಲ್ಲೆಡೆ ಪ್ರಸಿದ್ಧವಾಗುವಂತೆ ಮಾಡಿದ್ದಾರೆ. ಈ ಭಾಗದಲ್ಲಿ ಪದೇ ಪದೇ ಸಂಚರಿಸಿ ಜನರ ಕಷ್ಟಗಳನ್ನು ಅರಿಯಲು ಪ್ರಯತ್ನಿಸಿದ್ದರು. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯತ್ನ ನಡೆಸಿದ್ದರು.       
      ಅಂಥ ಅಧಿಕಾರಿಗಳು ಈಗ ಇಲ್ಲದಿರಬಹುದು. ಆದರೆ ಅವರ ದಾರಿಯಲ್ಲಿ ನಡೆಯಲು ಪ್ರಯತ್ನ ಮಾಡುತ್ತಿರುವವರು ಕೆಲವರಾದರೂ ದೊರೆಯುತ್ತಾರೆ. ಅಂಥವರಲ್ಲಿ ಈಗ ಬೀದರನ ಜಿಲ್ಲಾಧಿಕಾರಿ ಆಗಿರುವ ಹರ್ಷ ಗುಪ್ತಾ ಪ್ರಮುಖರು ಎನ್ನಬಹುದು. ಇವರು ಇತರೆ ಅಧಿಕಾರಿಗಳಂತೆ ಕೇವಲ ಸರ್ಕಾರದ್  ಯೋಜನೆಗಳನ್ನು  ಜಾರಿಗೊಳಿಸಲಷ್ಟೇ ತಮ್ಮ ಕಾರ್ಯವ್ಯಾಪ್ತಿ ಸೀಮಿತಗೊಳಿಸದೆ ಸ್ವತಂತ್ರವಾಗಿ ಯೋಚಿಸಿ ಕೆಲಸ ನಿರ್ವಹಿಸುವ ಅಧಿಕಾರಿ ಆಗಿದ್ದಾರೆ.
     ಜಿಲ್ಲಾಧಿಕಾರಿಯಾಗಿ ಹಾಗೂ ವಿಭಾಗಾಧಿಕಾರಿಯಾಗಿ ಬೀದರ ಮತ್ತು ಗುಲ್ಬರ್ಗದಂತಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಬಸವಕಲ್ಯಾಣ, ಹುಮನಾಬಾದ್, ಭಾಲ್ಕಿ, ಔರಾದ  ನಂತಹ ತಾಲ್ಲೂಕು ಕೇಂದ್ರಗಳಲ್ಲಿ ಕೈಗೊಂಡ ರಸ್ತೆ ಅಗಲಗೊಳಿಸುವ ಕಾರ್ಯ ಇವರ ಮುಂದಾಲೋಚನೆಯ ಧ್ಯೋತಕವಾಗಿದೆ. ಬೀದರ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಹಿಂದೆ ಈ ಸ್ಥಳದ ಮಹತ್ವ ಎಲ್ಲರಿಗೂ ಗೊತ್ತಾಗಲಿ. ಹಿಂದುಳಿದ ಈ ಭಾಗ ಪ್ರವಾಸಿ ಕೇಂದ್ರವಾಗಿ ಪ್ರಸಿದ್ಧಿ ಪಡೆಯಲಿ ಅಲ್ಲದೆ ಔದ್ಯೋಗಿಕವಾಗಿ ಇದು ಪ್ರಗತಿ ಹೊಂದಲಿ ಎಂಬ ಪ್ರಾಮಾಣಿಕ ಕಾಳಜಿ ಅಡಗಿದೆ.
     ಮೆಡೋಸ್ ಟೇಲರ್ ಸುರಪುರ ಸಂಸ್ಥಾನದ ಕಲೇಕ್ಟರ್ ಆಗಿ 12ವರ್ಷ ಸೇವೆ ಸಲ್ಲಿಸಿದ ಕಾಲ ಬಹು ಮಹತ್ವದ್ದಾಗಿದೆ. ಅನ್ನ ನೀರಿಲ್ಲದೆ ಬಡತನದಲ್ಲಿ ಜೀವಿಸುತ್ತಿದ್ದ ಅಲ್ಲಿಯ ಜನರ ದಯನೀಯ ಸ್ಥಿತಿ ನೋಡಿದ ಅವರು ತಮಗೆ ಕೇವಲ ಕರ ವಸೂಲಿಗೆ ನೇಮಿಸಲಾಗಿದ್ದರೂ ಅನೇಕ ಜನಪರ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಕೆರೆ, ಕಟ್ಟೆಗಳನ್ನು ನಿರ್ಮಿಸಿ   ಬರಡು ನೆಲದಲ್ಲಿ ನೀರು ಚಿಮ್ಮುವಂತೆ ಮಾಡಿ ಎಲ್ಲೆಡೆ ಹಸಿರು ಕಂಗೊಳಿಸುವಂತೆ ಮಾಡುತ್ತಾರೆ. ಹತ್ತಿ ಬೆಳೆಯಲು ಉತ್ತೇಜನ ಕೊಟ್ಟು ನೂಲು ತೆಗೆಯುವ ಮತ್ತು ಬಟ್ಟೆ ನೇಯುವ ಕೈಗಾರಿಕೆ ಆರಂಭಿಸುತ್ತಾರೆ.
     ಹರ್ಷ ಗುಪ್ತಾ ಸಹ ಜನರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಯೋಚಿಸುವ ವ್ಯಕ್ತಿಯಾಗಿದ್ದಾರೆ. ಬೀದರ ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿ ಕಾಣಬೇಕಾದರೆ ಇಲ್ಲಿನ ಜನರು ಶೈಕ್ಷಣಿಕವಾಗಿ ಮುಂದೆ ಬರುವುದು ಅವಶ್ಯಕವಾಗಿದೆ ಎಂಬುದನ್ನು ಮನಗಂಡು ಶಾಲೆಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿದ್ದಾರೆ. ಬೋಧನಾ ಕ್ರಮದಲ್ಲಿ ಬದಲಾವಣೆ ತಂದಿದ್ದಾರೆ. ಶಿಕ್ಷಕರ ಕಾರ್ಯಾಗಾರ ನಡೆಸಿದ್ದಾರೆ. ಶಿಕ್ಷಕರು ಸರಿಯಾಗಿ ಪಾಠ ಮಾಡುವಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಿ ನಕಲು ಹಾವಳಿ ತಡೆದಿದ್ದಾರೆ. ಒಟ್ಟು ಫಲಿತಾಂಶ ಕಡಿಮೆ ಬಂದರೂ ಸಹ ಗುಪ್ತಾ ಅವರ ಕ್ರಮದಿಂದ ವಿದ್ಯಾರ್ಥಿಗಳು ಓದುವ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಶೈಕ್ಷಣಿಕ ಗುಣಮಟ್ಟ ಸುಧಾರಿಸಿದ್ದು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ `ಅಸಲಿ' ರಿಜಲ್ಟ್ ಬರುತ್ತಿದೆ ಎಂದು ಎಲ್ಲರೂ ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಿದೆ.
     ಗ್ರಾಮ ಪಂಚಾಯತಿ ಮಟ್ಟದಲ್ಲಿ `ಜನಸ್ಪಂದನ' ಸಭೆಗಳನ್ನು ಯಶಸ್ವಿಯಾಗಿ ನಡೆಸಿ ಆಡಳಿತವನ್ನು ಜನರ ಮನೆ ಬಾಗಿಲಿಗೆ ಒಯ್ಯುವ ಕೆಲಸ ಮಾಡಿದ್ದಾರೆ. ಹಳ್ಳಿ ಹಳ್ಳಿಗೆ ಹೋಗಿ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬೆರೆತು ಅವರ ಸಮಸ್ಯೆಗಳನ್ನು ಆಲಿಸುತ್ತಾರೆ. ಜನಸ್ಪಂದನ ಸಭೆಗಳಲ್ಲಿ ತಾವು ಸ್ವತಃ ವೃದ್ಧಾಪ್ಯ ವೇತನ ಒಳಗೊಂಡು ವಿವಿಧ  ಸೌಲಭ್ಯಗಳ ಮಂಜೂರಾತಿ ಪತ್ರಗಳನ್ನು ವಿತರಿಸಿ ಅವ್ಯವಹಾರ ನಡೆಯದಂತೆ ನೋಡಿಕೊಂಡಿದ್ದಾರೆ.
      ನೌಕರರ ಮೇಲೆ ಅಂಕುಶವಿರಿಸಿ ಲಂಚಗುಳಿತನಕ್ಕೆ ಕಡಿವಾಣ ಹಾಕಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲಿಯೇ ಅನ್ಯಾಯ ನಡೆದರೂ ಜಿಲ್ಲಾಧಿಕಾರಿಗಳಿಗೆ ಹೇಳಿದರಾಯಿತು, ಅವರು ಸರಿಪಡಿಸುತ್ತಾರೆ ಎಂದು ನಿರ್ಭಿತಿಯಿಂದ ಹೇಳುವಂತಹ ಆತ್ಮವಿಶ್ವಾಸ ಸಾಮಾನ್ಯ ವ್ಯಕ್ತಿಯಲ್ಲಿ ಮೂಡುವಂತೆ ಮಾಡಿದ್ದಾರೆ.
    ಜನಮೆಚ್ಚುಗೆಯ ಕಾರ್ಯ ಮಾಡಿ ಹೆಸರು ಗಳಿಸಿದ ಅಧಿಕಾರಿಗಳು ಬೆರಳೆಣಿಕೆಯಷ್ಟು ಮಾತ್ರ ಸಿಗುತ್ತಾರೆ. ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನರು  ಚುನಾವಣಾ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತಂದಿರುವುದು ಮರೆಯಲಾಗದ ಕಾರ್ಯವಾಗಿದೆ. ಪೊಲೀಸ್ ಅಧಿಕಾರಿಯಾಗಿ ಕಿರಣ ಬೇಡಿ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಮುಂಬೈ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಗೋ.ರಾ,ಖೈರನಾರ್ ಅವರು ಪಾತಕಿ ದಾವೂದ್ ಇಬ್ರಾಹಿಂ ಅವರಿಗೆ ಸಂಬಂಧಿಸಿದ ಕಟ್ಟಡಗಳನ್ನು ಯಾವುದೇ ಮುಲಾಜಿಲ್ಲದೆ ಕೆಡವಿ ಹೆಸರು ಗಳಿಸಿದ್ದಾರೆ. ಇನ್ನು ಚಿಕ್ಕವರಾಗಿರುವ ಹರ್ಷ ಗುಪ್ತಾ ಅವರು ಸಹ ಮುಂದೆ ಅವರಂತೆಯೇ ಆಗುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಅವರು ಕೈಗೊಳ್ಳುವ ಯಾವುದೇ ಕೆಲಸ ಕಾರ್ಯದಲ್ಲಿ ಅಡೆತಡೆಗಳು ಬರದಿರಲಿ ಎಂದು ನಾವೆಲ್ಲರೂ ಪ್ರಾರ್ಥಿಸಬೇಕಾಗಿದೆ.

ಪುಸ್ತಕದಲ್ಲಿನ ಇತರೆ ಲೇಖನಗಳ  ಶಿರ್ಷಿಕೆಗಳು ಮತ್ತು ಲೇಖಕರ ವಿವರ:
1) ಬೀದರ ಜಿಲ್ಲೆಯ ಇತಿಹಾಸ ನಿರ್ಮಿಸಿದ ಜಿಲ್ಲಾಧಿಕಾರಿ ಹರ್ಷ ಗುಪ್ತಾ  - ಪೂಜ್ಯ ಶ್ರೀ  ಬಸವಲಿಂಗ ಪಟ್ಟದ್ದೇವರು ಭಾಲ್ಕಿ 
2) ಇರಬೇಕು ಇಂಥ ಜಿಲ್ಲಾಧಿಕಾರಿ 
- ಪದ್ಮರಾಜ ದಂಡಾವತಿ
3) ಬೀದರ ಜಿಲ್ಲೆಯಲ್ಲಿ ದಂತಕತೆಯಾಗಿರುವ ಜಿಲ್ಲಾಧಿಕಾರಿ 
- ವೀರೇಂದ್ರ ಸಿಂಪಿ
4) ಪ್ರವಾಸೋದ್ಯಮ ಅಭಿವೃದ್ಧಿಗೆ ಹರ್ಷಗುಪ್ತಾರ ಕೊಡುಗೆ 
- ಬಿ.ಆರ್.ಕೊಂಡಾ
5) ಅಭಿವೃದ್ಧಿಯ ಹರಿಕಾರ ಹರ್ಷಗುಪ್ತಾ  
- ಶ್ರೀ ಸಿದ್ಧರಾಮ ಶರಣರು ಬೆಲ್ದಾಳ
6) ನರ್ತಕಿ ಬಾವಿಯ ಬೆನ್ನು ಹತ್ತಿದ ಜಿಲಾಧಿಕಾರಿ  
-ಶಿವಕುಮಾರ ನಾಗವಾರ
7) ಕಲ್ಯಾಣ ನಾಡು ಕಟ್ಟ ಬಂದ ಜಿಲ್ಲಾಧಿಕಾರಿ  
-ಶಿವಕುಮಾರ ಕಟ್ಟೆ
8) ಅಪ್ರತಿಮ ಜಿಲ್ಲಾಧಿಕಾರಿ ಹರ್ಷಗುಪ್ತಾ  
-ಎಚ್.ಶಕುಂತಲಾ ಖಡ್ಕೆ
9) ಮಾದರಿ ಬೀದರಿನ ರೂವಾರಿ ಹರ್ಷಗುಪ್ತಾ  
-ಎಂ.ಜಿ.ಗಂಗನಪಳ್ಳಿ
10) ಜನನಾಯಕ ಜಿಲ್ಲಾಧಿಕಾರಿ ಹರ್ಷಗುಪ್ತಾ  
- ಸೋಮನಾಥ ಮುದ್ದಾ ಭಾಲ್ಕಿ
11) ಶಿಕ್ಷಣ ಪ್ರೇಮಿ ಹರ್ಷಗುಪ್ತಾ  
-ಮಯೂರ ಬಸವರಾಜ
12) ಜಿಲ್ಲೆಯ ಆಪ್ತ ಶ್ರೀ ಹರ್ಷಗುಪ್ತಾ  
- ಎಂ.ಜಿ.ದೇಶಪಾಂಡೆ
13) ಬೀದರ ಅಭಿವೃದ್ಧಿಯತ್ತ ಹರ್ಷಗುಪ್ತಾರ ಚಿತ್ತ  
- ಎಂ.ಎಸ್.ಮನೋಹರ
14) ಜಿಲ್ಲೆಗೊಬ್ಬ ಹರ್ಷಗುಪ್ತಾರಂತಹ ಜಿಲ್ಲಾಧಿಕಾರಿ ಇದ್ದರೆ ಸಾಕು
- ಬಾ.ನಾ.ಸೋಲಾಪುರೆ
15) ಹರ್ಷಗುಪ್ತಾ ಅಧಿಕಾರಿಯಲ್ಲ - ಅವತಾರಿ ಪುರುಷ   
- ಹಂಶಕವಿ
16) ಜಿಲ್ಲಾಧಿಕಾರಿಗಳಿಗೆ ಮಾದರಿ ಈ ಜಿಲ್ಲಾಧಿಕಾರಿ 
-ಡಾ.ರಘುಶಂಖ ಭಾತಂಬ್ರಾ
17) ಬೀದರ ಮತ್ತು ಬದುಕು ರೂಪಿಸಿದ ಹರ್ಷಗುಪ್ತಾ    
-ಎಸ್.ರಾಮಕೃಷ್ಣನ್
18) ಮೆಡೋಸ್ ಟೇಲರ್ ಹಾದಿಯಲ್ಲಿ ಹರ್ಷಗುಪ್ತಾ     
-ಮಾಣಿಕ ಭುರೆ ಬಸವಕಲ್ಯಾಣ
19) ಮೌಲ್ಯಾಧಾರಿತ ಶಿಕ್ಷಣ ಬೇಕು: ಹರ್ಷಗುಪ್ತಾ       
- ಪ್ರೊ.ಎಂ.ಎಂ.ತಂಬಾಕೆ
20) ಕ್ರೀಯಾಶೀಲ ಜಿಲ್ಲಾಧಿಕಾರಿ ಹರ್ಷಗುಪ್ತಾರ ಕಾಯಕನಿಷ್ಠೆ     
- ರಮೇಶ ಬಿರಾದಾರ
21) ಬೀದರ ಸಂಸ್ಕೃತಿ ಕಂಡ ಚೇತನ- ಹರ್ಷಗುಪ್ತಾ      
- ಪ್ರೋ ಈಶ್ವರ ಹೆಬ್ಬಾಳಕರ್
22) ಹರ್ಷಗುಪ್ತಾರ ಮಂತ್ರ: ಸದ್ದಿಲ್ಲದೆ ಕೆಲಸ, ಕೆಲಸವೇ ಪ್ರಚಾರ    - ಶಿವರಾಜ ಕನಶೆಟ್ಟಿ ಬೀದರ
23) ಕರ್ಮಯೋಗಿ ಹರ್ಷಗುಪ್ತಾರ ಆದ್ಯತೆಗಳು      
- ಡಾ.ರವೀಂದ್ರನಾಥ ನಾರಾಯಣಪುರ
24) ಜನಪರ-ಪ್ರಗತಿಪರ ಜಿಲ್ಲಾಧಿಕಾರಿ ಹರ್ಷಗುಪ್ತಾ     
- ಧನರಾಜ ಫುಲಾರೆ
25) ಹರ್ಷಗುಪ್ತಾ: ಮನಮಂದಿರದ ನಂದಾದೀಪ     
- ರುಕ್ಮೋದ್ದೀನ್ ಇಸ್ಲಾಂಪುರ
26) ಒಬ್ಬ ಅಪರೂಪದ ಜಿಲ್ಲಾಧಿಕಾರಿ ಹರ್ಷಗುಪ್ತಾ     
- ವಿಶ್ವಾರಾಧ್ಯ ಸತ್ಯಂಪೇಟ್
27) ಸಾಂಸ್ಕೃತಿಕ ಲೋಕದ ರಾಯಭಾರಿ ಹರ್ಷಗುಪ್ತಾ    
- ಡಾ.ಗವಿಸಿದ್ದಪ್ಪ ಪಾಟೀಲ
28) ಕರ್ಮವೀರ ಹರ್ಷಗುಪ್ತಾ      
-ಎಚ್.ಕಾಶಿನಾಥರೆಡ್ಡಿ
29) ಬದಲಾವಣೆಯ ಹರಿಕಾರ ಡಿ.ಸಿ.ಹರ್ಷಗುಪ್ತಾ    
- ಡಾ.ಎಸ್.ಎಸ್.ಸಿದ್ಧಾರೆಡ್ಡಿ
30) ಬೀದರ ಬೆಳಕು- ಜಿಲ್ಲಾಧಿಕಾರಿ ಹರ್ಷಗುಪ್ತಾ     
- ಶಿವಕುಮಾರ ಟೆಂಕಾಳೆ
31) ಬೀದರ ಜಿಲ್ಲೆಗೆ ಹೊಂಬೆಳಕು ನೀಡಿರುವ ಹರ್ಷಗುಪ್ತಾ    
- ಸಿದ್ರಾಮಪ್ಪ ಮಾಸಿಮಾಡೆ
32) ಮಾನವೀಯತೆ ಮೆರೆದ ಮಾದರಿ ಜಿಲ್ಲಾಧಿಕಾರಿ     
- ಡಾ.ಜಯದೇವಿ ಗಾಯಕವಾಡ
33) ಬಡವರ ಬಂದು, ದಕ್ಷ ಆಡಳಿತಗಾರ ಶ್ರೀ ಹರ್ಷಗುಪ್ತಾ    
- ಶೇಖ ಮುಸ್ತಾಕ ಅಲಿ
34) ಬೀದರಿನ ಅಮರ ಹರ್ಷಗುಪ್ತಾ    
-ಪಿ.ಬಸವರಾಜ
35) ನ್ಯಾಯ ನಿಷ್ಠುರಿ ಜಿಲ್ಲಾಧಿಕಾರಿ    
-ರಾಜೇಶ್ರೀ ಶ್ರೀಕಾಂತಸ್ವಾಮಿ
36) ಮಂತ್ರಿಯಿಂದಾಗದ್ದು ಒಬ್ಬ ಜಿಲ್ಲಾಧಿಕಾರಿ ಮಾಡಬಲ್ಲ ಎಂಬುದಕ್ಕೆ ಹರ್ಷಗುಪ್ತಾ ಸಾಕ್ಷಿ:
      ಒಂದು ಸುದ್ದಿ     
-ಡಾ.ರಾಜೇಂದ್ರ ಯರನಾಳೆ
37) ಡಿ.ಸಿ.ಹರ್ಷಗುಪ್ತಾ: ಮಾನವೀಯತೆ    
-ಎಂ.ಪಿ.ಮುದಾಳೆ
38) ಕ್ಯಾರಿ ಆನ್ ಸರ್, ಆಲ್ ದಿ ಬೆಸ್ಟ್    
- ಚಂದ್ರಗುಪ್ತ ಚಾಂದಕವಠೆ
39) ಆದರ್ಶ ಜಿಲ್ಲಾಧಿಕಾರಿ ಶ್ರೀ ಹರ್ಷಗುಪ್ತಾ    
- ಪ್ರೊ.ಸೂಗಯ್ಯ ಹಿರೇಮಠ
40) ದಕ್ಷ ಜಿಲ್ಲಾಧಿಕಾರಿ ಹರ್ಷಗುಪ್ತಾ     
- ಪ್ರೊ.ಬಾಬುರಾವ ವಡ್ಡೆ
41) ಬಾಲ ಕಾರ್ಮಿಕರ ಸ್ವಾಭಿಮಾನದ ಹಣತೆ ಹರ್ಷಗುಪ್ತಾ    
-ಕೆ. ಜಯರಾಂ ಮಳವಳ್ಳಿ 
42) ಬೀದರ ಹತಾಶೆಯಿಂದ ಹರ್ಷದೆಡೆಗೆ     
-ಎಚ್.ಸಿ.ಖಡ್ಕೆ
..................................

