ಗುರುವಾರ, ಅಕ್ಟೋಬರ್ 14, 2010

ಪ್ರಗತಿಯತ್ತ ಬಸವಕಲ್ಯಾಣ ಮತ್ತು 'ಬಸವ ಉತ್ಸವ'

ಕರ್ನಾಟಕ  ಸರ್ಕಾರದಿಂದ ಮಂಜೂರಾದ 50 ಲಕ್ಷ ರೂಪಾಯಿ ವೆಚ್ಚದಲ್ಲಿ 2011 ರ ಮಾರ್ಚ 25,26,27 ರಂದು ಶರಣರ ಕಾರ್ಯಕ್ಷೇತ್ರವಾದ ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ 2 ನೇಯ ಬಸವ ಉತ್ಸವ ಅದ್ದೂರಿಯಾಗಿ ನಡೆಯಿತು.
ಪ್ರಥಮದಿನ ಅದ್ದೂರಿ ಮೆರವಣಿಗೆ ನಡೆದರೆ ಮೂರು ದಿನಗಳ ಕಾಲ ಸಂಜೆ ಇಲ್ಲಿನ ರಥ ಮೈದಾನದಲ್ಲಿ ಸುಪ್ರಸಿದ್ಧ ಕಲಾವಿದರಿಂದ ನೃತ್ಯ, ಗಾಯನ, ನಾಟಕ ಹಮ್ಮಿಕೊಳ್ಳಲಾಗಿತ್ತು. ಹಿಂದಿ ಚಿತ್ರರಂಗದ ಪ್ರಸಿದ್ಧ ಗಾಯಕಿ ಅನುರಾಧಾ ಪೌಡವಾಲ್, ಗೀತಾ ಜಾವಡೇಕರ್, ವೆಂಕಟೇಶಕುಮಾರ ಧಾರವಾಡ,  ಸುವರ್ಣಾ  ರಾಠೋಡ ಭಾಲ್ಕಿ ಅವರು ತಮ್ಮ ಸುಮಧುರ ಕಂಠದಿಂದ ಹಾಡಿ ಜನಮನ ತಣಿಸಿದರು. ಸಂಗೀತ ನಿರ್ದೆಶಕ ಗುರುಕಿರಣ ಬೆಂಗಳೂರು ಮತ್ತು ಪ್ರಮೋದಾ ಉಪಾಧ್ಯಾಯ ಅವರ ನೃತ್ಯ ಎಲ್ಲರನ್ನು ಮೋಡಿ ಮಾಡಿತು. ಪ್ರತಿದಿನ ಮಧ್ಯಾಹ್ನ ವಿಚಾರಗೋಷ್ಠಿಗಳನ್ನು ಸಹ ಹಮ್ಮಿಕೊಳ್ಳಲಾಗಿತ್ತು. ರಾಜಕೀಯ, ಧಾರ್ಮಿಕ್ ಮುಖಂಡರು ಒಳಗೊಂಡು ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡು ಉಪನ್ಯಾಸಕ ನೀಡಿದರು.
  ಉತ್ಸವದ ಸಮಾರೋಪ ಸಮಾರಂಭದಲ್ಲಿ 'ಜಗಜ್ಯೋತಿ' ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.ಇದರಲ್ಲಿ ನಾನು (ಮಾಣಿಕ ಭುರೆ) ಬರೆದ `ಪ್ರಗತಿಯತ್ತ ಬಸವಕಲ್ಯಾಣ' ಎಂಬ ಲೇಖನ ಪ್ರಕಟವಾಗಿದೆ. ಸಂಚಿಕೆಯಲ್ಲಿನ ಲೇಖನಗಳ ಮತ್ತು ಅವುಗಳ ಲೇಖಕರ ವಿವರ ಮುಂದಿನಂತಿದೆ.