ಗಾಂಧಿ ಆಗ್ಬೇಕಂದುಕೊಂಡಾಗ' ಕೃತಿಯ ಚೆನ್ನುಡಿ

ಆತ್ಮೀಯರಾದ ಯುವ ಕವಿ ವೀರಣ್ಣ ಮಂಠಾಳಕರ್ ಅವರ ನಾಲ್ಕನೇ ಕೃತಿ 'ಗಾಂಧಿ ಆಗ್ಬೇಕಂದುಕೊಂಡಾಗ' ಕವನ ಸಂಕಲನ ಈಚೆಗೆ ಹುಮನಾಬಾದನ ಸಾಕ್ಷಿ ಪ್ರತಿಷ್ಠಾನದಿಂದ
 ಪ್ರಕಟಿಸಿ ಬಿಡುಗಡೆ ಮಾಡಲಾಯಿತು. ಅದಕ್ಕೆ ಬೆಂಗಳೂರಿನ ಲೇಖಕ ಪತ್ರಕರ್ತರಾದ ರಘುನಾಥ ಚ.ಹ. ಅವರು ಮುನ್ನುಡಿ ಬರೆದಿದ್ದಾರೆ. ಡಾ.ಜಯದೇವಿ ಗಾಯಕವಾಡ 
ಬೆನ್ನುಡಿ ಬರೆದಿದ್ದಾರೆ. ನಾನು (ಮಾಣಿಕ ಭುರೆ) ಕವಿ ಪರಿಚಯ `ಚೆನ್ನುಡಿ' ಬರೆದಿದ್ದು ಅದು ಮುಂದಿನಂತಿದೆ...
       ಯಾವುದೇ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಕೆಚ್ಚೆದೆಯ ಜೊತೆಗೆ ಹುಚ್ಚು ಮನಸ್ಸು ಬೇಕು. ತೀವ್ರ ಆಸಕ್ತಿ ಇದ್ದರೆ ಮಾತ್ರ ತಾವು ಹಿಡಿದ ಕೆಲಸದಲ್ಲಿ ಪ್ರಗತಿ ಸಾಧಿಸುವುದು ಸಾಧ್ಯವಾಗುತ್ತದೆ. ವಿ.ಎಚ್.ವೀರಣ್ಣ ಮಂಠಾಳಕರ ಅವರು ಸಾಹಿತ್ಯ ರಚನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಹೈದ್ರಾಬಾದ ಕರ್ನಾಟಕ ಭಾಗದ ಪ್ರತಿಭಾವಂತ ಯುವ ಬರಹಗಾರರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. "ನಿನ್ನ ಓ(ವಾ)ರಗೆಯವರು ಹಣ ಗಳಿಸಿ ಮನಸ್ಯಾ ಆಗ್ಯಾರ, ನೀನು ಮಾತ್ರ ಉಪಯೋಗಕ್ಕೆ ಬಾರದ ಬರೆಯುವ ಹುಚ್ಚು ಹತ್ತಿಸಿಕೊಂಡಿದ್ದೀಯಾ" ಎಂದು ತಮ್ಮ ಬಗ್ಗೆ ಕೆಲವರು ಆಡಿದ ಕಟು ಮಾತುಗಳನ್ನು ಲೆಕ್ಕಿಸದೆ ಲೆಕ್ಕಣಿಕೆಗೆ ಕೆಲಸ ಕೊಡುತ್ತಲೇ ಬಂದಿದ್ದಾರೆ. ಬರೆಯುವುದರಲ್ಲಿಯೇ ಸಂತೃಪ್ತಿ ಕಂಡಿದ್ದಾರೆ.
      ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಇವರ ಸ್ವಗ್ರಾಮ. ವೈಜನಾಥ ಹುವಪ್ನೋರ್ ಮತ್ತು ಶರಣಮ್ಮ ಅವರ ಎರಡನೇ ಮಗನಾಗಿ ಹುಟ್ಟಿದ ಇವರ ವಯಸ್ಸು ಈಗ 33ವರ್ಷ.  ಹೈಸ್ಕೂಲ ವರೆಗೆ ಸ್ವಗ್ರಾಮದಲ್ಲಿಯೇ ಓದಿದ್ದಾರೆ.  ಪದವಿ ಶಿಕ್ಷಣ ಬೀದರನಲ್ಲಿ ಪಡೆದುಕೊಂಡಿದ್ದಾರೆ. ತಂದೆ ತಾಯಿ ಕೂಲಿ ಕೆಲಸ ಮಾಡುತ್ತಿದ್ದ ಕಾರಣ ಶಾಲೆ ಕಲಿಯುವಾಗ ತೊಂದರೆ ಎದುರಿಸಿದ್ದಾರೆ. ಈ ಸಂದರ್ಭದಲ್ಲಿ ತಾವು ಅನುಭವಿಸಿದ ಕಷ್ಟ, ಸಹಿಸಿದ ಅನ್ಯಾಯವನ್ನು ಕಥೆ, ಕವನದ ವಸ್ತುವನ್ನಾಗಿಸಿ ವಿದ್ಯಾರ್ಥಿದೆಸೆಯಿಂದಲೇ   ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.
        'ಭಾವಾಂತರಂಗ' 'ಹನಿಜೇನು' 'ಸುಳಿಗಳು' ಇವರ ಪ್ರಕಟಿತ ಕವನ ಸಂಕಲನಗಳಾಗಿವೆ. ಕೈಯಲ್ಲಿ ಕಾಸಿಲ್ಲದಿದ್ದರೂ ಹೇಗೋ ಮಾಡಿ ಮೊದಲ ಮಿನಿಕವಿತೆಗಳ ಸಂಕಲನ ಪ್ರಕಟಿಸಿದಾಗ ಮುಂದೆ ಮತ್ತೇ ಇಂಥ ಕಾರ್ಯಕ್ಕೆ ಇವರು ಕೈಹಾಕುವುದಿಲ್ಲ ಎಂದೇ ಅನಿಸಿತ್ತು. ಆದರೆ ಅಲ್ಲಿ ಇಲ್ಲಿ ಅಲೆದಾಡಿ ಸಿಕ್ಕಂತಹ ಕೆಲಸ ಮಾಡುತ್ತ  ದೊರೆತ  ಹಣದಲ್ಲಿ ಅಲ್ಪಸ್ವಲ್ಪ ಉಳಿತಾಯ ಮಾಡಿ ಈಗ ನಾಲ್ಕನೇ ಕವನ ಸಂಕಲನ ಪ್ರಕಟಿಸುತ್ತಿದ್ದಾರೆ. ಇವರ ಕವಿತೆಗಳು ಮತ್ತು ಲೇಖನಗಳು ನಾಡಿನ ದಿನಪತ್ರಿಕೆ, ವಾರಪತ್ರಿಕೆ ಮತ್ತು ಮಾಸ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಿವೆ. ಹಲವಾರು ಕಥೆಗಳನ್ನು ಸಹ ಬರೆದಿದ್ದಾರೆ. 'ಬದುಕಿನ ಬೆನ್ನೇರಿ' ಎಂಬ ಕಥೆ ಆಕಾಶವಾಣಿಯಿಂದ ಮರುಪ್ರಸಾರಗೊಂಡಿದೆ.      
       'ಸಂಕಲ್ಪ' ಎಂಬ ಸಾಹಿತ್ಯಕ್ಕೆ ಸಂಬಂಧಿಸಿದ ಮಾಸ ಪತ್ರಿಕೆ ಸಹ ಕೆಲಕಾಲ ನಡೆಸಿದ್ದಾರೆ. ಈಗಲೂ ಸಾಹಿತ್ಯ ಉಳ್ಳವರ ಸೊತ್ತು  ಆಗಿರುವುದರಿಂದ ಅನೇಕ ಬರಹಗಾರರು ನಿರ್ಲಕ್ಷಕ್ಕೊಳಗಾಗಿದ್ದಾರೆ. ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ತಾಲ್ಲೂಕು ಉದಯೋನ್ಮುಖ ಯುವ ಬರಹಗಾರರ ಸಂಘದ ಮತ್ತು ಜಿಲ್ಲಾ ಬರಹಗಾರರ ಮತ್ತು ಕಲಾವಿದರ ಬಳಗದ ತಾಲ್ಲೂಕು ಅಧ್ಯಕ್ಷರಾಗಿ ಬರಹಗಾರರನ್ನು ಸಂಘಟಿಸಿದ್ದಾರೆ. ಸಾಹಿತ್ಯಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ.
   ವಿವಿಧೆಡೆ ನಡೆದ ಕಥಾ, ಕಾವ್ಯ ಕಮ್ಮಟಗಳಲ್ಲಿ ಪಾಲ್ಗೊಂಡಿದ್ದಾರೆ.  ಕವಿಗೋಷ್ಠಿಗಳಲ್ಲಿ ಕವನ ವಾಚಿಸಿದ್ದಾರೆ. ಮೊದಲನೆಯ ಮಿನಿಕವಿತೆಗಳ ಸಂಕಲನ 'ಭಾವಾಂತರಂಗ" ದಲ್ಲಿ ಅಪ್ಪಟ ಪ್ರೇಮಿಯಂತೆ ಭಾಸವಾಗುತ್ತಾರೆ. ಆದರೆ ಈ ಸಂಕಲನದಲ್ಲಿ ಪ್ರೇಮಿಯ ಜೊತೆಗೆ ವಿರಹಿಯಾಗಿಯೂ ಕಾಣಿಸುತ್ತಾರೆ. ಜೀವನದ ದಟ್ಟ ಅನುಭವವನ್ನು ಕಟ್ಟಿ ಕೊಡುವ ಹಾಗೂ ನೈತಿಕ ಎಚ್ಚರ ಮೂಡಿಸುವ ಕವಿತೆಗಳನ್ನು ಸಂಕಲನ ಒಳಗೊಂಡಿದೆ. ಪರಿಪಕ್ವಗೊಂಡ ಅನುಭವದ ಮೂಸೆಯಿಂದ ಕೃತಿ ಮೂಡಿ ಬಂದಿದೆ.(ಸೆಪ್ಟೆಂಬರ್ 2010)

`ಅನುಭವ ಮಂಟಪ ಪ್ರಶಸ್ತಿ ...' ಕೃತಿಯ ಬಗ್ಗೆ


    2008ರಲ್ಲಿ ಬಿಡುಗಡೆಯಾದ ನನ್ನ 
`ಅನುಭವ ಮಂಟಪ ಪ್ರಶಸ್ತಿ ಪುರಸ್ಕೃತರು' 
ಕೃತಿಯಲ್ಲಿನ ಲೇಖಕರ ನುಡಿ ಮತ್ತು ಪ್ರಸ್ತಾವನೆಯಲ್ಲಿನ 
ಆಯ್ದ ಭಾಗ ಇಲ್ಲಿ ಕೊಡಲಾಗಿದೆ.
ಡಾ.ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾಗಿದೆ. 1999ರಿಂದ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ನಡೆಯುವ ಶರಣ ಕಮ್ಮಟದ ಸಂದರ್ಭದಲ್ಲಿ ಕೊಡಲಾಗುವ ಈ ಪ್ರಶಸ್ತಿ ಇದುವರೆಗೆ ವಿವಿಧ ಕ್ಷೇತ್ರಗಳ ಹತ್ತು ಜನ ಗಣ್ಯರಿಗೆ ಸಂದಿದೆ. ಪ್ರಶಸ್ತಿ ಕೊಡಲು ಆರಂಭಿಸಿ ಹತ್ತು ವರ್ಷಗಳಾಗುತ್ತಿರುವ ಶುಭ ಸಂದರ್ಭದಲ್ಲಿ ಅನುಭವ ಮಂಟಪ ಪ್ರಶಸ್ತಿ ಪುರಸ್ಕೃತರು ಎಂಬ ಕಿರು ಹೊತ್ತಗೆಯನ್ನು ಬರೆಯಲಾಗಿದೆ....
   ಮಹಾತ್ಮಾ ಬಸವೇಶ್ವರರು 12ನೇ ಶತಮಾನದಲ್ಲಿ ಸಮಾಜೋಧಾರ್ಮಿಕ್  ಚಳವಳಿಯನ್ನು ಹುಟ್ಟಿ ಹಾಕಿದ ನಾಡು ಬೀದರ ಜಿಲ್ಲೆಯ ಬಸವಕಲ್ಯಾಣ. ಅಂದು ಇಲ್ಲಿದ್ದ ಅನುಭವ ಮಂಟಪ ಬಸವಾದಿ ಶರಣರು ನಡೆಸಿದ ಕಾರ್ಯಚಟುವಟಿಕೆಗಳ ಕೇಂದ್ರವಾಗಿತ್ತು. ಅವರು ಇಲ್ಲಿ ಸೇರಿ ವಚನ ಸಾಹಿತ್ಯವನ್ನು ರಚಿಸುವ ಮೂಲಕ ಜಗತ್ತಿಗೆ ಹೊಸ ತತ್ವ, ನೀತಿ ಸಿದ್ಧಾಂತವನ್ನು ಕೊಟ್ಟರು. ಮೌಢ್ಯತನದ ಅಂಧಕಾರದಲ್ಲಿ ತೇಲಾಡುತ್ತಿದ್ದವರ ಮನದಲ್ಲಿ ಅರಿವಿನ ಬೆಳಕು ಮೂಡಿಸಿದರು. ಜೀವಪರ, ಜನಪರವಾದ ಆಲೋಚನೆಗೈದರು. 
     ಬಸವಣ್ಣನವರ ಕರೆಗೆ ಓಗೋಟ್ಟು ವಿವಿಧೆಡೆಯಿಂದ ನೂರಾರು ಶರಣರು ಅನುಭವ ಮಂಟಪಕ್ಕೆ ಬಂದು ಸೇರಿದ್ದರು. ಅದು ಜಾತಿ, ಮತ ಕುಲ ಗೋತ್ರದ ಕಟ್ಟಳೆ ಇಲ್ಲದೆ ಸರ್ವರಿಗೂ ಆಶ್ರಯ ನೀಡಿದ ಸಮುದಾಯ ಭವನವಾಗಿತ್ತು. ಇವನಾರವ ಇವನಾರವ ಎಂದೆನಿಸದೆ ಇವ ನಮ್ಮವ ಇವ ನಮ್ಮವ ಎಂಬುದನ್ನು ಕಲಿಸಿದ ಎಲ್ಲರಲ್ಲೂ ಭಾತೃತ್ವ ಭಾವನೆಯನ್ನು ಬೆಳೆಸಿದ ಪ್ರಥಮ ಪಾಠಶಾಲೆ ಎಂದರೆ ತಪ್ಪಾಗಲಾರದು. 
      ಆದರೆ ಅಂದಿನ ಆ ಭವ್ಯ ಮಂಟಪ ಇಂದು ಅಸ್ತಿತ್ವದಲ್ಲಿಲ್ಲ. ಆದ್ದರಿಂದ ಇಲ್ಲಿಯ ಮರಿದೇವರ ಗುಡ್ಡದಲ್ಲಿ ನೂತನವಾಗಿ ಅನುಭವ  ಮಂಟಪವನ್ನು ನಿರ್ಮಿಸಲಾಗಿದೆ. 29ನೇ ಅಕ್ಟೋಬರ್ 1955ರಂದು ಜಯಚಾಮರಾಜ ಒಡೆಯರ್ ಅವರು ಅನುಭವ ಮಂಟಪದ ಶಂಕುಸ್ಥಾಪನೆಗೈದರು. ಮಾಜಿ ಉಪ ರಾಷ್ಟ್ರಪತಿ ಬಿ.ಡಿ.ಜತ್ತಿ, ಮುಂಬೈ ರಾಜ್ಯದ ಮಂತ್ರಿಯಾಗಿದ್ದ ಎಂ.ಪಿ.ಪಾಟೀಲ, ಮಾಜಿ ಸಚಿವ ಭೀಮಣ್ಣ ಖಂಡ್ರೆ, ಬಾಬಾಸಾಹೇಬ್ ವಾರದ, ವಿಶ್ವನಾಥರಡ್ಡಿ ಮುದ್ನಾಳ ಮುಂತಾದವರು ಈ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 1980ರಲ್ಲಿ ಮಂಟಪದ ಕಾಮಗಾರಿ ಪೂರ್ಣಗೊಂಡಿತು. ಸುತ್ತಲೂ ಬೃಹತ್ ಕೆರೆ ಇರುವ ಕಾರಣ ಮಂಟಪಕ್ಕೆ ನೈಸರ್ಗೀಕ ಸೌಂದರ್ಯ ಪ್ರಾಪ್ತವಾಗಿದೆ. ಅಲ್ಲದೆ ಇದು ಲಿಂಗಾಕೃತಿಯಲ್ಲಿರುವ ಕಾರಣ ನೋಡುವವರಿಗೆ ಬೇರೆ ಸ್ಥಳಗಳಕ್ಕಿಂತ ಭಿನ್ನವೆನಿಸುತ್ತದೆ.....