1) ಬಸವೇಶ್ವರ ವಿದ್ಯೆ  -ಡಾ.ಎಂ.ಎಂ.ಕಲ್ಬುರ್ಗಿ 
2) ಮೇದಿನಿಗೆ ಹೊಸ ಬೆಳಕು ತಂದವರು 
     -ರಂಜಾನ ದರ್ಗಾ 
3) ಬಸವಣ್ಣ ಮತ್ತು ಶಿಕ್ಷಣ 
   -ಡಾ.ಬಸವರಾಜ ಬಲ್ಲೂರ
4) ಬಸವಣ್ಣನವರ ಲೋಕಜ್ಞಾನ 
     -ಡಾ.ಗಂಗಾಂಬಿಕಾ ಪಾಟೀಲ
5) ಬಸವಣ್ಣ  -ಜಗನ್ನಾಥ ಕಮಲಾಪುರೆ
6) ವಿಶ್ವದ ಏಕೈಕ ನಿಜತತ್ವಜ್ಞಾನಿ ಬಸವಣ್ಣ 
     -ಮಾತೆ ತೇಜಸ್ವಿನಿ
7) ಅಷ್ಠಾವರಣ -ಅಕ್ಕ ಅನ್ನಪೂರ್ಣ
8) ಪಂಚಾಚಾರ್ಯರು 
    - ಕಲ್ಯಾಣಮ್ಮ ಲಂಗೋಟಿ
 9) ಷಟಸ್ಥಲ ಸ್ವಾನುಭಾವ
     -ಸಿದ್ಧರಾಮನ ಶರಣರು ಬೆಲ್ದಾಳ್
10) ವಚನ ಸಾಹಿತ್ಯ ಕನ್ನಡದ 
   ಸಾಂಸ್ಕೃತಿಕ ಸಂಪತ್ತು 
    -ಜಯದೇವಪ್ಪ ಜೈನಕೇರಿ
11) ವಚನ ಸಂಸ್ಕೃತಿಯ ಸಾಮಾಜಿಕ ಹರವು 
      - ಡಾ.ಟಿ.ಆರ್.ಚಂದ್ರಶೇಖರ
12) ವಚನಕಾರರ ವಚನ ಮೌಲ್ಯಗಳು 
      -ಡಾ.ರಘುಶಂಖ ಭಾತಂಬ್ರಾ
13) ಶರಣರ ದಾಂಪತ್ಯ ಜೀವನ 
       -ಪಂಚಾಕ್ಷರಿ ಪುಣ್ಯಶೆಟ್ಟಿ
14) ವಚನಗಳಲ್ಲಿ ಏನಿಲ್ಲ  
      -ಡಾ.ಜಗನ್ನಾಥ ಹೆಬ್ಬಾಳೆ
15) ಒಂದು ವಚನದ ವೈಜ್ಞಾನಿಕತೆ 
      -ಡಾ.ಶಿವಗಂಗಾ ರುಮ್ಮಾ
16) ಶರಣರ ಪರಿಸರ ಪ್ರಜ್ಞೆ 
      - ಪ್ರೊ.ಎಸ್.ವಿ.ಕಲ್ಮಠ
17) ಆಚಾರಸತಿ ಗಂಗಾಂಬಿಕೆ 
       -ಡಾ.ಜಯದೇವಿ ತಿಬಶೆಟ್ಟಿ
18) ಆಯ್ದಕ್ಕಿ ಲಕ್ಕಮ್ಮ: ಅಸಂಗ್ರಹತತ್ವ 
       -ಎಚ್. ಮಲಕಣ್ಣ
19) ಶಿವಶರಣ ಆಯ್ದಕ್ಕಿ ಮಾರಯ್ಯ 
      -ಡಾ.ಬಂಡಯ್ಯಾ ಸ್ವಾಮಿ
20) ಶರಣಲೀಲಾ ನಾಟ್ಯಪ್ರಿಯ 
      ಬಹುರೂಪಿ ಚೌಡಯ್ಯ 
     -ರುಕ್ಮೊದ್ದೀನ್ ಇಸ್ಲಾಂಪುರ
21) ಪ್ರಗತಿಯತ್ತ ಬಸವಕಲ್ಯಾಣ 
      -ಮಾಣಿಕ ಆರ್.ಭುರೆ
22) ಚಿತ್ರ ಸಂಪದ 
.......................................
ಪ್ರಗತಿಯತ್ತ ಬಸವಕಲ್ಯಾಣ
    
     'ಕಲ್ಯಾಣ ಕ್ರಾಂತಿ'ಯು ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಕೈಗೊಂಡ ಪರಿವರ್ತನೆಯ ಪ್ರಯತ್ನದ ಫಲವಾಗಿ ಘಟಿಸಿದ ಮಹಾಕ್ರಾಂತಿ. 12ನೇ ಶತಮಾನದಲ್ಲಿ ಅಸಹನೀಯ ಅಸ್ಪೃಶ್ಯತೆ, ಶೋಷಣೆಯಿಂದಾಗಿ ದೀನ, ದಲಿತ, ದುರ್ಬಲರ ಬದುಕು ಜರ್ಜರಿತವಾಗಿತ್ತು. ಅದಕ್ಕಾಗಿ ಸಮಾನತೆಯ ನವ ಸಮಾಜ ನಿರ್ಮಾಣಕ್ಕೆ  ಬಸವಣ್ಣನವರು ಟೊಂಕ ಕಟ್ಟಿ ನಿಂತರು. ಶರಣ ಗಣವನ್ನು ಸಂಘಟಿಸಿ ಅನುಭವ ಮಂಟಪದ ಮೂಲಕ ನವೀನ ವಿಚಾರಗಳ ಬೀಜವನ್ನು ನೆಡಲು ಪ್ರಯತ್ನಿಸಿದರು. ಎದುರಿಗೆ ನಿಂತು ಸಮಗಾರ ಹರಳಯ್ಯ ಮತ್ತು ಬ್ರಾಹ್ಮಣನಾದ ಮಧುವಯ್ಯನವರ ಮಕ್ಕಳ ಮದುವೆ ಮಾಡಿಸಿದರು. ಇದರಿಂದಾಗಿ ಎಲ್ಲೆಡೆ ಹಾಹಾಕಾರ ಎದ್ದಿತು. ಕೋಪಗೊಂಡ ಬಿಜ್ಜಳ ಅರಸನು ಹರಳಯ್ಯ ಮಧುವಯ್ಯನವರನ್ನು ಆನೆ ಕಾಲಿಗೆ ಕಟ್ಟಿ ಎಳೆಯುವ ಶಿಕ್ಷೆ ಕೊಟ್ಟ. ಜಾತಿವಾದಿಗಳು ಶರಣರನ್ನು `ಕಲ್ಯಾಣ'ದಿಂದ ( ಇಂದಿನ ಬಸವಕಲ್ಯಾಣ) ಓಡಿಸಿದರು. ಅವರು ಬರೆದ ಅಮೂಲ್ಯ ತತ್ವಗಳನ್ನು ಒಳಗೊಂಡ ವಚನ ಸಾಹಿತ್ಯವನ್ನು ಸುಟ್ಟರು. ಹೀಗಾಗಿ ಕಾಲಕ್ರಮೇಣ ಎಲ್ಲವೂ ಹಾಳಾಗಿ ಮಣ್ಣಿನಲ್ಲಿ ಹೂತು ಹೋಯಿತು. ಒಂದು ಕಾಲದಲ್ಲಿ ವೈಭವದಿಂದ ಮೆರೆದಿದ್ದ ಅಂದಿನ ಭವ್ಯ ಪಟ್ಟಣದ ಯಾವುದೇ ಕುರುಹುಗಳು ಇಲ್ಲಿ ಉಳಿಯಲಿಲ್ಲ. ಬಸವಾದಿ ಶರಣರ ನೇತೃತ್ವದಲ್ಲಿ ನಿರ್ಮಾಣಗೊಂಡ ಮಠ, ಮಂದಿರ, ಮಂಟಪ ಯಾವುದೂ ಇಲ್ಲದಂತಾಯಿತು.
     ಹಾಗೆ ನೋಡಿದರೆ, ಬಸವಣ್ಣನವರು ವರ್ಗ, ಜಾತಿ ಭೇದದ ಬಗ್ಗೆ ತಾಳಿದ್ದ ನಿಲುವಿನಂತೆಯೇ ಸ್ಥಾವರಕ್ಕೂ ವಿರೋಧಿಸಿದ್ದರು. `ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡುವೆ ಬಡವನಯ್ಯ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶವಯ್ಯಾ...' ಎಂದು ಅವರು ಒಂದು ವಚನದಲ್ಲಿ ಹೇಳಿದ್ದಾರೆ. ಇದು ಅವರು ದೇವಾಲಯ ಸಂಸ್ಕೃತಿ ಬಗ್ಗೆ ಹೊಂದಿದ್ದ ತಿರಸ್ಕಾರದ ಭಾವನೆಯನ್ನು ಎತ್ತಿ ತೋರಿಸುತ್ತದೆ. ಒಂದುವೇಳೆ ಈ ತತ್ವವನ್ನು ಆಧಾರವಾಗಿಟ್ಟುಕೊಂಡು ಯೋಚಿಸಿದರೆ ಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣದಲ್ಲಿ ಏನೂ ನಿರ್ಮಾಣ ಆಗಿಲ್ಲ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ.