    ನೂತನ ಅನುಭವ ಮಂಟಪದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಭಾಲ್ಕಿಯ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ಅಗ್ರಗಣ್ಯರಾಗಿದ್ದಾರೆ. ಬಸವತತ್ವನಿಷ್ಠರಾಗಿದ್ದ ಇವರು ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದರು....ಬಸವಕಲ್ಯಾಣದಲ್ಲಿನ  ಶರಣರ ಸ್ಮಾರಕಗಳ ಪುನರ್ನಿರ್ಮಾಣಕ್ಕೆ ಸಂಕಲ್ಪಗೈದು ತ್ರಿಪುರಾಂತ ಕೆರೆ ದಂಡೆಯಲ್ಲಿ ಅರ್ಧಕ್ಕೆ ನಿಂತಿದ್ದ ನೂತನ ಅನುಭವ ಮಂಟಪದ ಕೆಲಸ ಆರಂಭಿಸಿದರು. ಕಲ್ಲು ಮಣ್ಣನ್ನು ತಲೆಮೇಲೆ ಹೊತ್ತುಕೊಂಡು ತಾವು ಸ್ವತಃ ದುಡಿದು ಕಟ್ಟಡ ಪೂರ್ಣಗೊಳಿಸಿದರು. ಈ ಕಾರ್ಯಕ್ಕೆ ಭೀಮಣ್ಣ ಖಂಡ್ರೆ ಹಾಗೂ ಬಿ.ಡಿ.ಜತ್ತಿಯವರು ಸಹಕರಿಸಿ ಧನಸಹಾಯ ಸಹ ಮಾಡಿದರು. ಪೂಜ್ಯ ಅಪ್ಪಗಳವರು ತಮ್ಮ ಬದುಕಿನುದ್ದಕ್ಕೂ ಸಮಾಜದಲ್ಲಿನ ಜಾತಿ ಪದ್ಧತಿ ನಿರ್ಮೂಲನೆಗಾಗಿ ಶ್ರಮಿಸಿದ ಇವರು ಕರ್ನಾಟಕ ಏಕೀಕರಣ ಚಳವಳಿಯಲ್ಲಿಯೂ ಭಾಗವಹಿಸಿದ್ದರು. ಇವರ ಕಾರ್ಯಸಾಧನೆಯನ್ನು ನೋಡಿ ಗುಲ್ಬರ್ಗ ವಿಶ್ವವಿದ್ಯಾಲಯವು 1993ರಲ್ಲಿ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ....
  ...ಇವರ ಹೆಸರಿನಲ್ಲಿಯೇ ಅನುಭವ ಮಂಟಪ ಪ್ರಶಸ್ತಿ ಕೊಡಲಾಗುತ್ತಿದೆ. ಈ ಕಾರಣವೂ ಶರಣ ಕಮ್ಮಟಕ್ಕೆ ಹೆಚ್ಚಿನ ಮಹತ್ವ ಪ್ರಾಪ್ತವಾಗಿದೆ. ಪ್ರಶಸ್ತಿಯು 25ಸಾವಿರ ನಗದು ಹಾಗೂ ಫಲಕವನ್ನೊಳಗೊಂಡಿದ್ದು ಈ ಭಾಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎನಿಸಿದೆ. ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕಾರ್ಯಕ್ರಮದ ಯಶಸ್ವಿಗೆ ದುಡಿಯುತ್ತಿರುವ ಶಾಸಕ ಈಶ್ವರ ಖಂಡ್ರೆ ಅವರು ಪ್ರಶಸ್ತಿಯ ಮೊತ್ತವನ್ನು ತಮ್ಮ ಸಂಸ್ಥೆಯಿಂದ ಭರಿಸುತ್ತಿದ್ದಾರೆ. ಇದುವರೆಗೆ 
ಶಾಂತರಸರು (1999)  ಡಾ.ಪಾಟೀಲ ಪುಟ್ಟಪ್ಪ (2000)  ಪ್ರೊ.ವಿ.ವಿ.ಸಂಗಮದ (2001)  ಡಾ.ಪುಟ್ಟರಾಜ ಗವಾಯಿ (2002) ಡಾ.ಭಗವಾನದಾಸ ತಿವಾರಿ (2003)  ಡಾ.ಡಿ.ಎಂ.ನಂಜುಂಡಪ್ಪ (2004)  ಸಿದ್ಧರಾಮ ಶರಣರು ಬೆಲ್ದಾಳ (2005) ವಿ.ಸಿದ್ಧರಾಮಣ್ಣ (2006)  ರಂಜಾನ ದರ್ಗಾ (2007)  ವಿಶ್ವೇಶ್ವರ ಭಟ್  (2008)  ಅವರಿಗೆ ಪ್ರಶಸ್ತಿ ಕೊಡಲಾಗಿದೆ.  2009 ರಲ್ಲಿ ರಾಮದುರ್ಗದ ಸಿದ್ಧಣ್ಣ ಲಂಗೋಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಮಳೆಗಾಗಿ ಉಪ್ಪು ದಹಿಸುವುದು

ಈ ಲೇಖನ ಪ್ರಜಾವಾಣಿಯ `ಸಂಗತ' ದಲ್ಲಿ ಪ್ರಕಟ ಆಗಿದೆ. ೨೦೧೦ ರ  ಜುಲೈ 1 ರಂದು ಈ  ಬಗ್ಗೆ ಸುದ್ದಿ ಸಹ ಬಂದಿತ್ತು.   
ಮಳೆಗಾಗಿ ಉಪ್ಪು ದಹಿಸುವ ಪ್ರಯೋಗ
     ಹಿಂಗಾರು ಹಂಗಾಮಿನ ವೇಳೆ ರಾಜ್ಯದಲ್ಲಿ ಮೋಡ ಬಿತ್ತನೆ ಮಾಡಿ ಕೃತಕ ಮಳೆ ತರಿಸುವುದಕ್ಕಾಗಿ ಸರ್ಕಾರ ಮುಂದಾಗಿರುವುದು ರೈತರ ಪಾಲಿಗೆ ಸಂತಸದ ಸುದ್ದಿ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಏಳು ಕಡೆ ರಾಕೆಟ್ ಉಡಾವಣೆ ಮೂಲಕ ಮೋಡ ಬಿತ್ತನೆ ಮಾಡಲಾಗುವುದು. ಇದಕ್ಕಾಗಿ ಒಟ್ಟು 35 ಕೋಟಿ ರೂ. ವೆಚ್ಚವಾಗಲಿದೆ ಎಂದು ಕಂದಾಯ ಸಚಿವ ಕರುಣಾಕರ ರೆಡ್ಡಿ ಹೇಳಿದ್ದಾರೆ. ಮಳೆ ಅಭಾವದಿಂದ  ಸಂಕಷ್ಟದಲ್ಲಿರುವ `ಅನ್ನದಾತ'ನಿಗಾಗಿ 35 ಕೋಟಿಯೇ ಏಕೆ ನೂರಾರು ಕೋಟಿ ಖರ್ಚು ಮಾಡಿದರೂ ತಪ್ಪೇನಿಲ್ಲ. ಆದರೆ ಈಚೆಗೆ ಮಹಾರಾಷ್ಟ್ರದ ಹಳ್ಳಿಗಳಲ್ಲಿ ಕೇವಲ ಒಂದೆರಡು 
ಸಾವಿರ ರೂ. ವೆಚ್ಚದ `ವರುಣಯಂತ್ರ'ದ ಪ್ರಯೋಗ ನಡೆಸಿ ಮಳೆ ಸುರಿಸಿರುವುದು ಗೊತ್ತಾಗಿದೆ.  ಇಂಥ ಅಲ್ಪ ವೆಚ್ಚದ ಪ್ರಯೊಗಕ್ಕೆ ಮುಂದಾದರೆ ಒಳಿತು.
     ರಾಕೆಟ್ ಉಡಾವಣೆಗೆ ಟವರಗಳನ್ನು ನಿರ್ಮಿಸಲು ಕಾಲಾವಕಾಶ ಬೆಕು.  ಆದ್ದರಿಂದ ಮುಂಗಾರು ಹಂಗಾಮು ಮುಗಿದ ನಂತರ ಮೋಡ ಬಿತ್ತನೆ ನಡೆಸಲಾಗುವುದು ಎಂದು ಸಚಿವರೇ ಸ್ಪಷ್ಟಪಡಿಸಿದ್ದಾರೆ. ಆದರೆ ವರುಣಯಂತ್ರಕ್ಕೆ ಟವರಗಳ ಅವಶ್ಯಕತೆ ಇಲ್ಲ. ಎಲ್ಲಿಯೂ, ಯಾರು ಬೇಕಾದರೂ ನಡೆಸಬಹುದಾದ ಸರಳ ಪ್ರಯೋಗ ಇದು. ಕೆಲ ವರ್ಷಗಳ ಹಿಂದೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ವಿಮಾನದ ಮೂಲಕ ಮೋಡ ಬಿತ್ತನೆ ನಡೆಸಿದ್ದವು. ಆದರೂ ಅಂದುಕೊಂಡಷ್ಟು ಯಶಸ್ಸು ದೊರೆಯಲಿಲ್ಲ. ಅದರಂತೆ ಟವರಗಳನ್ನು ನಿರ್ಮಿಸಿ ಕೈಗೊಳ್ಳುವ ಯೋಜನೆಯೂ ಫಲ ಕೊಡದಿದ್ದರೆ ಕೋಟಿಗಟ್ಟಲೇ ಹಣ ಪೋಲಾಗುವುದಿಲ್ಲವೇ ?
      ವರುಣಯಂತ್ರದ ಪ್ರಥಮ ಪ್ರಯೋಗ ಕಳೆದ ವರ್ಷ ನಾಂದೇಡ್ ಜಿಲ್ಲೆಯ ಸುಜಲೇಗಾಂವ ಎಂಬಲ್ಲಿ ತಜ್ಞರಾದ ಡಾ.ರಾಜಾ ಮರಾಠೆ ಎಂಬುವವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೆಲ ಗಂಟೆಗಳಲ್ಲಿಯೇ ಧಾರಾಕಾರ ಮಳೆ ಸುರಿಯಿತು. ಮರಾಠೆ ಅವರು ಇಷ್ಟಕ್ಕೇ ತೃಪ್ತರಾಗದೆ ಸತತವಾಗಿ ಹತ್ತು ಸಲ ಈ ವಿಧಾನ ಅನುಸರಿಸಿದರು. ಒಂಬತ್ತು ಸಲ ಮಳೆಯಾಯಿತು. ಆಗ ಅವರು ಬೇರೆಯವರಿಗೂ ಈ ಬಗ್ಗೆ ತಿಳಿಹೇಳಿದರು.
     ಈ ವರ್ಷ ಮೃಗಶಿರಾ ಮಳೆಗೆ ವಿಳಂಬ ಆದಾಗ ಮಹಾರಾಷ್ಟ್ರದ ಅನೇಕ ಕಡೆ ಇಂಥ ಪ್ರಯೋಗ ನಡೆಸಲಾಗಿದೆ. ಈಚೆಗೆ ಪುಣೆಯಲ್ಲಿ ಸಕಾಳ ಪತ್ರಿಕೆ ಸಹಯೋಗದೊಂದಿಗೆ ವಿಜ್ಞಾನಿ ಡಾ.ವಿಜಯ ಭಟ್ಕರ್ ಅವರ ಅಧ್ಯಕ್ಷತೆಯಲ್ಲಿ ಈ ರೀತಿ ಯಶಸ್ವಿ ಪ್ರಯೋಗ ನಡೆಸಿದವರ ಸಮಾವೇಶ ಸಹ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೈತರು ವರುಣಯಂತ್ರದ ಪ್ರಯೋಗವೆಂದರೆ ಮಳೆಯ `ರಿಮೋಟ್ ಕಂಟ್ರೋಲ್' ಕೈಯಲ್ಲಿ ಇದ್ದಂತೆ. ಬೇಕೆಂದಾಗ ಮಳೆ ಸುರಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 
    ಈ ಬಗ್ಗೆ ಮಾಹಿತಿ ಪಡೆದುಕೊಂಡ ನಾನು ಹೆಚ್ಚಿನದನ್ನು ತಿಳಿದುಕೊಳ್ಳಲು ಉಸ್ಮಾನಾಬಾದ ಜಿಲ್ಲೆಯ ಜಳಕೋಟ್ ಮತ್ತು ಲೋಹಾರಾ ತಾಲ್ಲೂಕಿನ ಜೇವಳಿ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇನೆ. ಜಳಕೋಟ  ಗ್ರಾಮ ಪಂಚಾಯಿತಿ ಕಚೇರಿ ಎದುರು ಅದಾಗಲೇ ಎರಡು ಸಲ ಪ್ರಯೋಗ ನಡೆಸಲಾಗಿತ್ತು. ಎರಡೂ ಸಲ ಧೋ ಧೋ ಎಂದು ಮಳೆ ಸುರಿದಿದೆ ಎಂದು ಪಂಚಾಯಿತಿ ಉಪಾಧ್ಯಕ್ಷ ವೆಂಕಟ ಬೇಡಗೆ, ಸುನಿಲ ಮಾಳಗೆ ತಿಳಿಸಿದರು. ಸುಮಾರು 7 ಕಿ.ಮೀ. ವ್ಯಾಪ್ತಿಯಲ್ಲಿ ಮಳೆ ಬಂತು. ಜಿಪಂ ಸದಸ್ಯ ಗಣೇಶ ಸೋನಟಕ್ಕೆ ಅವರೇ ಯಂತ್ರದ ಎಲ್ಲ ಖರ್ಚನ್ನು ಕೊಟ್ಟು ಮಳೆ ಬರುವವರೆಗೆ ಇಲ್ಲಿಯೇ ಠಿಕಾಣಿ ಹೂಡಿದ್ದರು ಎಂದರು.
    ನಂತರ ಅವರು ಪಂಚಾಯಿತಿ ಕಚೇರಿ ಎದುರು ನಿರ್ಮಿಸಲಾಗಿದ್ದ ವರುಣಯಂತ್ರ ತೋರಿಸಿದರು. 3 ಬೈ 3 ಆಕಾರದ 4 ಅಡಿ ಎತ್ತರದ ಇಟ್ಟಂಗಿಗಳ ಒಲೆ ಅದಾಗಿತ್ತು. ಅದರಲ್ಲಿ ಕಟ್ಟಿಗೆಗಳನ್ನು ಹಾಕಿ ಬೆಂಕಿ ಹಚ್ಚಿ ಸುಮಾರು ಮೂರು ಗಂಟೆಗಳವರೆಗೆ ಹೋಮದಲ್ಲಿ ಹಾಕಿದಂತೆ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಅಡಿಗೆ ಉಪ್ಪನ್ನು ಹಾಕಿದ್ದೇವೆ. ಒಟ್ಟು 6 ಕೆ.ಜಿ.ಯಷ್ಟು  ಉಪ್ಪು ಬೆಂಕಿಯಲ್ಲಿ ಸುರಿಯಲಾಯಿತು ಎಂದು ಅವರು ತಿಳಿಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಜೆವಳಿಯ ವಿಜ್ಞಾನ ಶಿಕ್ಷಕ ಆರ್.ವಿ.ಪಾಟೀಲ ಅವರನ್ನು ಸಂಪರ್ಕಿಸಲು ಹೇಳಿದರು. ಆದ್ದರಿಂದ ಲೋಹಾರಾ ತಾಲ್ಲೂಕಿನಲ್ಲಿನ ಜೇವಳಿಗೆ ಹೋಗಿ ಅವರಿಗೆ ಭೇಟಿಯಾದೆವು. ಉಪ್ಪನ್ನು ಬೆಂಕಿಯಲ್ಲಿ ಹಾಕುವುದರಿಂದ ಅದರಲ್ಲಿನ ಸೋಡಿಯಂ ಕ್ಲೋರಾಯಿಡ್ ಅಂಶ ಮೋಡಗಳಲ್ಲಿ ಹೋಗಿ ಕಾರಕದಂತೆ ಕಾರ್ಯನಿರ್ವಹಿಸುವುದೇ ಮಳೆ ಸುರಿಯಲು ಕಾರಣ ಎಂದು ಅವರು ವಿವರಿಸಿದರು. ವಿಮಾನದ ಮೂಲಕವೂ ಈ ಕಾರ್ಯ ಕೈಗೊಳ್ಳಬಹುದು. ಆದರೆ ಅದು ಇದರಷ್ಟು ಸರಳ  ಮತ್ತು ಸುಲಭ ಅಲ್ಲ ಎಂದರು. 
    ಈ ಪ್ರಯೋಗಕ್ಕೆ ಬೆಳಿಗ್ಗೆ ಮತ್ತು ಸಂಜೆ ಸಮಯ ಉತ್ತಮ. ಗಾಳಿ ಜೋರಾಗಿರದೆ ಹೊಗೆ ನೇರವಾಗಿ ಮೋಡಗಳ ಕಡೆಗೆ ಹೋಗಬೇಕು. ಹೊಗೆ ವೇಗವಾಗಿ ಮೋಡ ತಲುಪಲು ಒಲೆಯ ಕೆಳಭಾಗದಲ್ಲಿ ರಂಧ್ರ ಮಾಡಿ ಪಂಪಿನಿಂದ ಗಾಳಿ ಹಾಕಿದರೂ ನಡೆಯುತ್ತದೆ. ಮುಖ್ಯವೆಂದರೆ ವಾತಾವರಣದಲ್ಲಿ ಶೇ 50 ರಷ್ಟು ಆದ್ರ್ರತೆ ಇರಬೇಕಾದದ್ದು ಅನಿವಾರ್ಯ. ಈ ರೀತಿ ಅನುಕೂಲ ವಾತಾವರಣವಿದ್ದರೆ 2 ಗಂಟೆಯಿಂದ 72 ಗಂಟೆಗಳ ಒಳಗಾಗಿ ಮಳೆ ಬರುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು. ಉಪ್ಪನ್ನು ದಹಿಸಲು ಇಟ್ಟಿಗೆಗಳ ಒಲೆಯೇ ಬೇಕೆಂದೆನಿಲ್ಲ. ಖಾಲಿ ಡ್ರಮನ್ನು ಸಹ ಬಳಸಬಹುದು ಎಂದು ಅವರು ಹೇಳಿದರು. ಬಸವಕಲ್ಯಾಣದಲ್ಲಿಯೂ ಈ ರೀತಿಯ ಪ್ರಯೋಗ ಮಾಡೋಣ ಎಂಬ ವಿಚಾರವಿತ್ತು. ಆದರೆ ಅಲ್ಲಿಂದ ಬಂದ ನಂತರ ಮರುದಿನದಿಂದ ಎರಡು ದಿನಕ್ಕೊಮ್ಮೆ ಇಲ್ಲಿ ಮಳೆ ಬರುತ್ತಿದೆ.
    ಏನಿದ್ದರೂ ಈ ಪ್ರಯೋಗ ನಿರ್ಲಕ್ಷಿಸುವಂತಿಲ್ಲ. ಸರ್ಕಾರ ಈ ಬಗ್ಗೆ ತಜ್ಞರಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು. ಹಾಗೆ ನೋಡಿದರೆ ಇದನ್ನು ಸರ್ಕಾರವೇ ಮಾಡಬೇಕು ಎಂದೇನಿಲ್ಲ. ಗ್ರಾಮಸ್ಥರು ಸಹ ಈ ಪ್ರಯೋಗ ನಡೆಸಬಹುದು. ಆದರೆ ಅದಕ್ಕೆ ಮೊದಲು ಸತ್ಯಾಸತ್ಯತೆಯನ್ನು ಕಂಡು ಹಿಡಿಯಲು ಸರ್ಕಾರ ನೇತೃತ್ವ ವಹಿಸುವುದು ಒಳಿತು.

ಬುಧವಾರ, ಅಕ್ಟೋಬರ್ 13, 2010

ದಲಿತ ಪೀಠಾಧಿಪತಿಯೇ ಏಕೆ?



      ಸೆಪ್ಟೆಂಬರ್ (2010) 16ರಂದು ದಿನ ಪತ್ರಿಕೆಗಳಲ್ಲಿ ಎರಡು ಪ್ರಮುಖ ಸುದ್ದಿಗಳು ಪ್ರಕಟವಾಗಿದ್ದವು. ಮೈಸೂರಿನ ಕೃಷ್ಣಮೂರ್ತಿಪುರಂನ ಬ್ರಾಹ್ಮಣರ ಬೀದಿಯಲ್ಲಿ ಸಾಮರಸ್ಯ ನಡಿಗೆ ಆರಂಭಿಸಿದ ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮಿಯವರ ಪಾದಪೂಜೆ ಮಾಡಿದ ಬಗ್ಗೆ ಹಾಗೂ ಅಸ್ವಸ್ಥರಾಗಿದ್ದ ಗಾನಯೋಗಿ ಪಂ.ಪುಟ್ಟರಾಜ ಗವಾಯಿ (17 ರಂದು ಲಿಂಗೈಕ್ಯರಾದರು) ಅವರು ಗುಣಮುಖರಾಗಲಿ ಎಂದು ಗದಗನಲ್ಲಿ ಜಾತಿ ಭೇದ ಮಾಡದೆ ಎಲ್ಲರೂ ಮಠ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸಿರುವುದು. ಎರಡೂ ಮನಸ್ಸಿಗೆ ನಾಟುವಂತಹವು. ಪ್ರೇರಣೆ ಕೊಡುವಂತಹವು. ಪರಿವರ್ತನೆ ತರುವಂತಹವು.
   ಉಡುಪಿಯ ಪೇಜಾವರ ವಿಶ್ವೇಶತೀರ್ಥ ಸ್ವಾಮಿಯವರ ಸಲಹೆಯಂತೆ ಮಾದಾರ ಚನ್ನಯ್ಯ ಸ್ವಾಮಿಯವರು ಸಾಮರಸ್ಯ ನಡಿಗೆ ಆರಂಭಿಸಿ ಅಸ್ಪೃಶ್ಯತೆ, ಜಾತಿಯತೆಯ ಭಾವನೆ ಹೊಗಲಾಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯನ್ನಿಟ್ಟರು ಎನ್ನಬಹುದು. ಪುಟ್ಟರಾಜ ಗವಾಯಿಗಳು ಜಾತಿ, ಧರ್ಮ ಲೆಕ್ಕಿಸದೆ ಸಂಗೀತ ವಿದ್ಯೆ ಕೊಟ್ಟು ಅಂಧ ಅನಾಥರ ಜೀವನಕ್ಕೆ ಬೆಳಕು ಕೊಟ್ಟವರು. ಬೀದಿಯಲ್ಲಿ ಬೇಡದೆ ಗತ್ಯಂತರವಿಲ್ಲ ಎನ್ನುವ ಪರಿಸ್ಥಿತಿಯಲ್ಲಿದ್ದವರಿಗೆ ಗೌರವದಿಂದ ಬದುಕುವ ಮಾರ್ಗ ಕಲ್ಪಿಸಿದವರು.
  ನಾನು ಬರೆದ `ದಲಿತ ಪೀಠಾಧಿಪತಿ' ಪುಸ್ತಕದಲ್ಲಿನ (ಫೆಬ್ರುವರಿ 2010 ರಂದು ಬಿಡುಗಡೆಯಾಗಿದೆ) ಕೆಲ ಭಾಗವನ್ನು ಇಲ್ಲಿ ಕೊಡಬೇಕು ಅಂದಾಗ ಇದೆಲ್ಲ ನೆನಪಿಗೆ ಬಂತು. ಪುಸ್ತಕದಲ್ಲಿನ ವಿಷಯ ಮುಂದಿನಂತಿದೆ.
     ದಲಿತ ಪೀಠಾಧಿಪತಿಯೇ ಏಕೆ?
             (ಲೇಖಕರ ನುಡಿ)
      ಶರಣ ಉರಿಲಿಂಗ ಪೆದ್ದಿಯವರು ಮಹಾ ಜ್ಞಾನಿಯಾಗಿದ್ದರು. ಶ್ರೇಷ್ಠ ವಚನಕಾರರಾಗಿ ಲೋಕಕ್ಕೆ ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ. ಅಸ್ಪೃಶ್ಯರಾಗಿ ಹುಟ್ಟಿದ ಕಾರಣ ಅವರು ಅನುಭವಿಸಿದ ಕಷ್ಟ ಕಾರ್ಪಣ್ಯಗಳಿಗೆ ಲೆಕ್ಕವಿಲ್ಲ. ಜಾತಿ ಆಧಾರದ ಮೇಲೆ ಸಮಾಜ ಬೆಲೆ ಕೊಡದಿದ್ದಾಗ ಜ್ಞಾನದ ಬಲದಿಂದ ವಿಶ್ವದ ಜ್ಯೋತಿಯಾಗಿ ಬೆಳಗಿದರು. ಗುರು ಉರಿಲಿಂಗ ದೇವರು ದೂರದಿಂದ ಎಸೆದ ಕಲ್ಲನ್ನೇ ಲಿಂಗವೆಂದು ಪೂಜಿಸಿದರು. ಏಕಲವ್ಯನು ಗುರು ದ್ರೋಣಾಚಾರ್ಯರ  ಮೂರ್ತಿ  ಮಾಡಿ ಅದರ ಎದುರಿಗೆ ಬಿಲ್ಲುವಿದ್ಯೆ ಕಲಿತಂತೆ ಇವರು  ಸತತ ಸಾಧನೆ ಮಾಡಿದರು. ಗುರುಗಳು ಸಿಟ್ಟಿನ ಭರದಲ್ಲಿ ಹೇಳಿದ `ಘೇ ದಗಡ ಜಾ' ಎಂಬ ಮಾತುಗಳನ್ನೇ ಮಂತ್ರವೆಂದು ಪಠಿಸಿ ಸಾಧನೆ ಕೈಗೊಂಡು ಸಿದ್ಧಿ ಪುರುಷರಾಗಿ ಬೆಳೆದರು.
   ಲಿಂಗ ದೀಕ್ಷೆ ಕೊಡಲು ಸಹ ಹಿಂದೇಟು ಹಾಕಿದ್ದ ಗುರುಗಳೇ ಮುಂದೆ 
ತಮ್ಮ ಮಠದ ಉತ್ತರಾಧಿಕಾರಿಯನ್ನಾಗಿ ಇವರನ್ನು ನೇಮಿಸುತ್ತಾರೆಂದರೆ 
ಇವರು ಯಾವ ಪರಿ ತಪಸ್ಸು ಮಾಡಿರಬೇಕು. ಕಬ್ಬಿಣ ಚಿನ್ನದ ಹೊಳಪನ್ನು ಪಡೆದು ಪ್ರಭೆಯನ್ನು ಬೀರಿದಂತಿತ್ತು ಇವರ ಸಾಧನೆ. ಇವರ ಬಗೆಗಿನ ಮಾಹಿತಿಯುಳ್ಳ 
ಕೃತಿಯೇ `ದಲಿತ ಪೀಠಾಧಿಪತಿ'. ಹಾಗೆ ನೋಡಿದರೆ 12 ನೇ ಶತಮಾನದ ಇತರೆ ಶರಣರಂತೆ ಉರಿಲಿಂಗ ಪೆದ್ದಿ ಅವರ ಬಗ್ಗೆಯೂ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. 
ಇದುವರೆಗೆ ಪ್ರಕಟವಾಗಿದಕ್ಕಿಂತ ಹೆಚ್ಚಿನದನ್ನು ಕೊಡುವ ಉದ್ದೇಶದಿಂದ ಅವರ ಕಾರ್ಯಕ್ಷೇತ್ರವಾಗಿದ್ದ ಕಂಧಾರ ಹಾಗೂ ಇತರೆಡೆ ಹೋಗಿ ಹುಡುಕಿದರೂ ಕೈಗೆ ಏನೂ ಬಂದಿಲ್ಲ. ದಾಖಲೆಗಳಿಲ್ಲದೆ ಕಲ್ಪನೆಯ ಆಧಾರದಲ್ಲಿ ಕತೆ ಕಟ್ಟುವುದು ಇಂಥ ವಿಷಯದಲ್ಲಿ ಸರಿಯಲ್ಲ. ಆದ್ದರಿಂದ ಇದ್ದಿರುವುದನ್ನೇ ಇಲ್ಲಿ ಪ್ರಸ್ತುತಪಡಿಸಲಾಗಿದೆ.
        ಆದರೆ ಶೂದ್ರ ವರ್ಣದ ಹುಟ್ಟು, ಜಾತಿ ನಿರ್ಮೂಲನೆಗೆ  ನಡೆದ ಇದುವರೆಗಿನ ಚಳವಳಿಗಳು, ಬೇಲೂರು ಉರಿಲಿಂಗ ಪೆದ್ದಿ ಮಠದ ಪರಂಪರೆಯ ಬಗ್ಗೆ ಮಾಹಿತಿ ಕೊಟ್ಟು ಪುಸ್ತಕ ವಿಶಿಷ್ಟವಾಗುವಂತೆ ಮಾಡಲು ಪ್ರಯತ್ನಿಸಲಾಗಿದೆ. ಇಂದಿನ ಆಧುನಿಕ ಯುಗದಲ್ಲೂ ದಲಿತರು ಮಠದ ಪೀಠಕ್ಕೆ ಏರುವುದು ಕನಸಿನ ಮಾತಾಗಿದೆ. ಹೀಗಿರುವಾಗ ಉರಿಲಿಂಗ ಪೆದ್ದಿಯವರು 12 ನೇ ಶತಮಾನದಲ್ಲಿಯೇ ಮಠಾಧೀಶರಾದದ್ದು ಒಂದು ಮಹಾಕ್ರಾಂತಿಯೇ ಸರಿ. ಮಠಾಧೀಶರಾಗುವುದೆಂದರೆ ಗುರುವಿನ ಸ್ಥಾನಕ್ಕೆ ಏರುವುದು. ಶೂದ್ರನಾಗಿ ಹುಟ್ಟಿದವನು ಗುರುವಾದರೆ ಜಾತಿಗೆ ಬೆಲೆ ಇರುತ್ತದೆಯೇ? ಆದ್ದರಿಂದ ಅಂದಿನ ಆ ಘಟನೆ ಎಲ್ಲರಿಗೂ ಪ್ರೇರಣಾದಾಯಕವಾಗಲಿ. ಸಮಾಜದಲ್ಲಿ ಸುಧಾರಣೆ ಬರಲಿ ಎಂಬ ಸದುದ್ದೇಶದಿಂದಲೇ ಪುಸ್ತಕಕ್ಕೆ `ದಲಿತ ಪೀಠಾಧಿಪತಿ' ಎಂದು ಹೆಸರಿಸಿ ಆ ಪ್ರಸಂಗವನ್ನು ಎತ್ತಿ ತೋರಿಸಲು ಯತ್ನಿಸಲಾಗಿದೆ.....
     ಶೂದ್ರ ವರ್ಣದ ಬಗ್ಗೆ ಸತ್ಯಾನ್ವೇಷಣೆ
         (ಮೊದಲ ಭಾಗ ಪು-1ರಿಂದ 6)
     ಹಿಂದೂ ಸಮಾಜ ವ್ಯವಸ್ಥೆಯಲ್ಲಿನ ವರ್ಣಾಶ್ರಮ ಪದ್ಧತಿ, ಲಿಂಗ ತಾರತಮ್ಯ ಮತ್ತು ಜಾತಿ ಪದ್ಧತಿ ನಿರ್ಮೂಲನೆಗೆ ಹಾಗೂ  ಡಂಬಾಚಾರ, ಮೂಢನಂಬಿಕೆ ತೊಡೆದು ಹಾಕಲು ನಡೆದ ಚಳವಳಿಗಳಿಗೆ ಲೆಕ್ಕವಿಲ್ಲ. ಸಮಾಜದ ಅವನತಿಗೆ ಕಾರಣವಾಗುವ ಇಂಥ ಅನಿಷ್ಟ ಪದ್ಧತಿಯನ್ನು  ಕಿತ್ತೊಗೆಯಲು ಬುದ್ಧ, ಬಸವಣ್ಣನವರ ಕಾಲದಿಂದ ಇದುವರೆಗೆ ಅನೇಕ ಮಹಾತ್ಮರು, ಸತ್ಪುರುಷರು, ಶರಣರು, ಸಂತರು ಪ್ರಯತ್ನಿಸಿದ್ದಾರೆ. ಆದರೂ ಇದರ ಬೇರುಗಳು  ಸಡಿಲಗೊಳ್ಳುತ್ತಿಲ್ಲ. ಶತಶತಮಾನಗಳಿಂದಲೂ ಅನೇಕರು ಇದಕ್ಕಾಗಿ ಹೆಣಗಾಡಿದರೂ ಈ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯವಾಗುತ್ತಿಲ್ಲ ಏಕೆ ಎಂಬುದೇ ಎಲ್ಲರಿಗೂ ಕಾಡುತ್ತಿರುವ ಯಕ್ಷಪ್ರಶ್ನೆಯಾಗಿದೆ. ದಲಿತೋದ್ಧಾರಕರ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುವ ಡಾ.ಬಾಬಾಸಾಹೇಬ ಅಂಬೇಡ್ಕರ ಅವರಿಗೂ ಈ ಪ್ರಶ್ನೆ ಬೆಂಬಿಡದೆ ಕಾಡಿತ್ತು. ಅವರು ಈ ವ್ಯವಸ್ಥೆಯ ವಿರುದ್ಧ ಜೀವನಪರ್ಯಂತ ಹೋರಾಡಿದರು. ಜೊತೆಗೆ ವರ್ಣವ್ಯವಸ್ಥೆಯ ಹುಟ್ಟು, ವ್ಯಾಪಕತೆ ಮತ್ತು ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಲು ಹೆಚ್ಚಿನ ಸಮಯ ವ್ಯಯಿಸಿದರು. ಸತತ ಅಧ್ಯಯನ ನಡೆಸಿ ಈ ಸಂಬಂಧ ಲೇಖನ, ಪ್ರಬಂಧ ರಚಿಸಿ ಜಾಗೃತಿಯ ಕಾರ್ಯವನ್ನು ಮಾಡಿದರು. ಅವರು ಜಾತಿ ಪದ್ಧತಿ ಬಗ್ಗೆ ಎಷ್ಟೊಂದು ಆಳವಾದ ಅಧ್ಯಯನ ನಡೆಸಿದ್ದರೆಂಬುದಕ್ಕೆ ಸಮಾಜವಾದಿ ಚಿಂತಕ ರಾಮ ಮನೋಹರ ಲೋಹಿಯಾ ಅವರು ತಮ್ಮ `ಮ್ಯಾನಕೈಂಡ್' ಪತ್ರಿಕೆಗೆ ಈ ಬಗ್ಗೆ ಲೇಖನ ಬರೆದು ಕಳುಹಿಸಲು ಪತ್ರ ಬರೆದು ಕೋರಿರುವುದೇ ಸಾಕ್ಷಿಯಾಗಿದೆ.
    `ದೇಶದಲ್ಲಿ ಪ್ರಚಲಿತವಿರುವ ಜಾತಿ ಪದ್ಧತಿಯ ಯಾವುದಾದರೂ ಒಂದು ಆಯಾಮವನ್ನು ನೀವು ಆಯ್ದುಕೊಂಡು ಭಾರತೀಯರು ಸಿಟ್ಟಿಗೇಳುವುದಷ್ಟೇ ಅಲ್ಲ: ಅವರು ದಂಗು ಬಡಿದು ಕುಳಿತುಕೊಳ್ಳುವಂತೆ ಮಾಡುವಂಥದೇನಾದರೂ ಬರೆಯಿರಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಕೋಪದೊಂದಿಗೆ ಸಹಾನುಭೂತಿಯೂ ಇರಲಿ ಎಂದು ಆಶಿಸುತ್ತೇನೆ' ಎಂಬುದು ಅವರ ಪತ್ರದ ಒಕ್ಕಣೆಯಾಗಿದೆ. ಇದರರ್ಥ ಜಾತಿ ವ್ಯವಸ್ಥೆಯ ಬಗ್ಗೆ ಡಾ.ಅಂಬೇಡ್ಕರ ಒಬ್ಬರೇ ಸಮರ್ಥವಾಗಿ ಹಾಗೂ ವಸ್ತುನಿಷ್ಠವಾಗಿ ವಿಷಯ ಮಂಡಿಸಬಲ್ಲರು ಎಂಬುದನ್ನು ಲೋಹಿಯಾ ಅಂಥವರಿಗೂ ಮನವರಿಕೆಯಾಗಿತ್ತು. ಜಾತಿ ವ್ಯವಸ್ಥೆ ಅಷ್ಟೇಅಲ್ಲ; ಯಾವುದೇ ವಿಷಯವನ್ನು ಅದರ ತಳವನ್ನು ಸ್ಪರ್ಷಿಸದೆ ಅವರು ಬರೆಯುತ್ತಿರಲಿಲ್ಲ.
ಡಾ.ಅಂಬೇಡ್ಕರರ ಸಂಶೋಧನೆ:
   ಜಾತಿ ವ್ಯವಸ್ಥೆಯ ಕುರಿತು ಶೂದ್ರರು ಯಾರು ? (ಹೂ ವೇರ ದಿ ಶೂದ್ರಾಸ್) ಎಂಬ ವಿಷಯ ಕುರಿತು ಡಾ.ಅಂಬೇಡ್ಕರ ಅವರು ಬರೆದ ಸಂಶೋಧನಾತ್ಮಕ ಮಹಾಪ್ರಬಂಧ ಈ ವಿಷಯದಲ್ಲಿನ ಒಂದು ಮಹೋನ್ನತ ಕೃತಿ. ಚತುರ್ವರ್ಣಗಳಲ್ಲಿ ನಾಲ್ಕನೆಯ ವರ್ಣದವರಾದ ಶೂದ್ರರನ್ನು ಸ್ವಾಭಿಮಾನಶೂನ್ಯ,  ನೀಚ ಕುಲದವರು ಎಂದು ಏಕೆ ತಿಳಿಯಲಾಯಿತು. ಅಸ್ಪೃಶ್ಯರೆಂದು ಇವರನ್ನು ಏಕೆ ಕಡೆಗಣಿಸಲಾಯಿತು ಎಂಬುದರ ಬಗ್ಗೆ ಅವರು ಸತತವಾಗಿ ಚಿಂತನೆಗೈದ ಫಲಶೃತಿಯೇ ಈ ಗ್ರಂಥ. ಇದರಲ್ಲಿ ಅಂಬೇಡ್ಕರ ಅವರ ವಿದ್ವತ್ತಿನ ದರ್ಶನವಾಗುತ್ತದೆ. ಅವರ ವ್ಯಾಸಂಗ ಎಷ್ಟೊಂದು ಆಳವಾಗಿತ್ತು ಎಂಬುದನ್ನು ತೋರಿಸಿ ಕೊಡುತ್ತದೆ. ಸಂಶೋಧನೆಯ ದೃಷ್ಟಿಯ ಪರಿಚಯ ಮಾಡುತ್ತದೆ ಎಂದು ಹಳೆಯ ತಲೆಮಾರಿನ ಪ್ರಸಿದ್ಧ ಲೇಖಕ ಧನಂಜಯ ಕೀರ ಅಭಿಪ್ರಾಯಪಟ್ಟಿದ್ದಾರೆ.