    ಆದರೆ ಅಂದು ಅವರ ಕರೆಗೆ ಓಗೊಟ್ಟು ದೂರದೂರದ ಅಸಂಖ್ಯಾತ ಶರಣರು ಇಲ್ಲಿಗೆ ಆಗಮಿಸಿದರು. ಅವರೆಲ್ಲರೂ ಶಿವಯೋಗ ಸಾಧನೆ ಮಾಡುವುದಕ್ಕೆ ಹಾಗೂ ಒಂದೆಡೆ ಕುಳಿತು ಚರ್ಚಿಸಲು ಕೆಲವೊಂದು ಕಟ್ಟಡಗಳನ್ನು ಕಟ್ಟಿದರು. ಮಹಾಮನೆ, ಮಠ, ಅನುಭವ ಮಂಟಪವನ್ನು ನಿರ್ಮಿಸಿದರು ಎಂಬುದು ದಾಖಲೆಗಳಿಂದ ತಿಳಿದು ಬರುತ್ತದೆ. ವಿಪರ್ಯಾಸವೆಂದರೆ  ನಂತರದ ಕಾಲದಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ವಾಸ್ತವಿಕತೆಯನ್ನು ಅರಿಯುವ ಪ್ರಯತ್ನ ನಡೆದಿಲ್ಲ ಉತ್ಖನನ ಕೈಗೊಂಡು ಮಣ್ಣಿನಡಿ ಹೂತುಹೋಗಿರುವುದನ್ನು ತೆಗೆಯಲು ಯತ್ನಿಸಲಾಗಿಲ್ಲ. ಹೀಗಾಗಿ ಬಸವಣ್ಣನ ಕಾಲದ `ಕಲ್ಯಾಣ' ಕೇವಲ ಕಲ್ಪನೆಯಾಗಿಯೇ ಉಳಿದಿದೆ.
ಇತಿಹಾಸ:
     ಐತಿಹಾಸಿಕ ಆಧಾರಗಳ ಪ್ರಕಾರ ಕಲ್ಯಾಣವು 9ರಿಂದ 12ನೇ ಶತಮಾನದವರೆಗೆ ಚಾಲುಕ್ಯರ ರಾಜಧಾನಿಯಾಗಿತ್ತು. ಅಂದು ಕಲ್ಯಾಣದಂಥ ಪಟ್ಟಣ ಎಲ್ಲಿಯೂ ಇರಲಿಲ್ಲ ಎಂದು ಕೆಲವರು ಬರೆದಿಟ್ಟಿದ್ದಾರೆ. ವಚನಗಳಲ್ಲಿಯೂ ಕಲ್ಯಾಣದ ವಿಸ್ತಾರ ಮತ್ತು ಭವ್ಯತೆಯ ವರ್ಣನೆ ಬರುತ್ತದೆ. ಕ್ರಾಂತಿ ನಡೆದು ಶರಣರು ಇಲ್ಲಿಂದ ಬೇರೆಡೆ ಹೋದ ನಂತರವೂ ದೇವಗಿರಿ ಯಾದವರು, ಕಾಕತೀಯರು ಆಳ್ವಿಕೆ ನಡೆಸುತ್ತಾರೆ. ನಂತರ ಮುಸ್ಲಿಂ ದೊರೆಗಳಾದ ತುಘಲಕ್, ಬಹಮನಿ ಸುಲ್ತಾನರು, ಮೊಗಲ ದೊರೆಗಳು ಇಲ್ಲಿ ಆಳಿದ್ದಾರೆ. ಕೆಲಕಾಲ ಮರಾಠರ ಶಿವಾಜಿ ಸಹ ಇಲ್ಲಿನ ಕೋಟೆಯನ್ನು ವಶಪಡಿಸಿಕೊಂಡ ಬಗ್ಗೆ ಇತಿಹಾಸ ಹೇಳುತ್ತದೆ. 1740 ರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆಯುವವರೆಗೆ ಇದು ಹೈದ್ರಾಬಾದ ಸಂಸ್ಥಾನದ ನಿಜಾಮ ಅರಸರು ನೇಮಿಸಿದ ನವಾಬ್ರ ಆಧೀನದಲ್ಲಿತ್ತು.
       ಮುಖ್ಯವೆಂದರೆ `ಕಲ್ಯಾಣ ಕ್ರಾಂತಿ'ಯ ಕಾಲದ ಯಾವುದೇ ಕುರುಹು ಹೇಗೆ ಉಳಿದಿಲ್ಲವೋ ಹಾಗೆಯೇ ನಂತರ ಆಳ್ವಿಕೆ ನಡೆಸಿದ ಅರಸರ ಕಾಲದಲ್ಲಿನ ವೈಭವವೂ ಇಂದು ನೋಡಲು ಸಿಗುವುದಿಲ್ಲ. ಅರಸರು, ಸಾಮಂತರು ಮತ್ತು ನವಾಬ್ರು ಕೇವಲ ಕೋಟೆಯ ಸಂರಕ್ಷಣೆ ಮಾತ್ರ ಮಾಡಿದ್ದಾರೆ. ಆದ್ದರಿಂದ ಅದನ್ನು ಬಿಟ್ಟರೆ ಹಿಂದಿನದು ಇಲ್ಲಿ ಏನೂ ಇಲ್ಲ. ಕೋಟೆ ಸಹ ಅನೇಕ ಸಲ ದುರುಸ್ತಿ ಮಾಡಿದ್ದರಿಂದ ಮೂಲ ರೂಪದಲ್ಲಿ ಇಲ್ಲದಿರುವುದು ಅದನ್ನು ನೋಡಿದಾಗ ಗೊತ್ತಾಗುತ್ತದೆ. ಇಲ್ಲಿ ಮುಸ್ಲಿಂ ಅರಸರು ಹೆಚ್ಚಿನ ಕಾಲ ಆಳ್ವಿಕೆ ನಡೆಸಿದ್ದರಿಂದ ಮಠ, ಮಂದಿರಗಳ  ಅಭಿವ್ರಧಿ  ಆಗಿರಲಿಕ್ಕಿಲ್ಲ ಎಂದೂ ಕೆಲವರು ಅಭಿಪ್ರಾಯಪಡುತ್ತಾರೆ. ಆದರೂ ಇಂದು ಬಸವಕಲ್ಯಾಣದ ಸುತ್ತ ಕೆತ್ತನೆಯ ಕಲ್ಲುಗಳು, ಮೂರ್ತಿಗಳು ಮತ್ತು ದೇವಾಲಯಗಳ ಅವಶೇಷಗಳು ದೊರೆಯುತ್ತವೆ. ಶಿವಪುರ, ಉಮಾಪುರ, ಮೋರಖಂಡಿಗಳಲ್ಲಿ ಭವ್ಯ ಶಿಲಾ ದೇಗುಲಗಳಿವೆ. ಇವು ಇಲ್ಲಿನ ಗತವೈಭವ ಸಾರುತ್ತವೆ ಎನ್ನಬಹುದು.
ಅಭಿವೃದ್ಧಿಯತ್ತ ದಾಪುಗಾಲು:
     ಹೀಗೆ ಕಲ್ಯಾಣ ಮಹತ್ವದ ಸ್ಥಳವಾದರೂ 20 ನೇ ಶತಮಾನದವರೆಗೂ ಇದರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಮಾತ್ರ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದವು. ವಚನ ಪಿತಾಮಹ ಫ.ಗು.ಹಳಕಟ್ಟಿಯವರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಬೆಳಕಿಗೆ ತಂದು ಮಹತ್ವದ ಕಾರ್ಯ ಮಾಡಿದರು. ಅದರಂತೆ ಸೊಲ್ಲಾಪುರದ ಬಾಬಾಸಾಹೇಬ್ ಮಲ್ಲಪ್ಪ ವಾರದ್ ಅವರು `ಕಲ್ಯಾಣದ ಕಂಪು' ಎಲ್ಲೆಡೆ ಹರಡಲು ಪ್ರಯತ್ನಿಸಿ ಮರೆಯಲಾಗದ ಕಾರ್ಯ ಮಾಡಿದ್ದಾರೆ. 1948 ರಲ್ಲಿ ಇಲ್ಲಿ ಬಸವೇಶ್ವರ ದೇವಸ್ಥಾನ ಪಂಚ ಸಮಿತಿ ಸ್ಥಾಪಿಸಿ ಶರಣ ಸ್ಮಾರಕಗಳ  ಅಭಿವ್ರಧಿ  ಮತ್ತು ಸಂರಕ್ಷಣೆ ಕೈಗೊಂಡರು. ಕೆಲ ದಾಖಲೆ ಹಾಗೂ ವಚನಗಳನ್ನು ಆಧಾರವಾಗಿಟ್ಟುಕೊಂಡು ಅಳಿದುಳಿದ ಮಠ, ಮಂದಿರ, ಗವಿಗಳಿಗೆ ಶರಣರ ಹೆಸರನ್ನು ಕೊಟ್ಟರು. ಬಸವಜಯಂತಿಗೆ ಜಾತ್ರೆ ಆರಂಭಿಸಿದರು. ಸರ್ಕಾರ್  ಕಲ್ಯಾಣಕ್ಕೆ `ಬಸವ ಕಲ್ಯಾಣ' ಎಂದು ನಾಮಕರಣ ಮಾಡುವಂತೆ ಮಾಡಿದರು.