    ಸ್ವತಃ ದಲಿತರಾಗಿ ಹುಟ್ಟಿ ಹೆಜ್ಜೆ ಹೆಜ್ಜೆಗೂ ಮೇಲ್ವರ್ಗದವರಿಂದ ಅವಮಾನ ಸಹಿಸಿದ್ದ ಅಂಬೇಡ್ಕರ ಅವರು ವೇದ ಆಗಮಗಳ ಜಾಡು ಹಿಡಿದು ಶೂದ್ರರು ಅನಾದಿ ಕಾಲದಿಂದಲೂ ಇದ್ದರೆ ಎಂಬುದನ್ನು ತಿಳಿಯಲು ಯತ್ನಿಸಿದರು. ಈ ಬಗ್ಗೆ ಸತ್ಯಾನ್ವೇಷಣೆಗೆ ಮುಂದಾದರು. ತಮಗೆ ಗೊತ್ತಾಗಿರುವುದನ್ನು ಸಮಾಜದ ಎದುರಿಗಿಟ್ಟು ಜಾಗೃತಿ ತರುವುದೇ ಈ ಕಾರ್ಯದ ಹಿಂದಿನ ಉದ್ದೇಶವಾಗಿತ್ತು. ಅವರ ಈ ರೀತಿಯ ಪ್ರಯತ್ನಗಳಿಗೆ ಎದುರಾದ ಅಡ್ಡಿ ಆತಂಕಗಳು ಸಹ ಕಡಿಮೆಯೇನಲ್ಲ. ಅವರೇ ಪ್ರಬಂಧದ ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿರುವಂತೆ ಕೆಲವರು ಅವರಿಗೆ ನೀವು ರಾಜಕೀಯದ ಬಗ್ಗೆ  ಮಾತಾಡಬಹುದು ಆದರೆ ಧರ್ಮ ಮತ್ತು ಜಾತಿ ಬಗ್ಗೆ ಹೇಳಲು ನಿಮಗೆ ಏನು ಅಧಿಕಾರವಿದೆ. ನಿಮಗೆ ಸಂಸ್ಕೃತ ಭಾಷೆಯ ಜ್ಞಾನವೇ ಇಲ್ಲ ಎಂದಾಗ ಇಂಥ ಪ್ರಯತ್ನಕ್ಕೆ ಕೈ ಹಾಕುವುದು ಸರಿ ಎನಿಸುವುದಿಲ್ಲ ಎಂದು ಬೆದರಿಕೆಯ ದಾಟಿಯಲ್ಲಿ ಕೇಳಿದ್ದರು.
     ಸಂಸ್ಕೃತ ಬರುವುದಿಲ್ಲ ಎಂದರೆ ನಾನು ಧರ್ಮದ ಬಗ್ಗೆ ಯೋಚಿಸಬಾರದೇ? ಯಾವುದೇ ವಿಷಯದ ಬಗ್ಗೆ ಯಾರಾದರೂ ಹತ್ತರಿಂದ ಹದಿನೈದು ವರ್ಷ ಅಧ್ಯಯನ ನಡೆಸಿದರೆ ಸಾಕು. ಅವರು ಆ ವಿಷಯದಲ್ಲಿ ಪಾಂಡಿತ್ಯ ಪಡೆದುಕೊಂಡರೆಂಬುದೇ ನನ್ನ ಭಾವನೆ. ಟೀಕಾಕಾರರು ಇದನ್ನು ತಿಳಿದುಕೊಳ್ಳಬೇಕು ಎಂದು ತಮ್ಮ ಬರವಣಿಗೆಯ ಮೂಲಕ ಚಾಟಿ ಏಟು ಕೊಟ್ಟರು. ಧರ್ಮದ ಆಳ ಅಗಲವನ್ನು ಕಂಡು ಹಿಡಿಯಲು ಹೊರಟಿರುವ ನನ್ನ ಪ್ರಯತ್ನ ಶೋಷಿತ ಜನಾಂಗದಲ್ಲಿ ಹೊಸ ವಿಚಾರ, ಹೊಸ ಕನಸುಗಳನ್ನು ಬಿತ್ತಲು ಸಫಲವಾದಿತು. ಪ್ರತಿಯೊಂದು ವಿಷಯದ ಸತ್ಯಾಸತ್ಯತೆಯನ್ನು ಕಂಡು ಹಿಡಿದು ಹೊಸ ದೃಷ್ಟಿಕೋನದಿಂದ ನೋಡಲು ಸಹಕಾರಿ ಆಗುವುದರಲ್ಲಿ ಸಂಶಯವಿಲ್ಲ ಎಂದು ಆತ್ಮವಿಶ್ವಾಸದಿಂದ ಹೇಳಿದರು.
ಶೂದ್ರರು ಕ್ಷತ್ರಿಯರಾಗಿದ್ದರೆ?:
    ಚತುರ್ವರ್ಣ ವ್ಯವಸ್ಥೆಯನ್ನು ಎತ್ತಿ ಹಿಡಿದ ಮನುವನ್ನು ಅಂಬೇಡ್ಕರರು ಹಿಂದು ಧರ್ಮದ ಶಿಲ್ಪಕಾರ ಎಂದು ಕರೆಯುತ್ತಾರೆ.  ಪುರುಷ ಸೂಕ್ತ ಎಂದು ಕರೆಯಲಾಗುವ ಋಗ್ವೇದದ ಹತ್ತನೆಯ ಮಂಡಲದಲ್ಲಿನ ತೊಂಭತ್ತನೆಯ ಋಕ್ಕುವಿನಲ್ಲಿ ಚತುರ್ವರ್ಣಗಳ ಬಗ್ಗೆ ಉಲ್ಲೇಖವಿದೆ. ಈ ಪುರುಷ ಸೂಕ್ತವನ್ನು ವಿಶ್ವದ ಉತ್ಪತ್ತಿ ಹೇಳುವ ಸಿದ್ಧಾಂತ ಎಂದೂ ಕರೆಯಲಾಗುತ್ತದೆ. ಧರ್ಮಕ್ಕೆ ವೇದ ಒಂದೇ ಆಧಾರ, ಇದರಲ್ಲಿನ ಸಿದ್ಧಾಂತವೇ ಸತ್ಯ. ಅದು ಪರಮೇಶ್ವರರು ಹೇಳಿದ ವಿಚಾರ ಎಂದು ಮನು ಹೇಳಿದ. ಮುಂದೆ ಸಮಾಜ ನಿಯಾಮಕರು ಸಹ ಇದನ್ನೇ ಎತ್ತಿ ಹಿಡಿಯುತ್ತಾರೆ. ಆಪಸ್ತಂಭ ಧರ್ಮಸೂತ್ರ ಮತ್ತು ವಶಿಷ್ಟ ಧರ್ಮಸೂತ್ರ ಹಾಗೂ ಯಜುರ್ವೆದದ  ಭಾಗಗಳಾದ ಶುಕ್ಲ ಯಜುರ್ವೆದದಲ್ಲಿನ ವಾಜಸನೆಯಿ ಸಂಹಿತೆಯಲ್ಲಿ ಶೂದ್ರರ ಉತ್ಪತ್ತಿ ಬಗ್ಗೆ ಮಂಡಿಸಲಾದ ಮೂರು ಸಿದ್ಧಾಂತಗಳಲ್ಲಿನ ಒಂದರಲ್ಲಿ ಪುರುಷ ಸೂಕ್ತದ ವಿಚಾರವನ್ನೇ ಹೇಳಲಾಗಿದೆ. ಕೃಷ್ಣ ಯಜುರ್ವೆದದಲ್ಲಿನ ತೈತರಿಯಾ ಸಂಹಿತೆಯಲ್ಲಿಯೂ ಅದನ್ನೇ ಉಲ್ಲೇಖಿಸಲಾಗಿದೆ. ಇದೆಲ್ಲವನ್ನು ಪರಾಮರ್ಷಿಸಿದ ನಂತರ ಡಾ.ಅಂಬೇಡ್ಕರ ಅವರು ಒಂದು ಮಹತ್ವದ ಸಿದ್ಧಾಂತ ಮಂಡಿಸುತ್ತಾರೆ. ಅದೆನೆಂದರೆ ಶೂದ್ರರು ಮೊದಲು ಕ್ಷತ್ರಿಯರಾಗಿದ್ದರು ಎಂಬುದು.
     ಮೂಲತಃ ವೇದಗಳಲ್ಲಿ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಈ ಮೂರೇ ವರ್ಣಗಳ ಬಗ್ಗೆ ಉಲ್ಲೇಖ ದೊರೆಯುತ್ತದೆ. ಆದ್ದರಿಂದ ಮೊದಲು ಶೂದ್ರ ವರ್ಣ ಅಸ್ತಿತ್ವದಲ್ಲಿಯೇ ಇರಲಿಲ್ಲ. ಪುರುಷ ಸೂಕ್ತದಲ್ಲಿ ನಂತರ ಅದನ್ನು ಸೇರ್ಪಡೆ ಮಾಡಲಾಗಿದೆ ಎಂದು ಅವರು ವಾದ ಮಂಡಿಸುತ್ತಾರೆ. ಕೆಲವರು ವೇದಗಳ ಕಾಲದಲ್ಲಿ ವರ್ಣ ವ್ಯವಸ್ಥೆಯೇ ಇರಲಿಲ್ಲ ಎಂದೂ ಹೇಳುತ್ತಾರೆ. ಆದರೆ ಅಂಬೇಡ್ಕರ ಅವರು ಇದನ್ನು ಒಪ್ಪುವುದಿಲ್ಲ. ಏಕೆಂದರೆ ಋಗ್ವೇದದಲ್ಲಿ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ ಬಗ್ಗೆ ಅನೇಕ ಸಲ ಉಲ್ಲೇಖ ಬಂದಿದೆ. ಋಗ್ವೇದದಲ್ಲಿ ಬ್ರಾಹ್ಮಣ ಪದ 15 ಸಲ ಮತ್ತು ಕ್ಷತ್ರಿಯ ಪದ 9 ಸಲ ಉಪಯೋಗಿಸಲಾಗಿದೆ. ಆದರೆ ಶೂದ್ರ ಎಂಬ ಪದ ಒಮ್ಮೇಯೂ ಉಪಯೋಗಿಸಲಾಗಿಲ್ಲ ಎಂಬ ಪುರಾವೆ ಒದಗಿಸುತ್ತಾರೆ. ಶತಪಥ ಬ್ರಾಹ್ಮಣ ಮತ್ತು ತೈತೇರಿಯ ಬ್ರಾಹ್ಮಣ ಈ ಎರಡು ಬ್ರಾಹ್ಮಣ(ಗಳು)  ಗ್ರಂಥಗಳಲ್ಲಿಯೂ ಶೂದ್ರರ ಉಲ್ಲೇಖವಿಲ್ಲ. ಇವುಗಳಲ್ಲಿ ಮೂರು ವರ್ಣಗಳ ಉತ್ಪತ್ತಿ ಹೇಗಾಯಿತು ಎಂಬುದನ್ನು ಮಾತ್ರ ಹೇಳಲಾಗಿದೆ.
    ಅಂದಮೇಲೆ ಶೂದ್ರರು ಎಲ್ಲಿಂದ ಬಂದರು ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತದೆ. ಇದಕ್ಕೆ ಅಂಬೇಡ್ಕರರು ಕಂಡುಕೊಂಡ ಉತ್ತರವೆಂದರೆ ಕ್ಷತ್ರಿಯರಲ್ಲಿ ಮತ್ತು ಬ್ರಾಹ್ಮಣರಲ್ಲಿ ಆಗಾಗ ಜಗಳಗಳಾಗುತ್ತಿದ್ದವು. ಅಂದು ಬ್ರಾಹ್ಮಣರಿಗೆ ವಿಶೇಷ ಸೌಲಭ್ಯಗಳಿದ್ದವು. ಉದಾ: ಬ್ರಾಹ್ಮಣರಿಗೆ ಪ್ರತಿಯೊಂದು ಕಾರ್ಯದಲ್ಲಿ ಮೊದಲ ಆದ್ಯತೆ ಕೊಡಬೇಕು. ಅವರಿಂದ ಯಾವುದೇ ರೀತಿಯ ತೆರಿಗೆ ಸಂಗ್ರಹಿಸಬಾರದು. ಒಂದುವೇಳೆ ಬ್ರಾಹ್ಮಣನಾದವನು ಪ್ರವಾಸದಲ್ಲಿದ್ದಾಗ ಆತನಿಗೆ ಹಸಿವೆಯಾಗಿ ಆತನು ಹೊಲದಲ್ಲಿನ ಕಬ್ಬು, ಶೇಂಗಾ ಅಥವಾ ಈರುಳ್ಳಿ ತೆಗೆದುಕೊಂಡರೆ ಅದನ್ನು ಅಪರಾಧ ಎಂದು ತಿಳಿದುಕೊಳ್ಳಬಾರದು. ಅಲ್ಲದೆ ಬ್ರಾಹ್ಮಣನು ಯಾವುದೇ ಸ್ತ್ರೀಯ ಜೊತೆಯಲ್ಲಿ ಮಾತನಾಡುತ್ತಿದ್ದರೆ ನಡುವೆ ಯಾರೂ ಅಡ್ಡಿಪಡಿಸಬಾರದು ಎಂಬ ನಿಯಮಗಳಿದ್ದವು.
   ಹೀಗಾಗಿ ಅವರ ದರ್ಪ ದೌರ್ಜನ್ಯ ಹೆಚ್ಚಾಗಿರಬೇಕು. ಆದ್ದರಿಂದ ಕ್ಷತ್ರಿಯರಲ್ಲಿ ಮತ್ತು ಇವರ ಮಧ್ಯೆ ಆಗಾಗ ಜಗಳ ನಡೆದ ಬಗ್ಗೆ ಮಾಹಿತಿ ದೊರೆಯುತ್ತದೆ. ಈ ಕಾರಣ ಬ್ರಾಹ್ಮಣರಲ್ಲಿ ಮತ್ತು ಕ್ಷತ್ರಿಯರಲ್ಲಿ ವೈರತ್ವ ಬೆಳೆಯುತ್ತದೆ. ಅದಕ್ಕಾಗಿ ಕ್ಷತ್ರಿಯರಿಗೆ ಉಪನಯನ ವಿಧಿ ಮಾಡಲು ಬ್ರಾಹ್ಮಣರು ನಿರಾಕರಿಸುತ್ತಾರೆ. ಹೀಗೆ ಉಪನಯನವಿಧಿಯಿಂದ ವಂಚಿತರಾದವರನ್ನೇ ಮುಂದೆ ಶೂದ್ರರೆಂದು ಕರೆಯಲಾಗುತ್ತದೆ. ಕಾಲಾನಂತರ ಶೂದ್ರ ಎಂಬುದು ಚತುರ್ಥ ವರ್ಣವಾಗಿ ಪರಿಗಣಿತವಾಗುತ್ತದೆ.
ಧಾರ್ಮಿಕ್ ಸಂಸ್ಕಾರ ನಿರಾಕರಣೆ:
     ಉಪನಯನವಿಧಿಯು ಮನುಷ್ಯನ ಸಂಸ್ಕಾರಗಳಲ್ಲಿ ಒಂದಾಗಿದೆ. ಗರ್ಭಾದಾನ, ಪುಂಸವನ, ಸಿಮಂತೋನ್ನಯನ, ಜಾತಕರ್ಮ, ನಾಮಕರ್ಮ, ಅನ್ನಪಾಶಣ, ಕೌಲ, ಉಪನಯನ, ಸಮವರ್ತನ, ವಿವಾಹ, ಪಂಚಮಹಾಯಜ್ಞ,  ಸಪ್ತ ಪಾಕಯಜ್ಞ, ಸಪ್ತ ಸಾಮಯಜ್ಞ ಇವು ಪ್ರಮುಖ ಸಂಸ್ಕಾರಗಳಾಗಿವೆ. ಹಾಗೆ ನೋಡಿದರೆ ಸಂಸ್ಕಾರಗಳಿಗೆ ಸಮಾಜದಲ್ಲಿ ಬಹಳಷ್ಟು ಮಹತ್ವವಿದೆ. ಸಂಸ್ಕಾರದಿಂದಲೇ ಮನುಷ್ಯನ ಯೋಗ್ಯತೆ ಅಳೆಯುವ ಕಾಲವೊಂದಿತ್ತು. ಸಂಸ್ಕಾರವಿಲ್ಲದ ಮನುಷ್ಯ ಯಜ್ಞ ನಡೆಸಲು ಪಾತ್ರನಾಗುವುದಿಲ್ಲ. ಒಂದುವೇಳೆ ಹಾಗೆಯೇ ಯಜ್ಞ ನಡೆಸಿದರೆ ಆತ ಉತ್ತಮ ಫಲಗಳಿಗೆ ಪಾತ್ರನಾಗುವುದಿಲ್ಲ ಎಂಬ ನಂಬಿಕೆ ಇದೆ. ಹೀಗಾಗಿ ಉಪನಯನ ಸಂಸ್ಕಾರದ ಹಕ್ಕನ್ನು ಕಸಿದುಕೊಂಡ ಕಾರಣ ಶೂದ್ರರಿಗೆ ಸಹಜವಾಗಿಯೇ ಸಮಾಜದಲ್ಲಿ ಕೆಳಗಿನ ದರ್ಜೆ ಪ್ರಾಪ್ತವಾಯಿತು. ಒಂದುವೇಳೆ ಕ್ಷತ್ರಿಯರಾದವರು 11 ನೇ ವರ್ಷಕ್ಕೆ ಉಪನಯನ ವಿಧಿ ಪೋರೈಸದಿದ್ದರೆ ಮುಂದೆ ರಾಜ್ಯಾಭಿಷೇಕ ಮಾಡಿಕೊಳ್ಳಲು ಸಹ ಬರುವುದಿಲ್ಲ ಎಂಬ ನಿಯಮವಿತ್ತು. ಆದ್ದರಿಂದ ಬಹಳಷ್ಟು ಅರಸರಿಗೆ ಪಟ್ಟಾಭಿಷೇಕದ ಸಮಯದಲ್ಲಿ ತೊಂದರೆಯಾಯಿತು. ಒಟ್ಟಾರೆ ಕ್ಷತ್ರಿಯರಿಗೆ ಹೀನ ಸ್ಥಾನ ಪ್ರಾಪ್ತವಾಗಿ ನಾಲ್ಕನೆಯ ಶೂದ್ರ ವರ್ಣ ಅಸ್ತಿತ್ವಕ್ಕೆ ಬಂತು ಎಂದು ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರು ಅಂತಿಮ ನಿರ್ಣಯಕ್ಕೆ ಬರುತ್ತಾರೆ.
    ಬರಬರುತ್ತಾ  ಶೂದ್ರರ ಮತ್ತು ಇತರೆ  ವರ್ಣಿಯರ್   ಮಧ್ಯದ ಕಂದಕ ಹೆಚ್ಚಾಗುತ್ತಾ ಹೋಗುತ್ತದೆ. ವ್ಯಕ್ತಿಯ ಗುಣ, ಚಾರಿತ್ರ್ಯ ಮತ್ತು ಕಾರ್ಯ ಕೌಶಲ್ಯತೆಗಳಕ್ಕಿಂತ ಆಕಸ್ಮಿಕ ಹುಟ್ಟೇ ಆತನ ಸಾಮಾಜಿಕ ಸ್ಥಾನಮಾನ ನಿರ್ಧರಿಸುವ ಅಳತೆಗೋಲಾಗಿ ಪರಿಣಮಿಸುತ್ತದೆ. ಹೀಗಾಗಿ  ಬ್ರಾಹ್ಮಣರು ಮತ್ತು ಕ್ಷತ್ರಿಯರು ವಿಶೇಷ ಸ್ಥಾನಮಾನ ಪಡೆದರೆ ಶೂದ್ರರು ಸಾಮಾಜಿಕ, ಆರ್ಥಿಕ್ , ಧಾರ್ಮಿಕ್  ಮತ್ತು ರಾಜಕೀಯವಾಗಿ ಅಧಃಪತನಕ್ಕೊಳಗಾಗಿ ಅತ್ಯಂತ ಶೋಚನೀಯ ಸ್ಥಿತಿಗೆ ತಲುಪುತ್ತಾರೆ. ಇಂದಿಗೂ ಈ ಸ್ಥಿತಿಯಲ್ಲಿ ಬದಲಾವಣೆ ಸಾಧ್ಯವಾಗಿಲ್ಲ.
ರಾಜಕಾರಣಿಗಳ ನಿರಾಸಕ್ತಿ:
     ಪ್ರಗತಿಪ್ರಿಯರಿಗೆ ಹಾಗೂ ತುಳಿತಕ್ಕೊಳಗಾದವರಿಗೆ ರಾಜಕೀಯ ಸ್ಥಾನಮಾನ ಪಡೆಯುವುದಕ್ಕಿಂತಲೂ ಸಮಾಜ ಸುಧಾರಣೆ ಮಹತ್ವದ್ದು ಎನಿಸುತ್ತದೆ. ಆದರೆ ರಾಜಕೀಯವಾಗಿ ಜಾಗೃತರಾದವರಿಗೆ ಸಮಾಜ ಸುಧಾರಣೆಗಿಂತ ಕುರ್ಚಿ  ಪಡೆಯುವುದೇ ಮುಖ್ಯವಾಗುತ್ತದೆ. ಆದ್ದರಿಂದ ಇಂಥ ವಿಷಯಗಳಿಗೆ ಅವರು ಹೆಚ್ಚಿನ ಮಹತ್ವ ಕೊಡುವುದಿಲ್ಲ. ಈ ರೀತಿಯ ಸಮಸ್ಯೆಗಳನ್ನು ಬಿಡಿಸಲು ಮುಂದಾದರೆ ಜನತೆ ತನ್ನನ್ನು ಇಷ್ಟಪಡುವುದಿಲ್ಲ ಎಂಬ ಭಾವನೆ ಇವರದ್ದಾಗಿರುತ್ತದೆ. ಆದ್ದರಿಂದ ಸಮಾಜ ಸುಧಾರಣೆಯ ಪ್ರಶ್ನೆ ಬಂದಾಗ ಇಂಥವರು ಜಾರಿಕೆಯ ಮಾರ್ಗ ಹಿಡಿಯುತ್ತಾರೆ. ಇಲ್ಲವೆ ವಿಳಂಬ ಧೋರಣೆ ಅನುಸರಿಸುವ ಜಾಣ್ಮೆ ತೋರುತ್ತಾರೆ ಎಂಬುದು ಬಾಬಾಸಾಹೇಬರ ಅಭಿಪ್ರಾಯವಾಗಿದೆ. ಶೂದ್ರ ವರ್ಣ ಹೇಗೆ ಹುಟ್ಟಿತು ಎಂಬುದನ್ನು ಕಂಡುಕೊಂಡ ಅಂಬೇಡ್ಕರ ಅವರಿಗೆ  ಹಿಂದು ಧರ್ಮದಿಂದ ಜಾತಿಯ ಭೂತ ಓಡಿಸಲಾಗುವುದಿಲ್ಲ ಎಂಬ ಸತ್ಯದ ಅರಿವೂ ಆಗಿತ್ತು. ಆದ್ದರಿಂದಲೇ ಅವರು ಬೌದ್ಧ ಧರ್ಮದೆಡೆಗೆ ಮುಖ ಮಾಡಿದರು ಎನ್ನಬಹುದು.
   ಶರಣ ಉರಿಲಿಂಗ ಪೆದ್ದಿ 
(ಭಾಗ5, ಪುಟ- 32ರಿಂದ 42)
    ಉರಿಲಿಂಗ ಪೆದ್ದಿಯವರದ್ದು ಶರಣಗಣದಲ್ಲಿಯೇ ಎದ್ದು ನಿಲ್ಲುವಂತಹ ವಿಶಿಷ್ಟ ವ್ಯಕ್ತಿತ್ವ.  ಅಸ್ಪೃಶ್ಯ ಜಾತಿಗೆ ಸೇರಿದ್ದರೂ ಆಚಾರ್ಯಪದವಿಗೇರಿದವರು, ಸತತ ಸಾಧನೆ, ಗುರುವಿನಲ್ಲಿನ ಅಚಲ ನಿಷ್ಠೆಯ ಮೂಲಕ ಪಾಂಡಿತ್ಯವನ್ನು ಗಳಿಸಿದ್ದರು. ಅವರು ಕಂಧಾರದ ನಲ್ಲೂರ ಮಠದ ಪೀಠಾಧಿಪತಿಯಾಗಿ ನೇಮಕಗೊಂಡದ್ದು ಮಹಾಕ್ರಾಂತಿಯೇ ಸರಿ. ಉಪನಯನ ಮಾಡಿಕೊಳ್ಳದ ಹಾಗೂ ಅಸ್ಪೃಶ್ಯರಾದವರಿಗೆ ವೇದಾಧ್ಯಯನ ಹಾಗೂ ಸಂಸ್ಕೃತ ಕಲಿಯಲು ಅವಕಾಶ ಇಲ್ಲ. ಶೂದ್ರನು ವೇದವನ್ನು ಓದಿದರೆ ಕಿವಿಗೆ ಕಾದ ಸೀಸವನ್ನು ಹಾಕಬೇಕು. ನುಡಿದರೆ ನಾಲಿಗೆ ಕತ್ತರಿಸಬೇಕು. ಜ್ಞಾಪಕವಿಟ್ಟುಕೊಂಡರೆ ಕೊಂದು ಹಾಕಬೇಕು ಎನ್ನುವ ನಿಯಮವಿದ್ದ ಕಾಲದಲ್ಲಿ ಸಂಸ್ಕೃತ ಕಲಿತು, ವೇದಾಗಮಗಳ ಅಧ್ಯಯನ ನಡೆಸಿರುವುದು ಅವರ ದಿಟ್ಟ ನಿರ್ಧಾರ್  ಮತ್ತು ಗಟ್ಟಿ ಮನಸ್ಸಿನ ಪ್ರತೀಕವಾಗಿದೆ. ಅವರು ರಚಿಸಿದ ಅನುಭವಪೂರ್ಣವಾದ ವಚನಗಳು ಅವರ ಅಸಾಧಾರಣ ಪಾಂಡಿತ್ಯಕ್ಕೆ ಸಾಕ್ಷಿಯಾಗಿವೆ.
    ಬಸವಣ್ಣನವರು ಹಿಂದುಳಿದ ಜಾತಿಯ ಅಲ್ಲಮಪ್ರಭುದೇವರಿಗೆ ಅನುಭವ ಮಂಟಪದ ಶೂನ್ಯ ಪೀಠವನ್ನು ವಹಿಸುತ್ತಾರೆ.  ಅಸ್ಪೃಶ್ಯರನ್ನು ಒಂದೆಡೆ ಸೇರಿಸಿ ಅವರನ್ನು ಶರಣರನ್ನಾಗಿ ಮಾಡುತ್ತಾರೆ. ಬ್ರಾಹ್ಮಣ ಮತ್ತು ಅಸ್ಪೃಶ್ಯ ಜಾತಿಯ ವಧು-ವರರ ಮದುವೆ ಮಾಡಿಸುತ್ತಾರೆ. ಬಸವಣ್ಣನ ಈ ಕ್ರಾಂತಿಗೆ ಓಗೊಟ್ಟು ದೂರದೂರದವರು ಆಗಮಿಸುತ್ತಾರೆ. ಸಮಾನತೆಯ ತಳಹದಿಯ ಭಕ್ತಿ ಸಾಮ್ರಾಜ್ಯ ಕಟ್ಟುವ ಅವರ ಪ್ರಯತ್ನದ ಫಲವಾಗಿ ಕಲ್ಯಾಣದ ತುಂಬ ಶರಣರೇ ಕಾಣುತ್ತಾರೆ. ಉರಿಲಿಂಗ ಪೆದ್ದಿ ಹಾಗೂ ಅವರ ಗುರುಗಳಾಗಿದ್ದ ಉರಿಲಿಂಗ ದೇವರು ಸಹ ಇಲ್ಲಿಗೆ ಬಂದು ಹೋಗುತ್ತಾರೆ ಎನ್ನಲಾಗುತ್ತದೆ. ಆದರೆ ಇದಕ್ಕೆ ಬಲವಾದ ಆಧಾರಗಳಿಲ್ಲ. ಆದರೂ ಈ ಗುರು- ಶಿಷ್ಯರು ಜಾತಿ ವ್ಯವಸ್ಥೆ ಹೊಡೆದೊಡಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಾರೆ ಎಂಬುದಂತು ನಿಸ್ಸಂಶಯ. ಉರಿಲಿಂಗ ದೇವರು ಅಸ್ಪೃಶ್ಯನಾದ ಪೆದ್ದಣ್ಣನಿಗೆ ಲಿಂಗದೀಕ್ಷೆ ಕೊಟ್ಟು ಗುರುಪೀಠವನ್ನು ವಹಿಸಿರುವುದು ಮಹಾಕ್ರಾಂತಿಯೇ ಸರಿ. ಮಠದ ಉತ್ತರಾಧಿಕಾರಿ ನೇಮಕದ ವಿಷಯದಲ್ಲಿ ಸಂಪ್ರದಾಯವನ್ನು ಲೆಕ್ಕಿಸದೆ ತೆಗೆದುಕೊಂಡ ಈ ಕ್ರಾಂತಿಕಾರಿ ನಿರ್ಣಯದ ಹಿಂದೆ ಬಸವಣ್ಣನವರ ಪ್ರೇರಣೆ ಕೆಲಸ ಮಾಡಿದೆ. ಆದರೆ ಸಮಾಜದ ವ್ಯವಸ್ಥೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ನಡೆಸಿದ ಈ ಮಹಾಪ್ರಯೋಗಕ್ಕೆ ಅಷ್ಟಾಗಿ ಮಹತ್ವ ದೊರೆಯದಿರುವುದು  ದುರ್ದೈವದ  ಸಂಗತಿ......
      ಉರಿಲಿಂಗ ಪೆದ್ದಿಯವರ ಮೂಲ ಹೆಸರು ಪೆದ್ದಣ್ಣ ಎನ್ನುವುದು. ತೆಲುಗು ಭಾಷೆಯಲ್ಲಿ ಪೆದ್ದಣ್ಣ ಎಂದರೆ ದೊಡ್ಡಣ್ಣ ಎಂದರ್ಥ. ಇಂದಿನ ಆಂಧ್ರಪ್ರದೇಶದಿಂದ ಕಂಧಾರಕ್ಕೆ ಬಂದು ವಾಸವಾಗಿದ್ದರು. ಮನೆಯಲ್ಲಿ ಕಿತ್ತುತಿನ್ನುವ ಬಡತನ. ಜೊತೆಗೆ ಕಾಯಕ ಮಾಡದೆ ಕುಳಿತು ತಿನ್ನುವ ಪ್ರವೃತ್ತಿ ಬೆಳೆದಿದ್ದರಿಂದ ಕೆಲ ಸಲ ಕಳ್ಳತನ ಮಾಡುವ ಅನಿವಾರ್ಯ ಪರಿಸ್ಥಿತಿ ಬರುತ್ತದೆ. ಹೀಗೆ ಕಳ್ಳತನ ಮಾಡಲು ಹೋದಾಗಲೇ ಮನೆಯೊಂದರಲ್ಲಿ ಗುರುಗಳಾದ ಉರಿಲಿಂಗ ದೇವರು ಸೂರಯ್ಯ ಎನ್ನುವ ಭಕ್ತನಿಗೆ ಲಿಂಗದೀಕ್ಷೆ ಕೊಡುವುದು ಗೋಚರಿಸುತ್ತದೆ. ಮೊದಲೇ ಅಸ್ಪೃಶ್ಯ ಜಾತಿಯಲ್ಲಿ ಹುಟ್ಟಿದ್ದರಿಂದ ದೇವರು, ಗುರು, ಪೂಜೆ, ದೀಕ್ಷೆ ಏನೇನೂ ಗೊತ್ತಿರುವುದಿಲ್ಲ. ಆದ್ದರಿಂದ ದೀಕ್ಷೆ ಕೊಡುವುದನ್ನು ಮಾಳಿಗೆಯ ಬೆಳಕಿಂಡಿಯಿಂದ ಆಸಕ್ತಿಯಿಂದ ವೀಕ್ಷಿಸುತ್ತಾನೆ. ಅದನ್ನು ನೋಡಿ ಆತನಲ್ಲಿ ಭಕ್ತಿಭಾವ ಹುಟ್ಟುತ್ತದೆ. ತಾನೂ ಲಿಂಗದೀಕ್ಷೆ ಪಡೆಯಬೇಕು. ಕಳ್ಳತನ ಮಾಡದೆ ಸತ್ಯನಿಷ್ಠನಾಗಿ ಕಾಯಕ ಮಾಡಬೇಕು  ಎಂಬ ಬಯಕೆ ಮನಸ್ಸಿನಲ್ಲಿ ಮೊಳಕೆಯೊಡೆಯುತ್ತದೆ. ಆದರೆ ಈ ಬಗ್ಗೆ ಗುರುಗಳ ಎದುರಿಗೆ ಹೋಗಿ ಕೇಳಲು ಧೈರ್ಯ ಸಾಲುವುದಿಲ್ಲ. ಆದರೂ ಹೇಗಾದರೂ ಮಾಡಿ ದೀಕ್ಷೆ ಪಡೆಯಲೇ ಬೇಕು ಎಂಬ ಗಟ್ಟಿ ನಿರ್ಧಾರ್  ಮಾಡುತ್ತಾನೆ. ಹೆಂಡತಿಯಾದ ಕಾಳವ್ವೆ ಇಂಥ ಆಸೆ ಇಟ್ಟುಕೊಳ್ಳುವುದು ಆಕಾಶದಿಂದ ನಕ್ಷತ್ರಗಳನ್ನು ಕಿತ್ತು ತರುತ್ತೇನೆ ಎಂದು ಜಂಭ ಕೊಚ್ಚಿಕೊಂಡಂತೆಯೇ ಸರಿ ಎನ್ನುತ್ತಾಳೆ.
    ಆದರೂ ಛಲ ಬಿಡುವುದಿಲ್ಲ. ಹೇಗಾದರೂ ಮಾಡಿ ಗುರುಗಳ ಪ್ರೀತಿ ಸಂಪಾದಿಸಬೇಕು ಎಂದು ರಾತ್ರಿ ಹಗಲು ಯೋಚಿಸಿ ಒಂದು ನಿರ್ಧಾರಕ್ಕೆ  ಬರುತ್ತಾನೆ.  ಅರಣ್ಯದಿಂದ ಕಟ್ಟಿಗೆಗಳನ್ನು ಕಡಿದು ತಂದು ಪ್ರತಿದಿನ ನಸುಕಿನಲ್ಲಿ ಮಠದ ಎದುರು ಹಾಕುತ್ತಾನೆ. ಹೀಗೆ ದಿನವೂ ಮಠದ ಎದುರಿಗೆ ಕಟ್ಟಿಗೆಗಳ ಹೊರೆಗಳು ಬೀಳುತ್ತಿರುವುದನ್ನು ಕಂಡು ಉರಿಲಿಂಗ ದೇವರಿಗೆ ಆಶ್ಚರ್ಯವಾಗುತ್ತದೆ. ಈ ಬಗ್ಗೆ ಮಠದಲ್ಲಿದ್ದವರಿಗೆ ವಿಚಾರಿಸಿದರೆ ತಮಗೆ ಗೊತ್ತಿಲ್ಲ ಎಂಬ ಉತ್ತರ ದೊರೆಯುತ್ತದೆ. ಇದೇನು ಮಾಟ ಮಂತ್ರವೋ ಅಥವಾ ಯಾರಾದರೂ ಭಕ್ತರು ಸಲ್ಲಿಸುತ್ತಿರುವ ಸೇವೆಯೋ ನೋಡೋಣ ಎಂದು ಉರಿಲಿಂಗ ದೇವರು ಒಂದು ದಿನ ರಾತ್ರಿ ಹೊಂಚು ಹಾಕಿ ಕುಳಿತು ಕೊಳ್ಳುತ್ತಾರೆ.
    ಕಟ್ಟಿಗೆಯ ಹೊರೆ ಧೊಪ್ಪೆಂದು ಮಠದ ಎದುರಿಗೆ ಬೀಳುತ್ತಿದ್ದಂತೆಯೇ ಯಾರು ನೀನು ? ಯಾರಿಗೂ ಗೊತ್ತಿಲ್ಲದೆ ಕಟ್ಟಿಗೆಯನ್ನು ಏಕೆ ತರುತ್ತಿರುವೆ ಎಂದು ಪ್ರಶ್ನಿಸುತ್ತಾರೆ. ಅಂದು ರಾತ್ರಿ ಸೂರಯ್ಯನ ಮನೆಯಲ್ಲಿ ನೋಡಿದ ಗುರುಗಳೇ ಸಾಕ್ಷಾತ ಎದುರಿಗೆ ಬಂದು ನಿಂತಿರುವುದನ್ನು ನೋಡಿ ಪೆದ್ದಣ್ಣನಿಗೆ ಗಲಿಬಿಲಿಯಾಗುತ್ತದೆ. ಗುರುಗಳಿಗೆ ತಮ್ಮ ಸೇವೆ ಸರಿ ಎನಿಸಿದೆಯೋ ಇಲ್ಲವೋ? ಅವರು ಏನನ್ನುತ್ತಾರೋ ಎಂದು ಗಾಬರಿಗೊಳ್ಳುತ್ತಾನೆ. ದೂರದಿಂದಲೇ ಸಾಷ್ಟಾಂಗ ನಮಸ್ಕಾರ ಮಾಡಿ ಏನೂ ಮಾತಾಡದೆ ನಿಂತಿರುವುದನ್ನು ಕಂಡು ಗುರುಗಳು ಅವನ ಹತ್ತಿರ ಹೋಗಿ ಆತ್ಮೀಯತೆಯಿಂದ ಎಲ್ಲವನ್ನೂ ವಿಚಾರಿಸುತ್ತಾರೆ. ಆಗ ಪೆದ್ದಣ್ಣ ತಮ್ಮ ದರ್ಶನ ಹಾಗೂ ತಮ್ಮಿಂದ ಲಿಂಗದೀಕ್ಷೆ ಪಡೆಯುವ ಉದ್ದೇಶದಿಂದ ತಾವು ಹೀಗೆ ಮಾಡಿರುವುದಾಗಿ ತಿಳಿಸುತ್ತಾನೆ. ಆದರೆ ಗುರುಗಳು ಸಚ್ಚ್ಯಾರಿತ್ರ್ಯವಂತನಾಗದ ಹೊರತು ಲಿಂಗದೀಕ್ಷೆ ಪಡೆಯುವುದು ಸಾಧ್ಯವಿಲ್ಲ. ಬೇಕಾದರೆ ಕಟ್ಟಿಗೆ ಹಾಕಿದಕ್ಕೆ ಕೂಲಿ ಹಣ ತೆಗೆದುಕೊಂಡು ಹೋಗು ಎಂದು ಹೇಳುತ್ತಾರೆ. ಆದರೆ ಪೆದ್ದಣ್ಣ ಹಣ ತೆಗೆದುಕೊಳ್ಳಲು ನಿರಾಕರಿಸುತ್ತಾನೆ. ಅಲ್ಲದೆ ತಮ್ಮ ಸೇವೆಯನ್ನು ಮುಂದುವರೆಸುತ್ತಾನೆ.
      ಉರಿಲಿಂಗ ದೇವರು ಎದುರಿಗೆ ಸಿಕ್ಕಾಗಲೊಮ್ಮೆ  ತಮಗೆ ದೀಕ್ಷೆ ಕೊಡಲು ಕೇಳಿಕೊಳ್ಳುತ್ತಾನೆ. ಈ ಕಾರಣ ಒಂದು ದಿನ ಸಿಟ್ಟಿನಿಂದ ಕಲ್ಲೋಂದನ್ನು ಎತ್ತಿ ಕೊಟ್ಟು `ಘೇ ದಗಡ ಜಾ' (ಕಲ್ಲು ತೆಗೆದುಕೊಂಡು ಹೋಗು) ಎಂದು ಕಳುಹಿಸುತ್ತಾರೆ. ಆದರೂ ಪೆದ್ದಣ್ಣ ಸ್ವಲ್ಪವೂ ವಿಚಲಿತನಾಗದೆ ಆ ಕಲ್ಲನ್ನು ಎತ್ತಿಕೊಂಡು ಮನೆಗೆ ತಂದು ಲಿಂಗವೆಂದು ತಿಳಿದು ಪ್ರತಿದಿನ ಭಕ್ತಿಯಿಂದ ಪೂಜಿಸುತ್ತಾನೆ. ಏಕಲವ್ಯನು ಗುರು ದ್ರೋಣಾಚಾರ್ಯರ ಮೂರ್ತಿಯನ್ನು ಮಾಡಿ ಪೂಜಿಸಿ ಅದರ ಎದುರಿಗೆ ವಿದ್ಯೆ ಕಲಿತಂತೆ ಪೆದ್ದಿಯೂ ಸತತ ಸಾಧನೆ ಮಾಡುತ್ತಾನೆ. `ಘೇ ದಗಡ ಜಾ' ಎನ್ನುವುದನ್ನು ಗುರುಮಂತ್ರವೆಂದು ತಿಳಿದು ನಿತ್ಯ ಪಠಿಸುತ್ತಾನೆ. ಸತ್ಯ ನಿಷ್ಠೆಯಿಂದ ಕಟ್ಟಿಗೆ ಮಾರುವ ಕಾಯಕ ಕೈಗೊಂಡು ಬದುಕುತ್ತಾನೆ. ಅವನ ಸಾಧನೆಯ ಬಗ್ಗೆ ಗುರು ಉರಿಲಿಂಗ ದೇವರಿಗೂ ಸುದ್ದಿ ಮುಟ್ಟುತ್ತದೆ.
   ಆ ಸಮಯದಲ್ಲಿ ಕಂಧಾರದಲ್ಲಿ ನಂದರಾಜನು ಕೆರೆಯೊಂದನ್ನು ಕಟ್ಟಿಸುತ್ತಾನೆ. ಆದರೆ ಎಷ್ಟು ಅಗೆದರೂ ನೀರು ಬರುವುದಿಲ್ಲ. ಆದ್ದರಿಂದ ಈ ಬಗ್ಗೆ ವಿಚಾರಿಸಲು ಕೆರೆ ಮಧ್ಯದ ದೊಡ್ಡ ಬಂಡೆಗಲ್ಲನ್ನು ತೆಗೆದರೆ ನೀರು ಚಿಮ್ಮುತ್ತದೆ ಎಂದು ಕೆಲವರು ಹೇಳುತ್ತಾರೆ. ಆಗ ನಂದರಾಜರು ಈ ವಿಷಯದ ಬಗ್ಗೆ ಗುರು ಉರಿಲಿಂಗ ದೇವರ ಜೊತೆ ಚರ್ಚಿಸಿದಾಗ ಅವರು ಉರಿಲಿಂಗ ಪೆದ್ದಿಯನ್ನು ಈ ಕೆಲಸಕ್ಕಾಗಿ ಕರೆಸುತ್ತಾರೆ. ಆಗ ಆತ `ಘೇ ದಗಡ ಜಾ' ಎನ್ನುವ ಮಂತ್ರವನ್ನೇ ಹೇಳಿ ಬಂಡೆಗಲ್ಲನ್ನು ತೆಗೆದು ನೀರು ಚಿಮ್ಮುವಂತೆ ಮಾಡುತ್ತಾನೆ. ಪೆದ್ದಿಯವರ ಸಾಧನೆಯಿಂದ ಗುರುಗಳು ಹಾಗೂ ರಾಜನು ಸಂತುಷ್ಟಗೊಳ್ಳುತ್ತಾರೆ. ಎಲ್ಲೆಲ್ಲೂ ಜೈಕಾರ ಮೊಳಗುತ್ತದೆ. ಪೆದ್ದಿಯ ಕೀರ್ತಿ  ಎಲ್ಲೆಡೆ ಹರಡುತ್ತದೆ. ತನ್ನ ಶಿಷ್ಯನ ಭಕ್ತಿ, ನಿಷ್ಠೆ, ಸಾಧನೆ ಕಂಡು ಉರಿಲಿಂಗ ದೇವರಿಗೆ ಅಪಾರ ಸಂತಸವಾಗುತ್ತದೆ. ಅವನನ್ನು ಉರಿಲಿಂಗ ಪೆದ್ದಿ ಎಂದು ನಾಮಕರಣ ಮಾಡಿ ನಲ್ಲೂರ ಮಠದ ಅಧಿಕಾರವನ್ನು ವಹಿಸುತ್ತಾರೆ.....
      ಆದರೆ ವಿಪರ್ಯಾಸದ ಸಂಗತಿಯೆಂದರೆ ಅಸ್ಪೃಶ್ಯನಾಗಿದ್ದ ಉರಿಲಿಂಗ ಪೆದ್ದಿಯನ್ನು ಪೀಠಕ್ಕೆ ನೇಮಿಸಿದ್ದರಿಂದ ಸಮಾಜದಲ್ಲಿ ಅಶಾಂತಿ ಭುಗಿಲೇಳುತ್ತದೆ. ಸಂಪ್ರದಾಯವಾದಿಗಳು ನಲ್ಲೂರು ಮಠಕ್ಕೆ ಬೆಂಕಿ ಹಚ್ಚುತ್ತಾರೆ ಎಂದು ತಿಳಿದು ಬರುತ್ತದೆ. ಕಲ್ಯಾಣದಲ್ಲಿ ಬಸವಣ್ಣನವರು ಎದುರಿಸಿದಂತೆಯೇ  ಕಂಧಾರದಲ್ಲಿಯೂ ಗುರು- ಶಿಷ್ಯರಿಬ್ಬರೂ ಘೋರ ಪರಿಣಾಮ ಎದುರಿಸಿರುವ ಸಾಧ್ಯತೆ ಇದೆ. ಉರಿಲಿಂಗ ಪೆದ್ದಿಯವರು ಪೀಠಾಧಿಕಾರಿ ಆಗುವವರೆಗಿನ ವಿಷಯ ಉತ್ತರ ದೇಶದ ಬಸವಲಿಂಗ ಕೃತ ಭೈರವೇಶ್ವರ ಕಾವ್ಯದ ಕಥಾ ಸಾಗರ, ಶಾಂತಲಿಂಗ ದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ, ಅದೃಶ್ಯ ಕವಿಯ ಪ್ರೌಢದೇವರಾಯನ ಕಾವ್ಯ, ಮಹಾಲಿಂಗ ದೇವನ ಏಕೋತ್ತರ ಶತಸ್ಥಲ ಮೊದಲಾದ ಕಾವ್ಯಗಳಲ್ಲಿ ಬರುತ್ತದೆ. ಆದರೆ ಪೆದ್ದಿಯನ್ನು ಪೀಠಕ್ಕೆ ನೇಮಿಸಿದ ನಂತರ ಮಠಕ್ಕೆ ಬೆಂಕಿ ಹಚ್ಚಿದ ಘಟನೆ ಬಿಟ್ಟರೆ ಕಂಧಾರದಲ್ಲಿ ಉದ್ಭವಿಸಿದ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗುವುದಿಲ್ಲ. ಅಲ್ಲದೆ ನಂತರದ ಕಾಲದಲ್ಲಿಯೂ ಈ ಬಗ್ಗೆ ಸಂಶೋಧಕರು ಮೌನವನ್ನೇ ತಾಳಿರುವುದು ಕಂಡು ಬರುತ್ತದೆ.
    ಹೀಗಾಗಿ ಉರಿಲಿಂಗ ಪೆದ್ದಿ ಎಷ್ಟು ದಿನಗಳವರೆಗೆ ಮಠದಲ್ಲಿ ಉಳಿಯುತ್ತಾರೆ. ಎಂಥ ಪರಿಸ್ಥಿತಿಗೆ ಸಿಲುಕುತ್ತಾರೆ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಆದರೂ ಈ ಸಂದರ್ಭದಲ್ಲಿ ಸಂಪ್ರದಾಯವಾದಿಗಳು ಉರಿಲಿಂಗ ಪೆದ್ದಿ ಅವರಿಗೆ ಕಿರುಕುಳ ಕೊಡುತ್ತಾರೆ. ಅದನ್ನು ತಾಳದೆ ಅವರು ಮಠವನ್ನು ತ್ಯಜಿಸಿ ಕಲ್ಯಾಣದೆಡೆಗೆ ಪ್ರಯಾಣ ಬೆಳೆಸುತ್ತಾರೆ. ಇಲ್ಲಿಯೇ ಲಿಂಗೈಕ್ಯರಾಗುತ್ತಾರೆ. ಅವರ ಸಮಾಧಿ ಸ್ಥಳ ಕಲ್ಯಾಣದಲ್ಲಿಯೇ ಇದೆ ಎಂಬ ವಿಷಯ ಕೆಲವು ಗ್ರಂಥಗಳಲ್ಲಿ ಉಲ್ಲೇಖಗೊಂಡಿದೆ.....
     ಪೆದ್ದಿಯವರು  ಪಾಂಡಿತ್ಯಪೂರ್ಣ ವಚನಗಳನ್ನು ರಚಿಸಿರುವುದಲ್ಲದೆ ಅವುಗಳಲ್ಲಿ ಸಂಸ್ಕೃತದ ಶ್ಲೋಕಗಳನ್ನು ಹೇರಳವಾಗಿ ಬಳಸಿಕೊಂಡಿದ್ದಾರೆ. ಮಠಾಧೀಶರಾದ ನಂತರವೇ ಅವರು ಕನ್ನಡ ಮತ್ತು ಸಂಸ್ಕೃತ ಭಾಷೆ ಕಲಿತು ವೇದ ಉಪನಿಷತ್ತುಗಳನ್ನು ಅಭ್ಯಸಿಸಿ ಇಷ್ಟೇಲ್ಲ ವಚನಗಳನ್ನು ರಚಿಸಿದರು ಎಂದು ಹೇಳಲಾಗುತ್ತದೆ. ಒಂದುವೇಳೆ ಹೀಗೆಯೇ ಆಗಿದ್ದರೆ ಅವರು ಎಂಥ ಕಠೋರ ಸಾಧನೆ ಕೈಗೊಂಡಿರಬೇಕು. ಅವರಲ್ಲಿ ಎಂಥ ಪ್ರತಿಭೆ ಇರಬೇಕು ಎಂಬುದನ್ನು ಊಹಿಸುವುದು ಸಹ ಕಷ್ಟವಾಗುತ್ತದೆ. ಕೆಲ ವಿದ್ವಾಂಸರು ಅವರಲ್ಲಿ ಮೊದಲೇ ಪಾಂಡಿತ್ಯವಿದ್ದರೂ ಅಸ್ಪೃಶ್ಯನಾಗಿದ್ದರಿಂದ ಯಾರೂ ಲಕ್ಷ ಕೊಡಲಿಕ್ಕಿಲ್ಲ. ಕಟ್ಟಿಗೆ ಮಾರುವ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿದ್ದರೂ ಲಿಂಗದೀಕ್ಷೆ ಕೊಡಲು ಯಾರೂ ಮುಂದಾಗಲಿಕ್ಕಿಲ್ಲ. ಅದಕ್ಕಾಗಿಯೇ ಸೂರಯ್ಯನ ಮನೆಯಲ್ಲಿನ ದೀಕ್ಷಾ ಕಾರ್ಯವನ್ನು ಅವನು ಕಳ್ಳತನದಿಂದ ನೋಡಿರಬೇಕು ಎಂದು ಅಭಿಪ್ರಾಯಪಡುತ್ತಾರೆ. ಈ ಒಂದೇ ಕಾರಣಕ್ಕಾಗಿ ಅವನಿಗೆ ಕಳ್ಳ ಎಂಬ ಹಣೆಪಟ್ಟಿ ಹಚ್ಚಿರುವ ಸಾಧ್ಯತೆಯೂ ಇದೆ.
       ಅವರ ಕಾರ್ಯಕ್ಷೇತ್ರದ ಬಗ್ಗೆಯೂ ವಿದ್ವಾಂಸರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಅವರು ಇಂದಿನ ನಾಂದೇಡ ಜಿಲ್ಲೆಯ ಕಂಧಾರದವರು ಎಂದು ಬಹಳಷ್ಟು ಕಡೆ ಉಲ್ಲೇಖಗೊಂಡಿದೆ. ಆದರೆ ಕೆಲವರು ಬಿಜಾಪುರ ಜಿಲ್ಲೆಯ ನಂದವಾಡಗಿ ಅವರ ಮೂಲ ಸ್ಥಳ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಅವರು ಜೀವಿಸಿದ್ದ ಕಾಲಮಾನದ ಬಗ್ಗೆಯೂ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಸಾಮಾನ್ಯವಾಗಿ ಬಸವಣ್ಣನವರ ಸಮಕಾಲೀನರು ಎಂಬುದು ಎಲ್ಲರ ತಿಳಿವಳಿಕೆಯಾಗಿದೆ. ಆದರೆ ಕೆಲವರು ಅವರು 14ನೇ ಶತಮಾನದಲ್ಲಿದ್ದರು ಎಂದೂ ಹೇಳುತ್ತಾರೆ. ಶರಣ ಸಾಹಿತಿ ಬಿ.ಮಹಾದೇವಪ್ಪ ಅವರಂತೂ ಇವೆರಡರಕ್ಕಿಂತ ಭಿನ್ನವಾದ ವಾದ ಮಂಡಿಸುತ್ತಾರೆ. ಕಲ್ಯಾಣದಲ್ಲಿ ಬಸವಣ್ಣನವರು ಬ್ರಾಹ್ಮಣ ಮಧುವರಸ ಮತ್ತು ಸಮಗಾರ ಹರಳಯ್ಯನ ನಡುವೆ ನೆಂಟಸ್ತನ ಏರ್ಪಡಿಸುವ ಪೂರ್ವದಲ್ಲಿಯೇ ಕಂಧಾರದಲ್ಲಿ ಉರಿಲಿಂಗ ದೇವರು ಹುಟ್ಟು ಅಸ್ಪೃಶ್ಯರಾಗಿದ್ದ ಪೆದ್ದಣ್ಣನವರನ್ನು ಜಂಗಮ ಸ್ಥಲಕ್ಕೆ ಏರಿಸಿದ್ದರು ಎಂದು ಅವರು `ಅರಿವು ಆಚಾರ' ಗ್ರಂಥದಲ್ಲಿ ದಾಖಲಿಸಿದ್ದಾರೆ. ಏನಿದ್ದರೂ ಈ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.
   ಕಂಧಾರದ ಸರ್ವಲೋಕಾಶ್ರಯ ಮಂಟಪ:
      ಉರಿಲಿಂಗ ಪೆದ್ದಿಯವರ ಕಾರ್ಯಕ್ಷೇತ್ರವಾಗಿತ್ತು ಎನ್ನಲಾಗುವ ಕಂಧಾರ ಇಂದು ನಾಂದೇಡ ಜಿಲ್ಲೆಯ ತಾಲ್ಲೂಕು ಸ್ಥಳವಾಗಿದೆ. ಜಿಲ್ಲಾ ಕೇಂದ್ರದಿಂದ ಪಶ್ಚಿಮಕ್ಕೆ 60 ಕಿ.ಮೀ ಅಂತರದಲ್ಲಿದೆ. ಸದ್ಯ ಇಲ್ಲಿ ಉರಿಲಿಂಗ ಪೆದ್ದಿಯವರಿಗೆ ಹಾಗೂ ಉರಿಲಿಂಗ ದೇವರಿಗೆ ಸಂಬಂಧಿಸಿದ ಯಾವುದೇ ಕುರುಹುಗಳಿಲ್ಲ. ಪಟ್ಟಣದ ಮಧ್ಯದಲ್ಲಿನ ಹಾಜಿಸಯ್ಯಾ ದರ್ಗಾ  ಮೊದಲು ನಲ್ಲೂರು ಮಠ ಆಗಿತ್ತು ಎಂದು ಹೇಳಲಾಗುತ್ತದೆ. ಆದರೂ ಈ ಬಗ್ಗೆ ಪುರಾವೆಗಳು ದೊರೆಯುವುದಿಲ್ಲ. ಪಟ್ಟಣದ ಉತ್ತರ ದಿಕ್ಕಿಗೆ ಬೃಹತ್ತಾದ ಕೆರೆ ಇದೆ. ಆದರೆ ಅದರಲ್ಲಿ ಉರಿಲಿಂಗ ಪೆದ್ದಿಯವರು ನೀರು ಚಿಮ್ಮಿಸಿದ್ದರು ಎಂಬುದಕ್ಕೆ ಆಧಾರಗಳು ಲಭ್ಯವಿಲ್ಲ. ಇಲ್ಲಿ ಅತ್ಯಂತ ಪುರಾತನವಾದ ಕೋಟೆ ಮಾತ್ರ ಇದ್ದು ಈ ಸ್ಥಳ ಐತಿಹಾಸಿಕವಾಗಿ ಮಹತ್ವ ಪಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದೆ.