     ಇದಲ್ಲದೆ ಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಮಾಡುವಲ್ಲಿ ಭಾಲ್ಕಿಯ ಲಿಂ.ಚನ್ನಬಸವ ಪಟ್ಟದ್ದೇವರು ಶ್ರಮಿಸಿದ್ದಾರೆ. ಮಾಜಿ ಸಚಿವರಾದ ಭೀಮಣ್ಣ ಖಂಡ್ರೆ, ವಿಶ್ವನಾಥರೆಡ್ಡಿ ಮುದ್ನಾಳ, ಮಾಜಿ ಉಪ ರಾಷ್ಟ್ರಪತಿ ಬಿ.ಡಿ.ಜತ್ತಿ, ಡಾ.ಬಿ.ವಿ.ಪಟೇಲ್, ಶಾಸಕರಾದ ಬಸವರಾಜ ಪಾಟೀಲ ಅಟ್ಟೂರ್, ಮಾಜಿ ಶಾಸಕರಾದ ಎಂ.ಜಿ.ಮುಳೆ, 
ಮಲ್ಲಿಕಾರ್ಜುನ್  ಖೂಬಾ, ಅನ್ನಪೂರ್ಣಾ ಬಾಯಿ ರಗಟೆ, ಸಿದ್ರಾಮಪ್ಪ ಖೂಬಾ, ಈಶ್ವರ ಖಂಡ್ರೆ ಭಾಲ್ಕಿ, ಚಿತ್ರದುರ್ಗ ಶಿವಮೂರ್ತಿ ಮುರುಘರಾಜೇಂದ್ರ ಶರಣರು, ಗದಗನ ಡಾ.ಸಿದ್ಧಲಿಂಗ ತೋಂಟದಾರ್ಯ ಜಗದ್ಗುರು, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಹುಲಸೂರು ಶಿವಾನಂದ ಸ್ವಾಮಿ, ಬೆಲ್ದಾಳ ಸಿದ್ಧರಾಮ ಶರಣರು, ವಿ.ಸಿದ್ಧರಾಮಣ್ಣ, ಭಾತಂಬ್ರಾ ಶಿವಯೋಗೇಶ್ವರ ಸ್ವಾಮಿ ಮುಂತಾದವರು ಇಲ್ಲಿನ ಪ್ರಗತಿ ಕಾರ್ಯದಲ್ಲಿ ಸಹಕರಿಸಿದ್ದಾರೆ. ಶರಣತತ್ವ ಪ್ರಸಾರಕ್ಕಾಗಿ ದುಡಿದಿದ್ದಾರೆ. 2001 ರಿಂದ ಈಚೆಗೆ ಇಲ್ಲಿನ ಶರಣ ಸ್ಮಾರಕಗಳ  ಅಭಿವ್ರಧಿಗೆ  ಉನ್ನತ ಮಟ್ಟದಲ್ಲಿ ಪ್ರಯತ್ನ ಆರಂಭವಾಯಿತು. ಬೆಂಗಳೂರಿನ ವೀರಶೈವ ಕ್ಷೇಮಾಭ್ಯುದಯ ಟ್ರಸ್ಟ್ನ ಅಧ್ಯಕ್ಷರು ಹಾಗೂ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ  ಎಸ್.ಬಿ.ಮುದ್ದಪ್ಪ ಅವರು `ಬಸವಣ್ಣನವರ ಅರಿವಿನ ಮನೆ'ಯ ಅಭಿವೃದ್ಧಿ ಕೈಗೆತ್ತಿಕೊಂಡರು.
ಅಭಿವೃದ್ಧಿ ಮಂಡಳಿ ರಚನೆ:
    2005 ರಲ್ಲಿ  ಸರ್ಕಾರ `ಬಸವಕಲ್ಯಾಣ ಅಭಿವೃದ್ಧಿ ಮಂಡಳಿ' ರಚಿಸಿದ್ದರಿಂದ ಮಂಡಳಿಯಿಂದ ಕೆಲಸ ಆರಂಭವಾಯಿತು. ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮದ ಅಭಿವೃದ್ಧಿ ಕೈಗೊಂಡ ನಂತರ ಅವರ ಕಾರ್ಯಕ್ಷೇತ್ರವಾದ `ಕಲ್ಯಾಣ'ದ ಕಡೆಗೆ ಸರ್ಕಾರ ವಿಶೇಷ ಲಕ್ಷ ವಹಿಸಿತು. ಕರ್ನಾಟಕ ಸರ್ಕಾರವು 1-11-2003 ರಂದು ಮಂಡಳಿ ರಚಿಸುವುದಾಗಿ ಘೋಷಿಸಿತು. ಈ ಸಂಬಂಧ ವರದಿ ಸಿದ್ಧವಾದ ನಂತರ 10-11-2004 ರಂದು ರಾಜ್ಯದ ರಾಜ್ಯಪಾಲರ ಅನುಮೋದನೆಯೊಂದಿಗೆ ಅಧ್ಯಾದೇಶವನ್ನು ಹೊರಡಿಸಲಾಯಿತು. ನಂತರ ವಿಧಾನ ಮಂಡಲದ ಉಭಯ ಸದನಗಳಲ್ಲಿ ವಿಧೇಯಕವನ್ನು ಮಂಡಿಸಿ 2-4-2005 ರಂದು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಅಧಿನಿಯಮ ಜಾರಿಗೆ ತರಲಾಯಿತು.