       ಕಂಧಾರದಲ್ಲಿ ಕ್ರಿ.ಶ.939-967 ರಲ್ಲಿ ರಾಷ್ಟ್ರಕೂಟರ 3 ನೇ ಕೃಷ್ಣನು ಆಳ್ವಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಇಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದ್ದರಿಂದ ಅವನಿಗೆ `ಕಂಧಾರಪುರವರಾಧೀಶ' ಹಾಗೂ `ಕಂಧಾರದೇವ'ಎಂಬ ಬಿರುದು ಕೊಡಲಾಗಿತ್ತು. ಆತನ ಕಾಲದಲ್ಲಿ ಇಲ್ಲಿ `ಸರ್ವಲೋಕಾಶ್ರಯ ಮಂಟಪ' ನಿರ್ಮಾಣ ಮಾಡಲಾಗುತ್ತದೆ ಎಂದು ಮಹಾರಾಷ್ಟ್ರ  ಸರ್ಕಾರ್ ದ ಮಾಹಿತಿ ನಿರ್ದೆಶನಾಲಯದ ದಾಖಲೆಗಳಿಂದ ತಿಳಿದು ಬರುತ್ತದೆ. ಈ ಮಂಟಪ ಕಲ್ಯಾಣದ ಅನುಭವ ಮಂಟಪದಂತೆಯೇ ಇತ್ತೇ?  ಮಂಟಪದಲ್ಲಿ ಏನು ನಡೆಯುತ್ತಿತ್ತು. ಅದನ್ನು 
ಏತಕ್ಕಾಗಿ ನಿರ್ಮಿಸಲಾಗಿತ್ತು ಎಂಬುದರ ಬಗ್ಗೆ ವಿವರ ಮಾತ್ರ ಲಭ್ಯವಾಗುವುದಿಲ್ಲ. ಪಟ್ಟಣದಲ್ಲಿ `ಜಂಗತುಂಗ ಸಮುದ್ರ' ಎಂಬ ಬೃಹತ್ ಕೆರೆ, ವೀರ ನಾರಾಯಣ ಗುಡಿ, ಲಂಡಿಗೇಶ್ವರ, ಸೋಮನಾಥ ಮಂದಿರಗಳು ಸಹ ಈ ಕಾಲದಲ್ಲಿಯೇ ನಿರ್ಮಾಣವಾಗುತ್ತವೆ. ಅಂದು ನಂದವಾಡಗಿ ಅಥವಾ ನಂದಿತಟ್ ಎಂದು ಕರೆಯಲಾಗುತ್ತಿದ್ದ ಇಂದಿನ ನಾಂದೇಡ ಸಹ ರಾಷ್ಟ್ರಕೂಟರ ಹಾಗೂ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿ ಮೊದಲು ನಂದರು, ನಂತರ ಮೌರ್ಯರು, ರಾಷ್ಟ್ರಕೂಟರು ಹಾಗೂ ಚಾಲುಕ್ಯರು ಆಳ್ವಿಕೆ ನಡೆಸಿದ್ದಾರೆ. ಚಾಲುಕ್ಯರ ನಂದದೇವನ ಕಾಲದಲ್ಲಿಯೂ ಕೆಲ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದು ದಾಖಲೆಗಳಿಂದ ತಿಳಿದು ಬರುತ್ತದೆ.
 ಬೇಲೂರ ಪೆದ್ದಿ ಮಠ ಮತ್ತು ಪರಂಪರೆ 
(ಭಾಗ 6 43 ರಿಂದ 51)
             ಬೇಲೂರ ಗ್ರಾಮಕ್ಕೆ ಮಹತ್ವ ಬರಲು ಭಿಲ್ಲೇಶ ಬೊಮ್ಮಯ್ಯನ ಗುಡಿಯಂತೆಯೇ ದಲಿತ ಶರಣ ಉರಿಲಿಂಗ ಪೆದ್ದಿ ಅವರ ಮಠವೂ ಕಾರಣವಾಗಿದೆ. ಈ ಗ್ರಾಮ ಈಗ ಗ್ರಾಮ ಪಂಚಾಯತ್ ಕೇಂದ್ರವಾಗಿದೆ. ಇಲ್ಲಿ  ಸರ್ಕಾರಿ  ಪ್ರೌಢಶಾಲೆ ಹಾಗೂ ಖಾಸಗಿ ಶಾಲೆಗಳು ಸಹ ಇದ್ದು ಈಚೆಗೆ ಶೈಕ್ಷಣಿಕ ಕೇಂದ್ರವಾಗಿ ಬೆಳೆದಿದೆ. ಇಲ್ಲಿಂದ ಪೂರ್ವಕ್ಕೆ ಚುಳಕಿನಾಲಾ ಜಲಾಶಯದ ರಸ್ತೆಯಲ್ಲಿ ಉರಿಲಿಂಗಪೆದ್ದಿ ಅವರ ಮಠವಿದೆ. ಮಠದ ಸುತ್ತಲೂ ಮೊದಲು ಪರಿಶಿಷ್ಟ ಜಾತಿಯವರ ಮನೆಗಳಿದ್ದವು. ಕೆಲ ವರ್ಷಗಳ ಹಿಂದೆ ಇಲ್ಲಿಯ ಮನೆಗಳು ಗ್ರಾಮದ ಪಶ್ಚಿಮಕ್ಕೆ ಸ್ಥಳಾಂತರಗೊಂಡವು. ಈ ಕಾರಣ ಇಲ್ಲಿನ ಹಳೆಯ ಕಟ್ಟಡಗಳು ಹಾಳು ಬಿದ್ದಿವೆ. ಇಂಥ ಮನೆಗಳ ಕಲ್ಲು ಮಣ್ಣಿನ ರಾಶಿಯ ನಡುವೆ ಮಠದ ಮಂಟಪ ಮಾತ್ರ ಎದ್ದು ಕಾಣುತ್ತದೆ. ಸುತ್ತಲೂ ಹೊಲಗಳಿದ್ದು ನಿರ್ಜನ ಪ್ರದೇಶವಾಗಿರುವ ಕಾರಣ ವಿಶೇಷ ಸಂದರ್ಭಗಳಲ್ಲಿ ಮಾತ್ರ ಭಕ್ತರು ಮಠಕ್ಕೆ ಭೇಟಿ ಕೊಡುತ್ತಾರೆ.
    ಬಸವಕಲ್ಯಾಣ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿನ ಬಸವಾದಿ ಶರಣರಿಗೆ ಸಂಬಂಧಿಸಿದ ಸ್ಮಾರಕಗಳು ಇತ್ತೀಚಿನವರೆಗೆ ಕತ್ತಲಲ್ಲಿಯೇ ಇದ್ದವು. ಸಂಪೂರ್ಣವಾಗಿ ಹಾಳಾಗಿರುವ ಇವುಗಳನ್ನು ಪುನಃ ಗುರುತಿಸಿ ಅಭಿವೃದ್ಧಿಪಡಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮತ್ತು  ಸರ್ಕಾರ್  ಈಚೆಗೆ  ಕೈಗೆತ್ತಿಕೊಂಡಿದೆ. ಇದರಂತೆ ಬೇಲೂರಿನ ಉರಿಲಿಂಗ ಪೆದ್ದಿ ಮಠ ಸಹ ಮಠಾಧಿಪತಿಗಳ ಮತ್ತು ಗ್ರಾಮಸ್ಥರ ಪ್ರಯತ್ನ ಹಾಗೂ ಭಕ್ತರ ಸಹಕಾರದಿಂದಾಗಿ ಈಚೆಗೆ ಅಭಿವೃದ್ಧಿ ಕಾಣುತ್ತಿದೆ.
      ಹಾಗೆ ನೋಡಿದರೆ ಕರ್ನಾಟಕ್ ದಲ್ಲಿ ಉರಿಲಿಂಗ ಪೆದ್ದಿ ಮಠಗಳು ಬಹಳಷ್ಟಿವೆ. ಇವೆಲ್ಲ ಮಠಗಳು ಶಕ್ತ್ಯಾನುಸಾರ ಉರಿಲಿಂಗ ಪೆದ್ದಿ ಶರಣರ ಬಗ್ಗೆ ಪ್ರಚಾರ ಕೈಗೊಂಡು ಶರಣ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗುತ್ತಿವೆ. ಇವುಗಳಲ್ಲಿ ಕೆಲವು ಮನೆಗಳಂತಿದ್ದರೆ ಇನ್ನು ಕೆಲವು ಮಠಗಳು ದೊಡ್ಡ ದೇವಾಲಯಗಳಂತಿದ್ದು ಅವುಗಳಿಗೆ ಸಾಕಷ್ಟು ಆಸ್ತಿಯೂ ಇದೆ. ಗುಲ್ಬರ್ಗ ಜಿಲ್ಲೆಯ ಕೊಡ್ಲಾ, ಗುಂಡಗುರ್ತಿ,ಟೆಂಗಳಗಿ, ಹೊನಕುಂಟಾ, ಹುರಸಗುಂಡಗಿ, ಯಾದಗಿರಿ, ಬೀದರ ಜಿಲ್ಲೆಯ ಬೇಲೂರು, ಬೇಮಳಖೇಡ್, ಭಾಲ್ಕಿ, ಖಟಕಚಿಂಚೋಳಿ, ಗೋರಟಾ, ಮುಚಳಂಬ, ಪ್ರತಾಪುರ, ತ್ರಿಪುರಾಂತ, ಬಸವಕಲ್ಯಾಣ, ಗೋಧಿ ಹಿಪ್ಪರ್ಗಾ , ಘಾಟಬೋರೋಳ, ಮೈಸೂರು ಜಿಲ್ಲೆಯ ಮಲ್ಕುಂಟಿ, ನಂಜನಗೂಡು, ಮೈಸೂರು, ಎಂ.ಕನ್ನೇನಹಳ್ಳಿ, ಮಾರನಹಳ್ಳಿ, ಬೆಂಕಿಪುರ, ಲಕ್ಷ್ಮಿಪುರ, ಮಡಕುತೊರೆ, ಕಾಳಿಗುಂಡಿ, ಮರಡಿಪುರ, ಚಾಮರಾಜನಗರ ಜಿಲ್ಲೆಯ ಮಣಗಳ್ಳಿ, ಸತ್ಯಗಾಲ, ಕುನಹಳ್ಳಿ, ನರಿಪುರ, ಹುಡಿಗಾಲ, ಯಾಲಕ್ಕೂರು, ಶ್ರೀರಾಮಪುರ, ದಡದಳ್ಳಿ, ಮಂಡ್ಯ ಜಿಲ್ಲೆಯ ಬೆಳಕವಾಡಿ, ಮಂಡ್ಯ, ಅಲಸಳ್ಳಿ,  ಹಾಸನ ಜಿಲ್ಲೆಯ ಜೋಗಿಪುರಗಳಲ್ಲಿ ಮಠಗಳಿವೆ. ಈ ಬಗ್ಗೆ ಡಾ.ಸಾಹುಕಾರ ಎಸ್.ಕಾಂಬಳೆ ಅವರು `ಲಿಂಗಾಯತ ಅಸ್ಪೃಶ್ಯರು ಒಂದು ಅಧ್ಯಯನ'ಎನ್ನುವ ಮಹಾಪ್ರಬಂಧ ರಚಿಸಿ ಡಾಕ್ಟರೇಟ್ ಪಡೆದಿದ್ದಾರಲ್ಲದೆ ಈ ಮಠಗಳನ್ನು ಬೆಳಕಿಗೆ ತರುವ ಪ್ರಯತ್ನ ಮಾಡಿದ್ದಾರೆ.
     ಮೊದಲೇ ತಿಳಿಸಿರುವಂತೆ ಉರಿಲಿಂಗ ಪೆದ್ದಿ ಶರಣರ ಮೂಲ ಸ್ಥಳದ ಬಗ್ಗೆ ವಿದ್ವಾಂಸರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಮಹಾರಾಷ್ಟ್ರದ ಇಂದಿನ ನಾಂದೇಡ ಜಿಲ್ಲೆಯ ಕಂಧಾರ ಅವರ ಹುಟ್ಟೂರು ಎಂಬುದು ಹೆಚ್ಚಿನವರ ಅಭಿಪ್ರಾಯವಾಗಿದೆ. ಆದರೆ  ಬಿಜಾಪುರ ಜಿಲ್ಲೆಯ ನಂದವಾಡಗಿ ಅವರ ಮೂಲ ಸ್ಥಳ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅವರ ಕಾಲಮಾನದ ಬಗ್ಗೆಯೂ ಖಚಿತ ನಿಲುವು ತಾಳಲು ಯಾವುದೇ ಆಧಾರಗಳಿಲ್ಲ. ಅದರಂತೆ ಅವರ ಜೀವನದ ಘಟನೆಗಳ ಬಗ್ಗೆಯೂ ಹೆಚ್ಚಿನ ವಿವರ ಲಭ್ಯವಿಲ್ಲ. ಉರಿಲಿಂಗ ಪೆದ್ದಿಯವರು ಕಂಧಾರದಲ್ಲಿನ ನಲ್ಲೂರು ಮಠದ ಅಧಿಪತಿಯಾಗಿ ಎಷ್ಟು ದಿನ ಉಳಿಯುತ್ತಾರೆ. ಎಂಥ ಪರಿಸ್ಥಿತಿ ಎದುರಿಸುತ್ತಾರೆ  ಎಂಬುದರ ಬಗ್ಗೆ ನಿಖರವಾದ ಮಾಹಿತಿ ದೊರೆಯುವುದಿಲ್ಲ. ಆದರೂ ದಲಿತ ಪೆದ್ದಣ್ಣನಿಗೆ ಪೀಠವನ್ನು ವಹಿಸಿದ ಕಾರಣಕ್ಕಾಗಿ ಉರಿಲಿಂಗ ದೇವರು ಮೇಲ್ವರ್ಗದವರ ಕೆಂಗಣ್ಣಿಗೆ ಗುರಿಯಾಗಿ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಉರಿಲಿಂಗಪೆದ್ದಿ ಸಹ ಜನರ ಕಿರುಕುಳ ತಾಳದೆ ಮಠವನ್ನು ತ್ಯಜಿಸುತ್ತಾರೆ ಎಂಬುದು ಕೆಲವರ ಊಹೆಯಾಗಿದೆ. ಶರಣರ ಕಾರ್ಯಕ್ಷೇತ್ರಕ್ಕ್ಕೆ ಹೋಗದೆ ಗತ್ಯಂತರವಿಲ್ಲ ಎಂಬುದನ್ನು  ತಿಳಿದು ಅವರು ಕಲ್ಯಾಣಕ್ಕೆ ಬಂದಿರಬಹುದು ಎನ್ನಲಾಗುತ್ತದೆ.
   ಹೀಗೆ ಬಸವಣ್ಣನ ಸಾನಿಧ್ಯವನ್ನು ಬಯಸಿ ಕಲ್ಯಾಣಕ್ಕೆ ಆಗಮಿಸಿದ ಅವರು ಇಲ್ಲಿಂದ 10 ಕಿ.ಮೀ ದೂರದಲ್ಲಿರುವ ಇಂದು ಬೇಲೂರು ಗ್ರಾಮವಿರುವ ಸ್ಥಳದಲ್ಲಿ ವಾಸ್ತವ್ಯ ಹೂಡುತ್ತಾರೆ ಎನ್ನಲಾಗುತ್ತದೆ. ಕೆಲವು ಗ್ರಂಥಗಳಲ್ಲಿ ಕಲ್ಯಾಣದ ಸಮೀಪದಲ್ಲಿಯೇ ಪೆದ್ದಿಯವರ ಸಮಾಧಿ ಇದೆ ಎಂಬುದು ದಾಖಲಾಗಿದೆ. ಬೇಲೂರ ಮಠವನ್ನು ಬಿಟ್ಟರೆ ಬಸವಕಲ್ಯಾಣದ ಭೀಮನಗರ ಓಣಿಯಲ್ಲಿ ಮಾತ್ರ ಅವರ ಗವಿ ಆಕಾರದ ಮಂದಿರವಿದೆ. ಇವೆರಡರಲ್ಲಿ ಯಾವುದಾದರೊಂದು ಸ್ಥಳದಲ್ಲಿ ಸಮಾಧಿ(ಗದ್ದುಗೆ) ಇರುವ ಸಾಧ್ಯತೆ ಇದೆ.
    ಬೇಲೂರನಲ್ಲಿ ಅಂದು ಅವರು ವಾಸಿಸಿದ ಸ್ಥಳವೇ ಮುಂದೆ ಮಠವಾಗಿ ರೂಪುಗೊಂಡಿದೆ. ಅಲ್ಲದೆ ಮಠಕ್ಕೆ ಮಠಾಧಿಪತಿಗಳನ್ನು ನೇಮಿಸುವ ಪರಂಪರೆ ಬೆಳೆದು ಬಂದಿದೆ. ಇದುವರೆಗೆ ಶ್ರೀ ಶಿವಲಿಂಗ ಸ್ವಾಮಿ, ಶ್ರೀ ಶಾಂತವೀರ ಸ್ವಾಮಿ, ಶ್ರೀ ಭಾನುದಾಸ ಸ್ವಾಮಿ, ಶ್ರೀ ಶಣ್ಮುಖ ಸ್ವಾಮಿ, ಶ್ರೀ ಗೋಣಯ್ಯ  ಸ್ವಾಮಿ, ಶ್ರೀ ಶಿವಲಿಂಗೇಶ್ವರ ಶಿವಯೋಗಿ, ಶ್ರೀ ಮಹಾದೇವ ಸ್ವಾಮಿ, ಶ್ರೀ ಶಿವಯೋಗಿ ಸ್ವಾಮಿ, ಶ್ರೀ ಬಸವಂತ ಸ್ವಾಮಿ ಒಳಗೊಂಡು 13ಜನ ಸ್ವಾಮಿಗಳು ಪೀಠವನ್ನು ಅಲಂಕರಿಸಿದ್ದಾರೆ. 2001ರಲ್ಲಿ ಇಂದಿನ ಮಠಾಧಿಪತಿಗಳಾದ ಶ್ರೀ ಪಂಚಾಕ್ಷರಿ ಸ್ವಾಮಿಯವರು ಅಧಿಕಾರ ವಹಿಸಿಕೊಂಡರು.
    ಉರಿಲಿಂಗ ಪೆದ್ದಿಯವರ ಮೂಲಸ್ಥಳವಾದ ಕಂಧಾರದವರಾದ ವಗ್ಗೆ (ವಾಘಮಾರೆ) ಕುಟುಂಬದವರು ನೂರಾರು ವರ್ಷಗಳ ಹಿಂದೆಯೇ ಬೇಲೂರಿಗೆ ಬಂದು ವಾಸವಾಗಿದ್ದಾರೆ. ಮುಲ್ಲಾ ಮಸಟಕಿ, ತುಕಾರಾಮ, ಗೀರೆಪ್ಪ, ತುಕನಾಕ, ಗುಂಡಾಜಿ, ಮುಲ್ಲಾ ಜಟಿಂಗ್, ಸೈದಪ್ಪ, ವಿಠ್ಠಲ್, ಕಲ್ಲಪ್ಪ ಅವರು ಈ ಮನೆತನದ ಐದಾರು ತಲೆ ಮಾರಿನ ಪ್ರಮುಖರಾಗಿದ್ದಾರೆ. ಇವರು ಇಲ್ಲಿ `ಕಂಧಾರದೇವಿ'ಯ ಚಿಕ್ಕ ಮಂದಿರವನ್ನೂ ನಿರ್ಮಿಸಿದ್ದಾರೆ. ಉರಿಲಿಂಗ ಪೆದ್ದಿಯವರ ಭಕ್ತರಾಗಿರುವಂತೆ ಇವರು ಕಂಧಾರ ದೇವಿಯ ಆರಾಧಕರು ಸಹ ಆಗಿದ್ದಾರೆ. ಇವರು ಇಲ್ಲಿಗೆ ಆಗಮಿಸಿರುವುದು ಹಾಗೂ ಉರಿಲಿಂಗ ಪೆದ್ದಿಯವರ ಮಠಕ್ಕೆ ಕಟ್ಟಾ ಭಕ್ತರಾಗಿ ನಡೆದುಕೊಂಡು ಬರುತ್ತಿರುವುದನ್ನು ನೋಡಿದರೆ ಪೆದ್ದಿ ಶರಣರ ಮೂಲ ಸ್ಥಳ ಕಂಧಾರವೇ ಆಗಿದೆ ಎಂಬುದು ಸ್ಪಷ್ಟವಾಗುತ್ತದೆ...