    ಮಂಡಳಿಗೆ ಮುಖ್ಯಮಂತ್ರಿಯವರು ಅಧ್ಯಕ್ಷರಾಗಿರುತ್ತಾರೆ. ಮಂಡಳಿಯಿಂದ 25-6-2006 ಮತ್ತು 8-11-2008 ರಂದು ಎರಡು ಸಭೆಗಳು ನಡೆದಿವೆ. ರಾಜ್ಯ ಹಣಕಾಸು ನಿಗಮದ ನಿರ್ದೆಶಕರಾದ ಡಾ.ಎಸ್.ಎಂ.ಜಾಮದಾರ ಅವರು ಮಂಡಳಿ ವಿಶೇಷಾಧಿಕಾರಿ ಆಗಿದ್ದಾರೆ. ಒಬ್ಬರು ಪ್ರತ್ಯೇಕ ಆಯುಕ್ತರಿದ್ದಾರೆ. ಮಂಡಳಿಯ ಕಾಮಗಾರಿ ಪುರಾತನ ಶೈಲಿಯಲ್ಲಿ ಹಾಗೂ ಶರಣ ತತ್ವಕ್ಕೆ ಅನುಗುಣವಾಗಿ ಕೈಗೊಳ್ಳುವ ಉದ್ದೇಶದಿಂದ ಸಲಹಾ ಸಮಿತಿ ಸಹ ರಚಿಸಲಾಗಿದೆ. ಡಾ.ಪಾಟೀಲ ಪುಟ್ಟಪ್ಪ (ಪತ್ರಕರ್ತರು, ಸಾಹಿತಿ) ಡಾ.ಎಸ್.ಶೆಟ್ಟರ್ (ಇತಿಹಾಸ ತಜ್ಞರು) ಡಾ.ಎ.ಸುಂದರ (ಪ್ರಾಚ್ಯವಸ್ತು ತಜ್ಞರು) ಡಾ.ಎಚ್.ಚಂದ್ರಶೇಖರ (ಭೂಗರ್ಭಶಾಸ್ತ್ರಜ್ಞರು) ಡಾ.ಎಂ.ಎನ್.ಜವರಯ್ಯ (ಸಾಹಿತಿ) ಡಾ.ಗೀತಾಂಜಲಿರಾವ (ಪುರಾತತ್ವ ಶಾಸ್ತ್ರಜ್ಞರು) ಅಶೋಕ (ಚಲನಚಿತ್ರ ನಟ) ಸಮಿತಿಯಲ್ಲಿದ್ದಾರೆ.
ಸ್ಮಾರಕರಗಳ ಕಾಮಗಾರಿ 
    ಪ್ರಥಮ ಹಂತದಲ್ಲಿ ಒಟ್ಟು 19 ಸ್ಮಾರಕಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಮಂಡಳಿಗೆ ಸರ್ಕಾರವು ಪ್ರಥಮವಾಗಿ 5 ಕೋಟಿ ರೂ. ಮೀಸಲಿಟ್ಟು ಅದರಲ್ಲಿ 50 ಲಕ್ಷ ರೂ. ಮಾತ್ರ ಬಿಡುಗಡೆ ಮಾಡಿತು. ನಂತರ 2006-07 ನೇ ಸಾಲಿನ ಬಜೆಟ್ನಲ್ಲಿ 20 ಕೋಟಿ ರೂ. ಕಾಯ್ದಿರಿಸಲಾಯಿತು. ಈಚೆಗೆ 32 ಕೋಟಿ ಮಂಜೂರು ಮಾಡಿದೆ. ಶರಣ ಸಾಹಿತ್ಯ ಸಂಶೋಧನಾ ಕೇಂದ್ರ ಹಾಗೂ ಗ್ರಂಥಾಲಯದ ಕಾಮಗಾರಿ ಪೂರ್ಣಗೊಂಡಿದ್ದು ಅದನ್ನು ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ  ಹಸ್ತಾಂತರಿಸಲಾಗಿದೆ. ಅಲ್ಲಮಪ್ರಭುದೇವರ ಗದ್ದುಗೆಮಠ, ಬಸವಣ್ಣನವರ ಅರಿವಿನ ಮನೆ, ಮಡಿವಾಳ ಮಾಚಿದೇವರ ಹೊಂಡ, ಜೇಡರ ದಾಸಿಮಯ್ಯನ ಮಠ, ಅಕ್ಕನಾಗಮ್ಮನ ಗವಿ, ನುಲಿ ಚಂದಯ್ಯನ ಗವಿ, ಕಂಬಳಿ ನಾಗಿದೇವನ ಮಠ, ಉರಿಲಿಂಗ ಪೆದ್ದಿ ಮಠ, ಸಮಗಾರ ಹರಳಯ್ಯನವರ ಗವಿ, ಅಂಬಿಗರ ಚೌಡಯ್ಯ ಗವಿ,  ವಿಜ್ಞಾನೇಶ್ವರ ಗುಹೆ, ಪಂಚಸೂತ್ರದ ಗವಿ, ಬಸವವನ, ಬಸವೇಶ್ವರ ದೇವಸ್ಥಾನ ಮುಂತಾದೆಡೆ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇವುಗಳಲ್ಲಿ ಕೆಲವೊಂದು ಪೂರ್ಣಗೊಂಡಿವೆ. 12-11-2010 ರಂದು ಇಲ್ಲಿ ನಡೆದ ಮಂಡಳಿಯ ತಜ್ಞರ  ಸಲಹಾ ಸಮಿತಿ ಸಭೆಯಲ್ಲಿ ಅನುಭವ ಮಂಟಪ ಪುನರ್ ನಿರ್ಮಾಣ ಮಾಡಲು ನಿರ್ಣಯಿಸಲಾಗಿದೆ.
     ಈಗಾಗಲೇ ಅಭಿವೃದ್ಧಿ ನಡೆಸಿದ ಎಲ್ಲ ಸ್ಮಾರಕಗಳ ಎದುರು ಚಾಲುಕ್ಯ ಶೈಲಿಯಲ್ಲಿ ಗ್ರಾನೈಟ್ ಕಲ್ಲಿನ ಭವ್ಯ ಹಾಗೂ ಸುಂದರ ಮಂಟಪಗಳನ್ನು ನಿರ್ಮಿಸಲಾಗಿದೆ. ಆಕರ್ಷಕ ಪ್ರವೇಶ ದ್ವಾರಗಳನ್ನು, ಸುತ್ತಲೂ ಆವರಣಗೋಡೆ, ಉದ್ಯಾನವನ ನಿರ್ಮಿಸಲಾಗಿದೆ. ಪ್ರವಾಸಿಗರ ಕೋಣೆಗಳನ್ನು ಕಟ್ಟಲಾಗಿದೆ. ತ್ರಿಪುರಾಂತ ಕೆರೆ ಅಭಿವೃದ್ಧಿಪಡಿಸಿ ಸುತ್ತಲೂ ಮಕ್ಕಳ ಉದ್ಯಾನ ನಿರ್ಮಿಸಲಾಗುತ್ತಿದೆ ವಿಶೇಷವಾಗಿ ನುಲಿ ಚಂದಯ್ಯ ಗವಿ, ಅಂಬಿಗರ ಚೌಡಯ್ಯ ಗವಿಯ ಪರಿಸರ ಸುಂದರವಾಗಿ ರೂಪುಗೊಂಡಿದೆ. ಬಂದವರ ಓಣಿ ಹತ್ತಿರದ ಗುಡ್ಡ ಗಿಡಗಂಟೆಗಳಿಂದ ಕಂಗೊಳಿಸುತ್ತಿದೆ. ಒಟ್ಟಾರೆ ಇಲ್ಲಿನ ಗವಿಗಳು ಮತ್ತು ಮಂದಿರಗಳು ಈಗ ಹೊಸ ರೂಪ ಪಡೆದುಕೊಂಡಿವೆ. ಬಸವಣ್ಣನ ಕಲ್ಯಾಣದಲ್ಲಿ ಕಲ್ಲರಳಿ ಹೂವಾಗುತ್ತಿವೆ. ಗತವೈಭವ ಸಾರಲು, ಶರಣತತ್ವದ ಕಂಪು ಎಲ್ಲೆಡೆ ಬೀರಲು. ಆದ್ದರಿಂದ ಕೆಲ ವರ್ಷಗಳಲ್ಲಿ  ಈ ಸ್ಥಳ  ಅಂತಾರಾಷ್ಟೀಯ ಮಟ್ಟದ ಪ್ರವಾಸಿ ತಾಣವಾಗಿ ಕಂಗೊಳಿಸಲಿದೆ. 
   -ಮಾಣಿಕ ಆರ್.ಭುರೆ(9845429001)

ಕಾಮೆಂಟ್‌ಗಳಿಲ್ಲ: